ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಅಸಂಖ್ಯಾತ ಯೋಧರು, ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದು, ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಜೈಪುರ್ ಫಂಟ್ ಸಂಸ್ಥೆಯು ಉಕ್ರೇನಿನಲ್ಲಿ ಅಂಗಾಂಗ ಜೋಡಣೆಯ ಶಿಬಿರ ಆಯೋಜಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಸಂಸ್ಥೆಯ ಮುಖ್ಯಸ್ಥ ಪ್ರೇಮ್ ಭಂಡಾರಿ ಹಾಗೂ ಜಂಟಿ ಕಾರ್ಯದರ್ಶಿ ನಿಶಾಂತ್ ಅವರು ಶಿಬಿರ ನಡೆಸಲು ಅನುಮತಿಗಾಗಿ ನ್ಯೂಯಾರ್ಕ್ನಲ್ಲಿರುವ ಉಕ್ರೇನಿನ ರಾಯಭಾರಿ ಓಲೆಸ್ಕಿ ಹೊಲುಬೊವ್ ಅವರನ್ನು ಭೇಟಿಯಾಗಿದ್ದಾರೆ.
ಆದರೆ ಪ್ರಸ್ತುತ ಉಕ್ರೇನಿನಲ್ಲಿ ರಷ್ಯಾ ತೀವ್ರ ದಾಳಿ ನಡೆಸುತ್ತಿದ್ದು, ಸಂಘರ್ಷವಲಯದಲ್ಲಿ ಶಿಬಿರವನ್ನು ಆಯೋಜಿಸುವುದು ಕಷ್ಟ. ಹೀಗಾಗಿ ಉಕ್ರೇನಿನ ನೆರೆಯ ರಾಷ್ಟ್ರಗಳಾದ ಪೊಲೆಂಡಿನಲ್ಲಿ ಅಂಗಾಂಗ ಜೋಡಣಾ ಶಿಬಿರ ಆಯೋಜಿಸುವ ಯೋಜನೆ ಹಾಕಿಕೊಳ್ಳುತ್ತಿದ್ದೇವೆ ಎಂದು ಭಂಡಾರಿ ತಿಳಿಸಿದ್ದಾರೆ.
ಪದ್ಮ ಭೂಷಣ ಪುರಸ್ಕೃತ ಡಿ. ಆರ್. ಮೆಹತಾ ಅವರು ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿಯನ್ನು ಆರಂಭಿಸಿದ್ದರು. ಇದು ಜೈಪುರ್ ಫಂಟ್ನ ಮಾತೃಸಂಸ್ಥೆಯಾಗಿದೆ.
ಈ ಸಮಿತಿಯು ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕದ 33 ದೇಶಗಳಲ್ಲಿ ಒಟ್ಟು 85 ಅಂತಾರಾಷ್ಟ್ರೀಯ ಅಂಗಾಂಗ ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದೆ. 1.9 ಲಕ್ಷ ಜನರಿಗೆ ಈವರೆಗೆ ಅಂಗಾಂಗ ಜೋಡಣೆ ಮಾಡಿದ ಹಿರಿಮೆ ಹೊಂದಿದೆ.