ಶಿವಮೊಗ್ಗ ನಗರದಲ್ಲಿ ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.
ಆಯುರ್ವೇದ ಕಾಲೇಜು ದೇವರಿಲ್ಲದ ದೇವಸ್ಥಾನ ಆಗಬಾರದು. ಹಿಂದೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ ಅವರ ಪ್ರಯತ್ನದ ಫಲವಾಗಿ ಆಯುರ್ವೇದ ಕಾಲೇಜು ಆರಂಭವಾಗಿದೆ. ಯಡಿಯೂರಪ್ಪ ಅವರು ರಾಜ್ಯದ 105 ಆಯುಷ್ ಕಾಲೇಜುಗಳಿಗೆ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಆಗಬೇಕು ಎಂದು 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಜೊತೆಗೆ 10 ಕೋಟಿ ರೂ. ಅನುದಾನವನ್ನು ಇರಿಸಿದರು. ಅಧಿಕಾರಿಗಳು ಇದನ್ನು ಕಾರ್ಯಗತ ಮಾಡಬೇಕು. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.
“ಚಿಕಿತ್ಸೆಗೆ ಬರುವ ಸಾರ್ವಜನಿಕರಲ್ಲಿ ಆಯುಷ್ ವೈದ್ಯರು ಆಯುರ್ವೇದ ಚಿಕಿತ್ಸೆ ಬಗ್ಗೆ ವಿಶ್ವಾಸ ತುಂಬಬೇಕು. ಜನರು ಒಪ್ಪುವ ರೀತಿ ಮಾತನಾಡಬೇಕು. ಆಯುರ್ವೇದ ಔಷಧಗಳು ಪರಿಣಾಮ ಬೀರುವುದು ನಿಧಾನವಾದರೂ, ದೇಹದ ಬೇರೆ ಯಾವುದೇ ಅಂಗಾಂಗಗಳಿಗೆ ತೊಂದರೆ ಉಂಟು ಮಾಡುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಲೋ ಪತಿ ಔಷಧಗಳಿಗೆ ಅವಲಂಬಿತರಾಗುವುದನ್ನು ಬಿಡಬೇಕು. ಆಯುರ್ವೇದ ಔಷಧ ಪ್ರಾಧಿಕಾರ ನಿರ್ಮಾಣವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ” ಎಂದು ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್ ಎಸ್. ಜ್ಯೋತಿಪ್ರಕಾಶ್, ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಈ.ಎಸ್. ಪುಷ್ಪ, ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ದೊಡ್ಡಮನಿ, ಡಿಎಚ್ ಒ ಡಾ. ರಾಜೇಶ್ ಸುರಗಿಹಳ್ಳಿ, ಅಂಚೆ ಇಲಾಖೆಯ ಉಪನಿರ್ದೇಶಕ ಡಾ. ಅನಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆಯುರ್ವೇದ ವಿವಿ : ಶೀಘ್ರ ಕ್ರಮ
Date: