ಕೊರೋನಾ ತಂದ ಬದಲಾವಣೆಯಿಂದ ಈ ಬಾರಿ ಬಜೆಟ್ ಮಂಡನೆಯ ಸ್ವರೂಪದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಮೊಟ್ಟಮೊದಲ ಬಾರಿಗೆ ಬಜೆಟ್ ಮುದ್ರಣ ಗೊಳ್ಳುತ್ತಿಲ್ಲ. ಇದರ ಬದಲಾಗಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಆಪ್ನಲ್ಲಿ ಸಂಸತ್ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ.
ಕೇಂದ್ರ ಸರ್ಕಾರ ಕೃಷಿಯಲ್ಲಿ ಡ್ರೋನ್ ಗಳ ಬಳಕೆ, ರಾಸಾಯನಿಕ ಮುಕ್ತ ಸಹಜ ಕೃಷಿ ಪದ್ಧತಿ ಮತ್ತು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲಿದೆ.
ಹಂತಹಂತವಾಗಿ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ ಎನ್ನುವ ರೈತ ಸಂಘಟನೆಗಳ ಅನುಮಾನ ನಿವಾರಿಸುವ ಪ್ರಯತ್ನವನ್ನು ಮುಂಗಡಪತ್ರದಲ್ಲಿ ನೀಡಲಾಗಿದೆ.
ಏಪ್ರಿಲ್ 2022 ರಿಂದ ಮಾರ್ಚ್ 2023ರ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮೂಲಕ ಭತ್ತ ಮತ್ತು ಗೋಧಿ ಖರೀದಿಸಲು 2.37 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಘೋಷಿಸಲಾಗಿದೆ. ಎಂ ಎಸ್ ಪಿ ಮೂಲಕ ಖರೀದಿಸಲಾದ ಬೆಳೆಗಳಿಗೆ ಪ್ರತಿಯಾಗಿ ರೈತರ ಖಾತೆಗಳಿಗೆ ಅನುದಾನವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ವಿಧಾನಸಭೆ ಚುನಾವಣೆ ನಡೆಸಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಭತ್ತ, ಗೋಧಿ ಪ್ರಮುಖ ಬೆಳೆಗಳಾಗಿರುವುದು ವಿಶೇಷ. ದೇಶದಾದ್ಯಂತ 2021-22 ನೇ ಸಾಲಿನಲ್ಲಿ 163 ಲಕ್ಷ ರೈತರಿಂದ 1,208 ಲಕ್ಷ ಟನ್ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ.
ಸರ್ವರನ್ನು ಒಳಗೊಂಡ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಗುರಿಯಾಗಿದೆ. ಅದರ ಭಾಗವಾಗಿಯೂ ಕೃಷಿಯಲ್ಲಿ ಕಿಸಾನ್ ಡ್ರೋನ್ ಗಳ ಬಳಕೆಗೆ ಉತ್ತೇಜನ ನೀಡಲಾಗಿದೆ. ಬೆಳೆ ಮೌಲ್ಯಮಾಪನ, ಭೂದಾಖಲೆಗಳ ಡಿಜಿಟಲೀಕರಣ ಮತ್ತು ಕೀಟನಾಶಕಗಳ ಸಿಂಪಡಣೆ ಗೆ ಈ ಡ್ರೋನ್ ಗಳನ್ನು ಬಳಸುವುದು ಸರ್ಕಾರದ ಆಶಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಗ್ರಾಮ ರಸ್ತೆ ನಿರ್ಮಾಣಕ್ಕೂ ಹೆಚ್ಚು ಒತ್ತನ್ನು ನೀಡಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ನೀಡುವ ಅನುದಾನವನ್ನು ಶೇ. 36 ರಷ್ಟು ಹೆಚ್ಚಳ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಈ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ. ಮತ್ತೊಂದು ವಿಶೇಷವೇನೆಂದರೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ನ ಗ್ರಾಮೀಣ ಪ್ರದೇಶದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. 2021-22 ನೇ ಸಾಲಿನಲ್ಲಿ ಯೋಜನೆಗೆ 14,000 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯಕ್ಕೆ ನಿಗದಿಪಡಿಸಿರುವ ಅನುದಾನದಲ್ಲಿ ಶೇ.11 ರಷ್ಟು ಕಡಿತ ಮಾಡಲಾಗಿದೆ. ಇದರಿಂದ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಗಳಿಗೆ ನೀಡುವ ಅನುದಾನದಲ್ಲಿ ಗಣನೀಯವಾಗಿ ಕಡಿತವಾಗಲಿದೆ.
ಇದರೊಂದಿಗೆ ಜಲಶಕ್ತಿ ಅನುದಾನ ಹೆಚ್ಚಳವಾಗಿದೆ. ಜಲಶಕ್ತಿ ಸಚಿವಾಲಯಕ್ಕೆ 86,189 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.
2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹ ರೂಪಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಸಿರಿಧಾನ್ಯಗಳಿಗೆ ಕಟಾವು ನಂತರದ ಸಂಸ್ಕರಣೆಗೆ ಬೆಂಬಲ ನೀಡುವ ಯೋಜನೆಗಳನ್ನು ರೂಪಿಸಲಾಗುತ್ತದೆ. ಇನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಗಳಿಗೆ 6,75,000 ಕೋಟಿ ರೂಪಾಯಿ, ಬೆಳೆ ವಿಮೆ ಯೋಜನೆಗೆ 15,500 ಕೋಟಿ ರೂಪಾಯಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಗೆ 10,433 ಕೋಟಿ ರೂಪಾಯಿ , ಬೆಲೆ ಬೆಂಬಲ ಯೋಜನೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶಕ್ಕೆ 1,500 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.
ಕೃಷಿ ಸಾಲವನ್ನು ಗಣನೀಯವಾಗಿ ಹೆಚ್ಚು ಮಾಡಲಾಗಿದೆ. ಕೃಷಿ ಸಾಲದ ಪ್ರಮಾಣವನ್ನು 16.50 ಲಕ್ಷ-ಕೋಟಿ ರೂಪಾಯಿಗಳಿಂದ 18 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನಿಗದಿಯಾಗಿದ್ದ ಮೊತ್ತದ ಪೈಕಿ ಶೇ.75 ರಷ್ಟು ಮೊತ್ತವನ್ನು ರೈತರಿಗೆ ವಿತರಿಸಲಾಗುತ್ತದೆ ಅದರಲ್ಲೂ ಮೊದಲ ತ್ರೈಮಾಸಿಕದಲ್ಲಿಯೇ 7.36 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಬಜೆಟ್ ಮಂಡನೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.