ಶಾಲೆಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಪ್ರತಿಭಟನೆ ನಡೆಸಲಾಯಿತು.ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಹರಗಿ, ಕೋಡಿಹಳ್ಳಿ ಮತ್ತು ಸಹಸ್ರವಳ್ಳಿಯ ಪೋಷಕರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಪ್ರಾಥಮಿಕ ಶಾಲೆಗೆ 8 ಹುದ್ದೆಗಳು ಮಂಜೂರಾಗಿದ್ದವು. ಅದರಲ್ಲಿ ಮುಖ್ಯಶಿಕ್ಷಕರು ಅಪಘಾತದಲ್ಲಿ ತೀವ್ರ ಪೆಟ್ಟಾಗಿ ಮೃತರಾದರೆ, ಇನ್ನೊಬ್ಬ ಶಿಕ್ಷಕರು ಹೃದಯಾಘಾತದಿಂದ ಮೃತರಾದರು. ಪ್ರಸೂತಿ ರಜೆಗೆ ತೆರಳಿದ್ದ ಶಿಕ್ಷಕಿಯರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿದ್ದಾರೆ. ಇನ್ನೊಬ್ಬ ಶಿಕ್ಷಕಿಯು ಸದ್ಯಕ್ಕೆ ಪ್ರಸೂತಿ ರಜೆಯಲ್ಲಿದ್ದಾರೆ. ಹೀಗಿರುವಾಗ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎಂದು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಇಲ್ಲಿ ತೆರವಾದ ಹುದ್ದೆ ಭರ್ತಿಯಾಗಿಲ್ಲ. ರಜೆಯ ಮೇಲೆ ಹೋದ ಶಿಕ್ಷಕಿಯರು ಇಲ್ಲೇ ಕಾರ್ಯನಿರ್ವಹಿಸಬೇಕು. ಹೆಚ್ಚುವರಿ ಶಿಕ್ಷಕರನ್ನು ತೆಗೆದುಕೊಳ್ಳಲು ಶಾಲೆಯಲ್ಲಿ ಹಣವಿಲ್ಲ. ಅಕ್ಕಪಕ್ಕದ ಶಾಲೆಯ ಶಿಕ್ಷಕರನ್ನು ಮೂರು ದಿನದ ಮಟ್ಟಿಗೆ ಇಲ್ಲಿಗೆ ಬಂದು ಪಾಠ ಮಾಡಲು ನಿಯೋಜಿಸುತ್ತಾರೆ ಜಿಲ್ಲಾ ಶಿಕ್ಷಣಾಧಿಕಾರಿ ,ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಡಿಡಿಪಿಐ ಫೋನಿನ ಮೂಲಕ ಗ್ರಾಮಸ್ಥರ ಜೊತೆ ಮಾತನಾಡಿ, ಇನ್ನೆರಡು ದಿನದಲ್ಲಿ ಶಾಲೆ ಶಿಕ್ಷಕರ ಕೊರತೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಾಲೆಗೆ ಬೀಗ: ಶಿಕ್ಷಕರೇ ಬನ್ನಿ ಬೇಗ.
Date: