ಕರ್ನಾಟಕದ ಇತಿಹಾಸದಲ್ಲಿ ಸಾಗರ ತಾಲೂಕಿನ ಕೆಳದಿ ತನ್ನದೇ ಆದಂತಹ ಖ್ಯಾತಿಯನ್ನು ಪಡೆದಿದೆ. ಕೆಳದಿ ರಾಣಿ ಚೆನ್ನಮ್ಮ ಅವರ ಪಟ್ಟಾಭಿಷೇಕ ನಡೆದು 2022 ಫೆಬ್ರವರಿ 27 ಕ್ಕೆ 350 ವರ್ಷಗಳು ತುಂಬುತ್ತದೆ. ಆ ದಿನವನ್ನು ಉತ್ಸವದ ದಿನ ಎಂದು ರಾಣಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕೆಳದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಸರ್ಕಾರ ಕೆಳದಿ ಉತ್ಸವಕ್ಕಾಗಿ 25 ಲಕ್ಷ ರೂಪಾಯಿ ನೀಡಿದೆ. ಆ ಹಣದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ಹರತಾಳು ಹಾಲಪ್ಪ ಅವರು ಹೇಳಿದರು.
ಸರ್ಕಾರ 3 ದಿನಗಳ ಹಿಂದೆ 25 ಲಕ್ಷ ರೂಪಾಯಿ ಹಣವನ್ನು ನೀಡಿದೆ. ಅದನ್ನ ಸಮರ್ಪಕವಾಗಿ ಬಳಸಿಕೊಂಡು ಉತ್ಸವ ಮಾಡುವುದು ಸೂಕ್ತ ಎಂದು ನಿರ್ಧರಿಸಿದ್ದೇವೆ. ಕೆಳದಿ ಉತ್ಸವಕ್ಕೆ ಹಣವನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

ಉತ್ಸವದಲ್ಲಿ ಕೆಲವೇ ಜನರು ಭಾಗವಹಿಸಿದ್ದರು ಅವರಿಗೆ ಅಭಿನಂದನೆ ತಿಳಿಸುತ್ತೇನೆ. ವರ್ಷದಲ್ಲಿ ಕೆಳದಿ ಸಾಗರ ಇಕ್ಕೇರಿ ಸಾಧ್ಯವಾದರೆ ನಗರ ಒಂದೊಂದು ಕಡೆ ಕೆಳದಿ ಉತ್ಸವವನ್ನು ಆಚರಿಸುವ ಬಗ್ಗೆ ಚರ್ಚೆಯಾಗಿದೆ ನಾಲ್ಕು ವರ್ಷಕ್ಕೊಮ್ಮೆ ಅದ್ದೂರಿ ಉತ್ಸವ ಆಚರಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಾಲ್ಕು ವರ್ಷದ ಅವಧಿಯಲ್ಲಿ ರಾಣಿ ಚೆನ್ನಮ್ಮ ಹಾಗೂ ಅವರ ಆದರ್ಶಗಳ ಬಗ್ಗೆ ಮಕ್ಕಳಿಗೆ ಶಾಲೆಗಳಲ್ಲಿ, ಜನಸಾಮಾನ್ಯರಿಗೆ ಹೇಳುವ ಜಾಗೃತಿ ಕಾರ್ಯಕ್ರಮಗಳು ಆಗಬೇಕಿದೆ ಎಂದು ಸಚಿವರು ಕೆ-ಲೈವ್ ಮೀಡಿಯಾಗೆ ತಿಳಿಸಿದರು.
ಕೆಳದಿ ಉತ್ಸವದಲ್ಲಿ ಭಾಗವಹಿಸಿದ ಕನ್ನಡ ಪೂಜಾರಿ ಎಂದೇ ಖ್ಯಾತಿಯಾಗಿರುವ ಹಿರೇಮಗಳೂರು ಕಣ್ಣನ್ ಅವರು ಕೆಳದಿಯ ವೀರಭದ್ರೇಶ್ವರ ದೇವಾಲಯದಲ್ಲಿ ಸಾಮೂಹಿಕವಾಗಿ ಕನ್ನಡದ ಮಂತ್ರಗಳನ್ನು ಎಲ್ಲರಿಗೂ ಹೇಳಿಕೊಟ್ಟಿದ್ದು ಒಂದು ವಿಶೇಷವಾಗಿತ್ತು.
ಕಾಲು ಪ್ರಕೃತಿ, ಗಜ್ಜೆ ಸಂಸ್ಕೃತಿ. ಕೈ ಪ್ರಕೃತಿ, ಬಳೆ ಸಂಸ್ಕೃತಿ. ಹಣೆ ಪ್ರಕೃತಿ, ಬೊಟ್ಟು ಸಂಸ್ಕೃತಿ. ಶ್ವಾಸ ಪ್ರಕೃತಿ, ವಿಶ್ವಾಸ ಸಂಸ್ಕೃತಿ. ಕೆಳದಿ ಪ್ರಕೃತಿ, ಹಾಲಪ್ಪ ಅವರಿಂದ ಹಾಕುವ ಕಾರ್ಯ ಸಂಸ್ಕೃತಿಯೆಂದು ಹಿರೇಮಗಳೂರು ಕಣ್ಣನ್ ಶಾಸಕ ಹಾಲಪ್ಪನವರ ಕ್ರಿಯಾಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೆಳದಿ ರಾಜಗುರು ಹಿರೇಮಠದ ಪೂಜ್ಯಶ್ರೀಗಳು, ಮುರುಘಾಮಠದ ಪೂಜ್ಯಶ್ರೀ.ಡಾ. ಮಲ್ಲಿಕಾರ್ಜುನಾ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಿರೇಮಗಳೂರು ಕಣ್ಣನ್ ಅವರು, ಎಸಿ, ತಹಶೀಲ್ದಾರ್, ಇಓ, ಟಿ.ಡಿ.ಮೇಘರಾಜ್, ರಮೇಶ್ ಹಾರೆಗೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಲೋಕನಾಥ್ ಬಿಳಿಸಿರಿ, ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.