ವಿಫಲವಾದ ಪರಿವರ್ತಕಗಳನ್ನು 24 ಗಂಟೆಗಳಲ್ಲಿ ಬದಲಾವಣೆಗೆ ಕ್ರಮವಹಿಸುವಂತೆ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೂತನ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಸಾಲಿನ ಸೆಪ್ಟೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 14,464 ಪರಿವರ್ತಕಗಳು ವಿಫಲಗೊಂಡಿದೆ. ಈ ಪೈಕಿ 24 ಗಂಟೆಗಳಲ್ಲಿ 11060 ಪರಿವರ್ತಕಗಳನ್ನು ಮಾತ್ರ ಬದಲಾವಣೆ ಮಾಡಲಾಗಿದೆ.
24 ಗಂಟೆಗಳ ನಂತರ 3501 ಹಾಗೂ ಬಾಕಿ 99 ಉಳಿದಿವೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸುವ ಅಗತ್ಯವಿದೆ ಎಂದರು.
ಪರಿವರ್ತಕಗಳ ಬದಲಾವಣೆಗೆ ಟಿಸಿ ಬ್ಯಾಂಕ್, ವೆಹಿಕಲ್ ನೀಡಲಾಗಿದೆ. 24 ಗಂಟೆಗಳಲ್ಲಿ ಬಲಾಯಿಸಲು ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ಬದಲಾವಣೆಗೊಳಿಸುವಲ್ಲಿ ಆಗುವ ತೊಂದರೆಗಳ ಬಗ್ಗೆ ಪರಿಹಾರ ಕಂಡುಕೊಂಡು ನಿಗದಿತ ವೇಳೆಯಲ್ಲಿ ಪರಿವರ್ತಕಗಳ ಬಲಾವಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪರಿವರ್ತಕಗಳ ಬಲಾವಣೆಯಲ್ಲಿ ವಿಳಂಬ ದೋರಣೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪರಿವರ್ತಕಗಳನ್ನು ಹಾಳಾಗದಂತೆ ನಿರ್ವಹಣೆಗೆ 10 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲು ತಿಳಿಸಿದರು.
ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಪಂಚಾಯತಿಯಿಂದ ಎನ್ಓಸಿ ಪಡೆದುಕೊಳ್ಳುವುದು ಕಡ್ಡಾಯವಲ್ಲ. ಈ ಪೈಕಿ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ ಇದ್ದರೆ ಸಾಕು. ತೋಟದ ಮನೆಗಳಿಗೆ ಈ ಯೋಜನೆ ಅನ್ವಯವಾಗುವದಿಲ್ಲವೆಂದು ಸ್ಪಷ್ಟಪಡಿಸಿದರು.
ಶಾಲಾ ಕಾಲೇಜುಗಳ ವಿದ್ಯುತ್ ಅಪಾಯಕಾರಿ ಸ್ಥಳಗಳನ್ನು ಬದಲಾವಣೆಗೆ ಈ ಮಾಹೆಯ ಅಂತ್ಯದೊಳಗೆ ಕ್ರಮವಹಿಸಬೇಕು ಎಂದರು. ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ನೋಂದಣಿ ದಿನಾಂಕದಿಂದ ಒಂದು ತಿಂಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲವಾಗಬೇಕು ಎಂದರು.
ವಿದ್ಯುತ್ ಕುಂದು ಕೊರತೆ ನಿವಾರಣೆಗೆ ವಿದ್ಯುತ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ತರುವ ದೂರುಗಳ ನಿವಾರಣೆಗೆ ಎಲ್ಲ ರೀತಿಯಿಂದ ಸಿದ್ದತೆ ಮಾಡಿಕೊಳ್ಳಲು, ಸಮಸ್ಯೆ ಬೇಗನೇ ಪರಿಹರಿಸುವಂತಾಗಬೇಕು. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕ, ಹೊಸ ಕನೆಕ್ಷನ್, ಕುಡಿಯುವ ನೀರು, ಟಿಸಿ ಬದಲಾವಣೆ ಸೇರಿದಂತೆ ಯಾವುದೇ ರೀತಿಯ ದೂರು ಬರದಂತೆ ಕ್ರಮವಹಿಸಿ ಇಲಾಖೆಯಲ್ಲಿ ಸುಧಾರಣೆ ತರುವ ಕೆಲಸವಾಗಬೇಕು ಎಂದರು.
ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಎಲ್ಲ ಕಾಮಗಾರಿಗಳು ಬರುವ ಡಿಸೆಂಬರ್ ತಿಂಗಳ ಒಳಗಾಗಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕು. ಬರುವ ಜೂನ್ ಮಾಹೆಯಿಂದ ಮಳೆಗಾಲ ಆರಂಭಗೊಳ್ಳಲಿದೆ. ವಿದ್ಯುತ್ ಸಂಪರ್ಕಕ್ಕೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.
ಟಿಸಿ ರಿಪೇರಿ, ಐಪಿ ಸೆಟ್ನಲ್ಲಿ ನಿರ್ವಹಣೆ ಮಾಡಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಚೆನ್ನಾಗಿ ಕೆಲಸ ನಿರ್ವಹಿಸಿ, ಸಭೆಯಲ್ಲಿ ನೀಡಲಾದ ನಿರ್ದೇಶನಗಳನ್ನು ತಮ್ಮ ಕೆಳ ಹಂತದ ನೌಕರರಿಗೆ ತಲುಪಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಕಾರ್ಯ ಮಾಡಲು ತಿಳಿಸಿದರು.
ಸಭೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ, ಕೆಪಿಟಿಸಿಎಲ್ನ ನಿರ್ದೇಶಕ ಜಿ.ಆರ್.ಚಂದ್ರಶೇಖರಯ್ಯ, ಮುಖ್ಯ ಇಂಜಿನೀಯರ್ ಎಸ್.ವಿ.ಮಂಜುನಾಥ, ಕಾರ್ಯನಿರ್ವಾಹಕ ಇಂಜಿನೀಯರ್ ಕೆ.ಎ.ಆನಂದ, ಅಧೀಕ್ಷಕರ ಅಭಿಯಂತರ ಜಿ.ಕೆ.ಗೊಟ್ಯಾಳ, ಹೆಸ್ಕಾಂ ಡಿಟಿ ಎ.ಎನ್.ಕಾಂಬಳೆ, ಡಿಎಫ್ಓ ಬಿ.ಮಂಜುನಾಥ, ಪೈನಾನ್ಸ್ ಅಡವೈಜರ್ ಮಂಜಪ್ಪ, ಮುಖ್ಯ ಅಭಿಯಂತರ ಹೆಬ್ಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.