Sunday, February 9, 2025
Sunday, February 9, 2025

ಮತದಾನದ ಹಕ್ಕಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕಿದೆ

Date:

ನಮ್ಮನ್ನು ಆಳುವ ಒಬ್ಬ ಸಮರ್ಥ ನಾಯಕನನ್ನು ನಾವೇ ಆರಿಸುವ ಮತದಾನದ ಹಕ್ಕು ಅತ್ಯಂತ ಮಹತ್ವವುಳ್ಳದ್ದಾಗಿದೆ. ಆದರೆ ಈ ಸಾಂವಿಧಾನಿಕ ಹಕ್ಕಿನ ಮಹತ್ವದ ಕುರಿತು ಇನ್ನೂ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಎಸ್. ಎ. ಮುಸ್ತಫಾ ಹುಸೇನ್ ಅವರು ತಿಳಿಸಿದ್ದಾರೆ.

  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ  ದಿನಾಚರಣೆಯನ್ನು ಉದ್ಘಾಟಿಸಿ ಮುಸ್ತಾಫ್  ಹುಸೇನ್ ಅವರು ಮಾತನಾಡುತ್ತಿದ್ದರು.

1950 ರಲ್ಲಿ ಸ್ಥಾಪನೆಯಾದ ಚುನಾವಣಾ ಆಯೋಗ ಅಂದಿನಿಂದ ಇಲ್ಲಿಯವರೆಗೆ ನಮ್ಮ ರಾಷ್ಟ್ರದಲ್ಲಿ ಎಲ್ಲಾ ಚುನಾವಣೆಗಳನ್ನು ನಡೆಸುತ್ತಾ ಬಂದಿದೆ. 18 ವರ್ಷ ತುಂಬಿದ ಎಲ್ಲ ಯುವಜನತೆಗೆ ಮತದಾನ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಈ ಹಕ್ಕು ಅತ್ಯಂತ ಜವಾಬ್ದಾರಿಯುತ ಮತ್ತು ಮಹತ್ವವುಳ್ಳದ್ದಾಗಿದೆ. ಆದರೆ ಈ ಸಾಂವಿಧಾನಿಕ ಹಕ್ಕಿನ ಮಹತ್ವದ ಕುರಿತು ಇನ್ನೂ ಹೆಚ್ಚಿನ ಜನರಿಗೆ ಅರಿವಿಲ್ಲ ಎಂಬುದು ಇತ್ತೀಚಿನ ಚುನಾವಣೆಯಲ್ಲಿ ಆಗುತ್ತಿರುವ ಮತದಾನದ ಪ್ರಮಾಣದಿಂದ ತೋರುತ್ತಿದೆ.
ಚುನಾವಣೆಗಳಲ್ಲಿ ಶೇ.40, ಶೇ.50 ಹೀಗೆ ಕಡಿಮೆ ಮತದಾನ ಆಗುತ್ತಿರುವುದು ಒಂದು ಗಂಭೀರವಾದ ವಿಚಾರ. ಒಬ್ಬ ನಾಯಕನನ್ನು ಆರಿಸುವಲ್ಲಿ ನನ್ನ ಪಾತ್ರ ಏನು ಎಂದು ಅರಿವಾದಲ್ಲಿ, ಒಂದು ಶಿಸ್ತು ಮತ್ತು ಉತ್ತಮ ನಾಯಕತ್ವ ಬರಲಿದೆ. ಆದ್ದರಿಂದ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ದವಿದ್ದು, ಸಹಕಾರ ನೀಡಲಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಎಸ್. ಎ. ಮುಸ್ತಾಫಾ ಹುಸೇನ್ ಅವರು ಮಾತನಾಡಿ,
ಪ್ರತಿ ಚುನಾವಣೆಯಲ್ಲಿ ನಾವು ಕಡಿಮೆ ಮತದಾನ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಅಂದರೆ ನಮ್ಮ ಹಕ್ಕನ್ನು ನಾವು ಚಲಾಯಿಸುವಲ್ಲಿ ಹಿಂದಿದ್ದೇವೆ, ನಿರ್ಲಕ್ಷ್ಯ ವಹಿಸಿದ್ದೇವೆ ಎಂದರ್ಥ. ಆದ ಕಾರಣ ನಾವೆಲ್ಲ ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. ಮತದಾನದ ಹಕ್ಕನ್ನು ನಾವು ಜಾಗರೂಕತೆಯಿಂದ ಚಲಾಯಿಸಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ. ಆರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ಪ್ರತಿಯೊಬ್ಬ ಪ್ರಜೆಯು ಮತದಾನ ಸೇರಿದಂತೆ ಈ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
ಕೇವಲ ಮತದಾನದ ಹಕ್ಕು ಚಲಾಯಿಸಿದರೆ ಮಾತ್ರ ಸಾಲದು. 18 ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಬೇರೆ ಪ್ರದೇಶಗಳಿಗೆ ವಲಸೆ ಹೋದವರು, ವರ್ಗಾವಣೆ, ತೀರಿಹೋದವರ ಹೆಸರನ್ನು ಅರ್ಜಿ ನೀಡಿ ಪಟ್ಟಿಯಿಂದ ತೆಗೆಸಬೇಕು. ಹೊಸದಾಗಿ ಊರಿಗೆ ಬಂದವರ, ವಿಳಾಸ ಬದಲಾವಣೆ ಇತರೆಯನ್ನು ಸೇರಿಸಬೇಕು.
ಭಾರತ ಚುನಾವಣಾ ಆಯೋಗವು ಚುನಾವಣೆಗಳಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವನ್ನು ಗಮನಿಸುತ್ತಿರುತ್ತದೆ. ಹಾಗೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ನಾಗರೀಕರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಶ್ಯವಾದ ಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ. ಮೊದಲೆಲ್ಲ ಮತದಾರರ ಪಟ್ಟಿ ಬಗ್ಗೆ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳ ಬಳಿ ಕೇಳಿ ಪಡೆಯಬೇಕಿತ್ತು. ಆದರೀಗ ಚುನಾವಣಾ ಆಯೋಗ ಆ್ಯಪ್ ಸಿದ್ದಪಡಿಸಿದ್ದು , ಮಾಹಿತಿ ಪಡೆಯುವುದನ್ನು ಸರಳಗೊಳಿಸಿದೆ. ಹಾಗೂ ಯುವ ಮತದಾರರು ಸೇರಿದಂತೆ ಎಲ್ಲರೂ ಮತದಾನ ಚೀಟಿಯನ್ನು ಸುಲಭವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದ್ದು, ಎಲ್ಲರೂ ಇದರ ಉಪಯೋಗ ಪಡೆಯಬೇಕೆಂದರು.
ಎಲ್ಲ ಪ್ರೌಢಶಾಲೆ, ಕಾಲೇಜುಗಳಲ್ಲಿ ಮತದಾನ ಮತ್ತು ಚುನಾವಣೆ ಬಗ್ಗೆ ಅರಿವು ಮೂಡಿಸಲು ಎಲೆಕ್ಟರಲ್ ಲಿಟರಸಿ ಕ್ಲಬ್‍ಗಳನ್ನು ಸ್ಥಾಪಿಸಲಾಗಿದೆ. ಕ್ಯಾಂಪಸ್ ಅಂಬಾಸಿಡರ್‍ಗಳನ್ನು ನೇಮಿಸಲಾಗಿದೆ. ಹಾಗೂ ಚುನಾವಣಾ ಅವ್ಯವಹಾರಗಳ ತಡೆಗಾಗಿ ಚುನಾವಣಾ ಆಯೋಗ ನವೀನವಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ ಎಂದರು.
ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಎಂದು ಆಚರಿಸುವ ಮೂಲಕ ಮತದಾನ ಕುರಿತು ಜಾಗೃತಿ ಮತ್ತು ಇದರ ಮಹತ್ವವನ್ನು ತಿಳಿಸಲಾಗುತ್ತಿದೆ. ಕೇವಲ ಐಡಿ ಪ್ರೂಫ್‍ಗಾಗಿ ಮತದಾರರ ಚೀಟಿ ಪಡೆಯುವಂತೆ ಆಗಬಾರದು. ನಮ್ಮ ಮತದಾನದ ಹಕ್ಕು ಚಲಾಯಿಸಲು ಅದರ ಸದ್ಬಳಕೆ ಆಗಬೇಕು. ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ನಾನು ಮತದಾನ ಮಾಡಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಯುವ ಮತದಾರರಿಗೆ ಎಪಿಕ್ ಕಾರ್ಡ್ ಗಳನ್ನು ವಿತರಿಸಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ, ಚಿತ್ರಕಲೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಾಗೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಮತಗಟ್ಟೆ ಅಧಿಕಾರಿ ಪಾಲಾಕ್ಷ ಅವರನ್ನು ಗೌರವಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮತದಾನ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಾನಗರಪಾಲಿಕೆ ಆಯುಕ್ತರಾದ ಚಿದಾನಂದ ಎಸ್. ವಟಾರೆ ಸ್ವಾಗತಿಸಿದರು. ಚುನಾವಣೆ ಶಾಖೆಯ ತಹಶೀಲ್ದಾರ್ ಮಂಜುಳಾ ಭಜಂತ್ರಿ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೆಲವು ಮೆಲುಕುಗಳು

ಲೇ: ಗೋಪಾಲ್ ಯಡಗೆರೆ.ಹಿರಿಯ ವರದಿಗಾರರು. ಕನ್ನಡಪ್ರಭ. ಶಿವಮೊಗ್ಗ Klive Special Article ...

Warrant Officer Manjunath ಸ್ಕೈ ಡೈವಿಂಗ್ ಸಂದರ್ಭದಲ್ಲಿ‌ ಪ್ಯಾರಾಚ್ಯೂಟ್ ತೆರೆಯದೇ ಏರ್ ಫೋರ್ಸ್ ಅಧಿಕಾರಿ ಮಂಜುನಾಥ್ ಮರಣ

Warrant Officer Manjunath ಸ್ಕೈ ಡೈವಿಂಗ್ ವೇಳೆ ಪ್ಯಾರಚ್ಯೂಟ್ ತೆರೆಯದೆ ಏರ್ಫೋರ್ಸ್...

Guarantee scheme ರಾಜ್ಯ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರ ಮೆಚ್ಚುಗೆ

Guarantee scheme ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು...

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ‌ಕ್ಕೆ ಒತ್ತು‌ ನೀಡಲಾಗುವುದು- ಗುರುದತ್ತ ಹೆಗಡೆ

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ,...