ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ತುಮಕೂರು ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ ಬಳಿಕ ಅವರ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗದಂತೆ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯವು ಅವಕಾಶ ಕಲ್ಪಿಸಿದೆ.
ಒಟ್ಟು 27 ವಿದ್ಯಾರ್ಥಿಗಳು ಯುದ್ಧಾತಂಕದ ಬಳಿಕ ಭಾರತಕ್ಕೆ ಮರಳಿದ್ದರು. ಈ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನೆರವಿಗೆ ಧಾವಿಸಿದ್ದಾರೆ. ಮಠದ ಕಾಲೇಜಿನಲ್ಲಿ 16 ವಿದ್ಯಾಥಿರ್ಗಳಿಗೆ ಪ್ರಾಯೋಗಿಕ ತರಗತಿ, ಗ್ರಂಥಾಲಯ ಸೇರಿದಂತೆ ಅಗತ್ಯ ನೆರವು ನೀಡಿ ಕ್ಲಿನಿಕಲ್ ಸಪೋರ್ಟ್ ಸಿಗುವಂತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ವೈದ್ಯಕೀಯ ಕೋರ್ಸ್ಗೆ ಪೂರಕ ಹಾಗೂ ಬೆಂಬಲವಾಗಿ ಕಾಲೇಜು ಸಿಬ್ಬಂದಿ ನಿಂತಿದ್ದಾರೆ. ಈ ಮಕ್ಕಳ ಮುಂದಿನ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ಸರ್ಕಾರವೇ ನಿರ್ಧರಿಸಲಿದೆ.
ಉಕ್ರೇನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆತಂದಿದ್ದು ಅವರ ವಿದ್ಯಾಭ್ಯಾಸ ಮೊಟಕಾಗಬಾರದು ಎನ್ನುವ ಉದ್ದೇಶದಿಂದ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ಸಿದ್ದಲಿಂಗ ಶ್ರೀಗಳು ಮಾಹಿತಿ ನೀಡಿದ್ದಾರೆ.