2021 -22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.
ಈ ಕುರಿತು ಆರ್ಥಿಕ ತಜ್ಞ ನಿವೃತ್ತ ಪ್ರಾಧ್ಯಾಪಕ ಬಿ.ಎಮ್. ಕುಮಾರಸ್ವಾಮಿಯವರು ಕೆಲೈವ್ ನ್ಯೂಸ್ ನೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಐದು ರಾಜ್ಯಗಳಲ್ಲಿ ಚುನಾವಣೆ ಇರುವ ಕಾರಣ ಜನರು ಬೇರೆಯೇ ರೀತಿಯ ಬಜೆಟ್ ನಿರೀಕ್ಷೆಯಲ್ಲಿದ್ದರು. ಬಹಳ ಅಗ್ಗದ ಹಾಗೂ ಜನಪ್ರಿಯ ಬಜೆಟ್ ಇದಾಗಿಲ್ಲ.
ಇದು ಮೋದಿಯವರ ಬಜೆಟ್ ಆದ್ದರಿಂದ ಬಜೆಟ್ ಮಂಡನೆ ಯನ್ನು ಕೇಳುತ್ತಾ ಇದ್ದಾಗಲೇ ಐದು ರಾಜ್ಯಗಳಲ್ಲಿ ಚುನಾವಣೆ ಇದೆ ಎಂದು ಅನಿಸಲೇ ಇಲ್ಲ. ಚುನಾವಣೆ ಮತ್ತು ಅಧಿಕಾರವನ್ನು ಬಿಟ್ಟು ದೇಶದ ಹಿತದೃಷ್ಟಿಯನ್ನು ನೋಡಿ ಬಜೆಟ್ ಮಂಡಿಸಲಾಗಿದೆ.
ಜನಪ್ರಿಯತೆ ಮುಖ್ಯವಲ್ಲ. ದೇಶದ ಹಿತ ಮುಖ್ಯವೆಂಬ ದೃಷ್ಟಿಯಿಂದ ಬಜೆಟ್ ಮಂಡಿಸಿದ್ದಾರೆ. ತೆರಿಗೆದಾರರು, ಸರ್ಕಾರಿ ನೌಕರರು ಮತ್ತು ವ್ಯವಹಾರಸ್ಥರು ತೆರಿಗೆ ವಿನಾಯಿತಿ ನಿರೀಕ್ಷೆ ಮಾಡಿದ್ದರು. ಆದರೆ ಸರ್ಕಾರಕ್ಕೆ ಕೊರೊನಾ ಸಮಯ. ಆದ್ದರಿಂದ ಸರ್ಕಾರಕ್ಕೆ ಯಾವ ಆದಾಯವೂ ಇಲ್ಲ. ಅವರಿಗೂ ಕಷ್ಟವಾಗಿದೆ. ಆದ್ದರಿಂದ ಈ ಸಮಯದಲ್ಲಿ ತೆರಿಗೆವಿನಾಯಿತಿ ಕೇಳುವುದು ಯಾವುದೇ ಹೊಣೆಗಾರಿಕೆಯುಳ್ಳ ನಾಗರಿಕತನವಾಗುವುದಿಲ್ಲ.
ಹಾಗಾಗಿ ನೇರ ತೆರಿಗೆ, ಪರೋಕ್ಷ ತೆರಿಗೆ ಬಗ್ಗೆ ಪ್ರಸ್ತಾಪ ಮಾಡಿಲ್ಲ.
ದೀರ್ಘಾವಧಿ ದೃಷ್ಟಿಯಿಂದ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡುವುದು, ಆರ್ಬಿಐ ಮೂಲಕ ಡಿಜಿಟಲ್ ಕರೆನ್ಸಿ ರೂಪಿಸುವುದು, 5ಜಿ ತರಂಗಕ್ಕೆ ಈ ವರ್ಷವೇ ಪ್ರಕ್ರಿಯೆ ಪ್ರಾರಂಭಿಸುವುದು, ಒಂದು ಡಿಜಿಟಲ್ ಯೂನಿವರ್ಸಿಟಿ ಸ್ಥಾಪಿಸುವುದು, ಇವೆಲ್ಲ ಮುಂದಿನ 25 ವರ್ಷಕ್ಕೆ ಭಾರತ ಬಲಿಷ್ಠ ದೇಶ ಆಗುವ ಸಲುವಾಗಿ ಮಾಡಿದ್ದಾರೆ.
ಆದರೆ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಕ್ಷಣಿಕ ಲಾಭದಿಂದ ಮಾಡಿಲ್ಲ. ಇದು ದೇಶದ ದೀರ್ಘಾವಧಿ ಭವಿಷ್ಯವನ್ನು ನೋಡಿ ಮಾಡಿರುವ ಬಜೆಟ್ ಮಂಡನೆಯೇ ಹೊರತು, ಐದು ರಾಜ್ಯಗಳ ಚುನಾವಣೆ ನೋಡಿ ಮಾಡಿರುವುದಿಲ್ಲ.
ಒಟ್ಟಾರೆಯಾಗಿ ಇದು ದೇಶದ ಹಿತಕ್ಕಾಗಿ ಮಾಡಿರುವ ಬಜೆಟ್ ಎಂದು ಅವರು ತಿಳಿಸಿದರು.