“ದೇಶದ ಭವ್ಯತೆ, ಹಿರಿಮೆ, ಗರಿಮೆ ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ” ಎಂದು ಶ್ರೀರಂಜಿನಿ ದತ್ತಾತ್ರಿಯವರು ತಿಳಿಸಿದರು.
ನಮ್ಮ ಮಕ್ಕಳಿಗೆ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಬಗ್ಗೆ, ನಮ್ಮ ದೇಶದ ಯೋಧರ ಬಗ್ಗೆ, ನಮ್ಮ ದೇಶದ ಇತಿಹಾಸ, ಸಂಸ್ಕೃತಿಗಳ ಬಗ್ಗೆ, ಭವ್ಯ ಭಾರತದ ಬಗ್ಗೆ ತಿಳಿಯುವ ಅಧ್ಯಯನಶೀಲತೆ ಬರಬೇಕು. ಈ ದೇಶವನ್ನು ಮುನ್ನಡೆಸುವ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳು ಈ ದೇಶದ ಸಮಗ್ರತೆ, ಈ ದೇಶದ ಅಭಿವೃದ್ಧಿ ಬಗ್ಗೆ ಕಲ್ಪನೆಯನ್ನು ಇಟ್ಟುಕೊಂಡು ಸಾಗಬೇಕು ಎಂಬುದೇ ಆಗಿದೆ. ಈ ದೇಶದ ನಿಜವಾದ ಇತಿಹಾಸವನ್ನು ಅದೆಷ್ಟೋ ಪುಸ್ತಕಗಳಲ್ಲಿ, ದಾಖಲೆಗಳಲ್ಲಿ ತಿರುಚಲಾಗಿದೆ.ನಿಜವಾದ ಇತಿಹಾಸ ನೇಪಥ್ಯದತ್ತ ಸಾಗಿದೆ.
ಮಕ್ಕಳು ಶಾಲಾ ಪುಸ್ತಕ ಹೊರತುಪಡಿಸಿ ಇತರ ಅಮೂಲ್ಯ ಪುಸ್ತಕಗಳ ಓದುವಿಕೆಯಿಂದ ದೂರ ಸರಿಯುತ್ತಿರುವುದು ಆತಂಕದ ವಿಷಯ ಎಂದರು..ಈ ದಿಸೆಯಲ್ಲಿ 73 ನೇ ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಈ ದೇಶದ ಭವ್ಯತೆ, ಈ ದೇಶದ ಹಿರಿಮೆ, ಗರಿಮೆಗಳನ್ನು ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ಅತ್ಯಗತ್ಯ. ಚರಿತ್ರೆಯ ಅಧ್ಯಯನವೆಂದರೆ ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು ಅಂಕಗಳಿಸಲು ಓದುವುದಷ್ಟೇ ಆಗಬಾರದು. ಮೊಬೈಲ್ ಗೀಳಿನಿಂದ ಹೊರಬಂದು ಅಮೂಲ್ಯ ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಂಡು ನಮ್ಮ ಪೂರ್ವಜರು ಸಾಧಿಸಿದ ಗೆಲುವುಗಳು, ನಡೆಸಿದ ಹೋರಾಟಗಳು, ರಾಷ್ಟ್ರ ಜೀವನದಲ್ಲಿ ತಲೆದೋರಿದ ತಿರುವುಗಳು, ಕೋಟೆ ಕೊತ್ತಲಗಳು, ನದಿ, ಬೆಟ್ಟ, ಪರ್ವತಗಳ ಕುರಿತು ತಿಳಿದುಕೊಳ್ಳುವತ್ತ ನಮ್ಮ ಚಿತ್ತ ಸಾಗಬೇಕು.
ಈ ನಾಡಿನ ಸ್ವಾತಂತ್ರ್ಯ ಹೋರಾಟಗಾರ ಧೋಂಡಿಯಾ ವಾಘ್ ರ ಕಥನವನ್ನು ಹೇಳುತ್ತ, ಎಲ್ಲರ ಚಿತ್ತ ಭಿತ್ತಿ ಯಿಂದ ಮರೆಯಾದ ಇಂತಹ ಸಾವಿರಾರು ದೇಶಭಕ್ತರ ಬಗ್ಗೆ ಸಂಶೋಧನೆ ನಡೆಸಿ ಬೆಳಕು ಚೆಲ್ಲಬೇಕಾದ ಅವಶ್ಯಕತೆ ಬಗ್ಗೆ ವಿವರಿಸಿದರು.
ಧೋಂಡಿಯಾರು ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಂಘಟನೆ, ಹೋರಾಟದ ಪರಿಕಲ್ಪನೆಯನ್ನು ಲೇಖಕಿ, ಭಾಷಣಗಾರ್ತಿ ಶ್ರೀರಂಜಿನಿ ದತ್ತಾತ್ರಿ ತೆರೆದಿಟ್ಟರು.
73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಹ್ಯಾದ್ರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮಕ್ಕಳಿಗೆ ” ನನ್ನ ನೆಚ್ಚಿನ ಸ್ವಾತಂತ್ರ್ಯ ಯೋಧ” ಎಂಬ ವಿಚಾರವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಕುಮಾರಸ್ವಾಮಿಯವರು ಅಧ್ಯಕ್ಷತೆವಹಿಸಿ ನಮ್ಮ ದೇಶದ ಮೇಲೆ ಮೊಗಲರು, ಬ್ರಿಟೀಷರು ಪರಕೀಯರು ನಡೆಸಿದ ಧಾಳಿ ಬಗೆದಷ್ಟು ಸಿಗುತ್ತಾ ಹೋಗುತ್ತದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ” ನನ್ನ ನೆಚ್ಚಿನ ದೇಶಭಕ್ತ” ಕಾರ್ಯಕ್ರಮ ಏರ್ಪಡಿಸಿದ್ದು ಸಂತಸದ ವಿಷಯವೆಂದು ಸ್ವಾತಂತ್ರ್ಯ ದಲ್ಲಿ ಮಡಿದ ಯೋಧರೊಂದಿಗೆ ಅನೇಕ ವಿಚಾರಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ
ರೋಹನ – ಭಗತ್ ಸಿಂಗ್,
ಬೋಧನಾ – ಮಹಾತ್ಮ ಗಾಂಧೀಜಿ,
ಚೇತನ – ಲಾಲಾ ಲಜಪತ್ ರಾಯ್,
ಮಂಜುನಾಥ್ – ತಾತ್ಯಾ ಟೋಪಿ,
ಕಿಶನ್ – ಸಂಗೊಳ್ಳಿ ರಾಯಣ್ಣ,
ಋತ್ವಿಕ್ – ಚತ್ರಪತಿ ಶಿವಾಜಿ,
ಪ್ರೀತಂ – ಸುಭಾಷ್ ಚಂದ್ರ ಬೋಸ್,
ಶೇಖರ್ – ಕಿತ್ತೂರು ಚೆನ್ನಮ್ಮ,
ಭರತ್ – ಸರ್ದಾರ್ ವಲ್ಲಭ್ ಬಾಯ್ ಪಟೇಲ್ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಉಷಾರಾವ್, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷರಾದ ಲತಾರಮೇಶ್, ಕಾರ್ಯದರ್ಶಿ ಉಮಾ ವೆಂಕಟೇಶ್, ಫ್ರೆಂಡ್ಸ್ ಸೆಂಟರ್ ನ ಜಿ.ವಿಜಯಕುಮಾರ್, ನಾಗರಾಜ್ ವಿ, ಬಿಂದುವಿಜಯಕುಮಾರ್, ವೀಣಾರಂಗಧೋಳ್ ಉಪಸ್ಥಿತರಿದ್ದರು.
ನೆಚ್ಚಿನ ವೀರ ಯೋಧರ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳಿಗೆ ವೀರ ಯೋಧರ ಕುರಿತು ಬರೆದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.