545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆಯನ್ನು ಸಂಪೂರ್ಣವಾಗಿ ಹುಡುಕಲಾಗಿದೆ. ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಅವರ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್ನಲ್ಲಿರುವ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 2 ವಾಹನಗಳಲ್ಲಿ ಶಾಂತಕುಮಾರ್ ಸಿನಿವಾಸಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ .
545 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆ ಜ್ಞಾನಜ್ಯೋತಿ ಶಾಲೆಯ ಹೆಡ್ಮಾಸ್ಟರ್ ಕಾಶಿನಾಥ್ ಅವರನ್ನು ಸಿಐಡಿ ಮತ್ತೆ ವಶಕ್ಕೆ ಪಡೆದಿದೆ.
ಅಕ್ರಮದಲ್ಲಿ ಸಿಲುಕಿ ಬಂಧಿತರಾಗಿರುವ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆ ಇದಾಗಿದೆ.
ಇನ್ನೊಂದೆಡೆ ತಾಜ್ ಸುಲ್ತಾನ್ಪುರ ರಸ್ತೆಯಲ್ಲಿರುವ ಕಾಶಿನಾಥ್ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದ ಅಕ್ರಮ ಸಂಬಂಧ ಕಾಶಿನಾಥ್ ಅವರನ್ನು ಮೇ 11 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜ್ಞಾನ ಜ್ಯೋತಿ ಶಾಲೆ ಅಲ್ಲದೆ , ಬೇರೆ ಪರೀಕ್ಷೆ ಕೇಂದ್ರದಲ್ಲಿನ ಅಕ್ರಮದಲ್ಲಿ ಕೂಡ ಭಾಗಿಯಾಗಿರುವ ಆರೋಪ ಇವರ ಮೇಲಿದೆ.
ಈ ಹಿನ್ನೆಲೆ ಸಿಐಡಿ ಅಧಿಕಾರಿಗಳು ಕಾಶಿನಾಥ್ ಅವರನ್ನು ಇಂದು ಮತ್ತೆ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಅಲ್ಲದೆ , ಕಾಶಿನಾಥ್ ಅವರನ್ನು 7 ದಿನಗಳ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.