Friday, May 15, 2026
Friday, May 15, 2026
Home Blog Page 94

Shimoga News ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಎನ್ಎಸ್ಎಸ್ ಮಹತ್ತರ ಪಾತ್ರವಹಿಸುತ್ತದೆ.- ಪ್ರೊ.ಬಿ.ವಸಂತಕುಮಾರ್.

0

Shimoga News ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ಅರಿವು ಆಗುವುದರ ಜತೆಯಲ್ಲಿ ಸೇವಾ ಮನೋಭಾವ ವೃದ್ಧಿಸುತ್ತದೆ. ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಎನ್‌ಎಸ್‌ಎಸ್ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸರ್ ಎಂ.ವಿ. ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ವಸಂತಕುಮಾರ.ಬಿ. ಹೇಳಿದರು.

ಮಲೇಶಂಕರದಲ್ಲಿ ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತು ಇತರ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ನಡೆಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ವಿಶೇಷ ಜ್ಞಾನ ವೃದ್ಧಿಸಲು ಎನ್‌ಎಸ್‌ಎಸ್ ತುಂಬಾ ಸಹಕಾರಿಯಾಗುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಯುಗದಲ್ಲಿ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಎಐ ಕಲಿತು ಸಾಧನೆ ಮಾಡಬೇಕು ಎಂದು ಹೇಳಿದರು.

Shimoga News ಎನ್‌ಎಸ್‌ಎಸ್ ಶಿಬಿರಗಳಿಂದ ಪ್ರತಿಭೆ ಅನಾವರಣಕ್ಕೂ ವೇದಿಕೆ ದೊರಕುತ್ತದೆ. ವಿದ್ಯಾರ್ಥಿಗಳ ನಡುವೆ ಪರಸ್ಪರ ಓಡನಾಟ ಹೆಚ್ಚುತ್ತದೆ. ಶಿಸ್ತಿನ ಜೀವನಶೈಲಿ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ. ಬಿ.ಪಿ.ಮಹಾದೇವ್ ಮಾತನಾಡಿ, ಮಕ್ಕಳು ಶಿಬಿರದಲ್ಲಿ ಶಿಸ್ತು, ಸಂಸ್ಕಾರ ಜತೆಗೆ ಪರಿಸರ ಸ್ವಚ್ಛತೆ, ಆರೋಗ್ಯದ ಮಹತ್ವದ ಬಗ್ಗೆ ಅರಿತುಕೊಳ್ಳುತ್ತಾರೆ. ಗ್ರಾಮಸ್ಥರ ಸಹಕಾರದಿಂದ ಶಿಬಿರ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ಪ್ರಮುಖರಾದ ಎಂ.ಕೆ.ರಮೇಶ್, ಜಗದೀಶ್, ಶಿಲ್ಪಾ ಪಾಟೀಲ್, ಕೀರ್ತಿನಾಥ್, ಲೋಕೇಶಪ್ಪ, ಬಿಂದು ವಿಜಯಕುಮಾರ್, ಶ್ರೀಕಾಂತ್, ಆರ್.ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

Car Accident ಹೆಗ್ಗೋಡು ಬಳಿ ಕಾರಿನ ಮೇಲೆ ಕಾಡುಕೋಣ ದಾಳಿ.

0

Car Accident ಹೆಗ್ಗೋಡು ಬಳಿ ಕಾರಿನ ಮೇಲೆ ಕಾಡುಕೋಣ ದಾಳಿ. ಹೆಗ್ಗೋಡು ಬಳಿ ಕಾಡುಕೋಣ ಹಾರಿ ಕಾರಿನ ಮುಂಭಾಗ ಜಖಂ ಆಗಿದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಬಳಿ ಘಟನೆ ಸಂಭವಿಸಿದೆ. ಕಾಡುಕೋಣದ ಹಿಂಡು ಏಕಾಏಕಿ ರಸ್ತೆ ಮೇಲೆ ಬಂದಿದ್ದರ ಪರಿಣಾಮವಾಗಿ ಕಾರಿನ ಮೂತಿ ನಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ವೇಳೆ ರಸ್ತೆಯಲ್ಲಿ ಎದುರಿಗೆ ಬೇರೆ ಕಾರೊಂದು ಅಡ್ಡ ಬಂದ ಪರಿಣಾಮ ಕಾರು ಜಖಂ ಆಗಿದೆ. ಹರಿಹರಪುರದಿಂದ ಕಮ್ಮರಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ವೇಳೆ ಹಠಾತ್ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ವರದಿಯಾಗಿದೆ.

ಗತವೈಭವದ ಆಗರ…ಆರಗ

0

ಲೇ: ರಾಘವೇಂದ್ರ ಅಡಿಗ.
ತೀರ್ಥಹಳ್ಳಿ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಆರಗ ಐತಿಹಾಸಿಕವಾಗಿ ವಿಜ್ರಂಭಿಸಿ, ಕಾಲನ ಕಾಲಡಿಗೆ ಸಿಕ್ಕಿ ಪ್ರಸ್ತುತ ಕಾಲಮಾನಕ್ಕೆ ಒಗ್ಗಿಕೊಂಡಿರುವ ಪ್ರದೇಶಗಳಲ್ಲಿ ಒಂದು. ಒಂದು ಕಾಲದಲ್ಲಿ ಹಲವಾರು ರಾಜವಂಶಗಳ ರಾಜಧಾನಿಯಾಗಿ ಮೆರೆದ ಸ್ಥಳ. ಮಲೆನಾಡಿನ ಮಳೆಕಾಡಿನ ಮಧ್ಯದಲ್ಲಿ ಅಡಿಕೆ ತೋಟ, ತೆಂಗು, ಭತ್ತದ ಗದ್ದೆಗಳಿಂದ ಆವೃತವಾಗಿ, ಗೋಪಿನಾಥ ಹೊಳೆ ಮತ್ತು ಕುಶಾವತಿ ನದಿಯ ದಡದ ಮೇಲಿರುವ ಈ ಊರಿನ ಪ್ರಾಚೀನ ಇತಿಹಾಸ ನಮ್ಮನ್ನು ಮಹಾಭಾರತ ಕಾಲಕ್ಕೆ ಕರೆದೊಯ್ಯುತ್ತದೆ. ಪಾಳುಬಿದ್ದ ದೇವಸ್ಥಾನಗಳು, ಜೈನ ಬಸದಿಗಳು, ಗುಹೆಗಳು, ನೆಲಗಟ್ಟಿನ ಅವಶೇಷಗಳು ಈಗಲೂ ಇಲ್ಲಿದ್ದು ಗತವೈಭವಕ್ಕೆ ಸಾಕ್ಷಿಯಾಗಿವೆ.

ಅರಗಿನ ಮನೆ ಪ್ರಕರಣ
ದುರ್ಯೋಧನನು ಪುರೋಚನ ಎಂಬ ಶಿಲ್ಪಿಗೆ ‘ವಾರಣಾವತ’ ಎಂಬ ಪ್ರದೇಶದಲ್ಲಿ ಅರಗಿನಿಂದ (ಮೇಣದಿಂದ) ಅರಮನೆಯನ್ನು ನಿರ್ಮಿಸಲು ಹೇಳಿ ಅಲ್ಲಿಗೆ ಪಾಂಡವರನ್ನು ವಿಶ್ರಾಂತಿಗಾಗಿ ಕಳುಹಿಸಿದನು. ಪಾಂಡವರು ನಿದ್ರಿಸುತ್ತಿದ್ದಾಗ ಅದಕ್ಕೆ ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ಸುಡುವುದು ದುರ್ಯೋಧನನ ದುರುದ್ದೇಶವಾಗಿತ್ತು. ಆದರೆ ಈ ಸಂಚು ವಿದುರನಿಗೆ ಗೊತ್ತಾಗಿ ಪಾಂಡವರನ್ನು ಎಚ್ಚರಿಸಿದುದರ ಪರಿಣಾಮವಾಗಿ ಪಾಂಡವರು ಜಾಗೃತರಾಗಿ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದರು. ಈ ಅರಗಿನ ಅರಮನೆ ಇದ್ದ ಪ್ರದೇಶವೇ ‘ಆರಗ’ ಎಂದಾಯಿತು ಎಂಬ ಪ್ರತೀತಿ ಇದೆ. ಈಗಲೂ ಇಲ್ಲಿ ಒಂದು ಜಾಗದಲ್ಲಿ ಬರಡು ಭೂಮಿ ಇದ್ದು ಯಾವುದೇ ಮರಗಿಡಗಳು ಬೆಳೆಯುವುದಿಲ್ಲ. ಇದು ಅರಗಿನ ಅರಮನೆ ಸುಡಲ್ಪಟ್ಟ ಜಾಗ ಎಂದು ನಂಬಲಾಗಿದೆ.

ಆರಗ ರಾಜ್ಯ
ಇತಿಹಾಸದಲ್ಲಿ ಕ್ರಿ.ಶ. 8ನೇ ಶತಮಾನದಲ್ಲೇ ಆರಗ ರಾಜ್ಯದ ಉಲ್ಲೇಖವಿದೆ. ಕ್ರಿ.ಶ. ಸುಮಾರು 10ರಿಂದ 17ನೇ ಶತಮಾನದವರೆಗೆ ವೇಂಟೆ, ಕಂಪಣ, ರಾಜ್ಯ, ಪುರ, ಪುತ್ತನ ಎಂಬ ಹೆಸರಿನಲ್ಲಿ ಆರಗ ಸ್ಥಳವು ‘ಆರಗ ಮಲೆರಾಜ್ಯ’ ಎಂಬ ಹೆಸರಿನ ರಾಜ್ಯದ ರಾಜಧಾನಿಯಾಗಿತ್ತು. ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ 1048 ರಲ್ಲಿ ಸಾಂತಳಿಗೆ ನಾಡು ರೂಪುಗೊಂಡಾಗ ಆರಗವು ಈ ಸಾಂತಳಿಗೆ ನಾಡಿನಲ್ಲಿತ್ತು. ಮುಂದೆ ಹೊಂಬುಜ(ಹುಂಚ)ವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಸಾಂತರರು ಈ ನಾಡನ್ನು ವಿಸ್ತರಿಸಿ ‘ಸಾಂತಳಿಗೆ ಸಾವಿರ’ ಎಂಬ ಆಡಳಿತ ಘಟಕವನ್ನು ರೂಪಿಸಿದರು. ಕ್ರಿ. ಶ 8ನೆಯ ಶತಮಾನದಲ್ಲಿ ಸಾಂತರ ರಾಜರ ಪ್ರಾಂತೀಯ ಆಡಳಿತಗಾರ್ತಿ ಸುಗ್ಗಬ್ಬೆ ಎಂಬುವವಳು ಆರಗ ಪ್ರದೇಶದ ಸುತ್ತಮುತ್ತಲಿನ ಪ್ರಜೆಗಳಿಗಾಗಿ ಅನ್ನಸಂತರ್ಪಣಾ ಛತ್ರಕ್ಕಾಗಿ ‘ದಾನಶಾಲೆ’ (ಈಗಿನ ದಾನಸಾಲೆ) ಗ್ರಾಮವನ್ನು ಉಂಬಳಿಯಾಗಿ ನೀಡಿದ್ದಳು ಎಂಬುದನ್ನು ದಾನಸಾಲೆಯ ಜೈನಬಸದಿಯಲ್ಲಿ ದೊರೆತ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಇದೇ ಶಾಸನದಲ್ಲಿ ಹೊಂಬುಜ ಜೈನಮಠದ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಪೊಂಬುರ್ಚಪುರ(ಈಗಿನ ಹುಂಚ)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಳುತ್ತಿದ್ದಸಾಂತರ ಜೈನರಾಜರು ಸಾಗರದ ಹೊಸಗುಂದ ಮತ್ತು ಚಿಕ್ಕಮಗಳೂರಿನ ಕಳಸ ಪ್ರದೇಶಗಳಿಗೆ ಸ್ಥಳಾಂತಗೊಂಡರು. ಹೊಯ್ಸಳರ ಕಾಲದಲ್ಲೂ ಆರಗಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. ನಂತರ ಯಾವಾಗ ವಿಜಯನಗರ ಅರಸರು ಆರಗವನ್ನು ಉಪರಾಜಧಾನಿಯನ್ನಾಗಿ ಮಾಡಿಕೊಂಡರೋ ಆಗ ‘ಆರಗ ರಾಜ್ಯ’ ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆಯಿತು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ವಿಶಿಷ್ಟವಾದ ಈ ಪ್ರದೇಶ ವಿಜಯನಗರ, ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಮಲೆರಾಜ್ಯ, ಆರಗವೇರಿ, ಆರಗ ಮಹಾನಾಡು ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಕ್ರಿ.ಶ 1362ರ ಹೊತ್ತಿನಲ್ಲಿ ಆರಗ ಮತ್ತು ಗುತ್ತಿ (ಈಗಿನ ಸೊರಬದ ಚಂದ್ರಗುತ್ತಿ) ಜಂಟಿ ರಾಜ್ಯವಾಗಿ ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಅಧೀನದಲ್ಲಿತ್ತು. ವಿಜಯನಗರ ಸಾಮ್ರಾಜ್ಯದ ಉಪನಗರವಾಗಿದ್ದ ಇದು ಕ್ರಿ.ಶ 1300 ರಿಂದ ಕ್ರಿ.ಶ 1700 ನೆಯ ಇಸವಿಯವರೆಗೆ ಅಂದರೆ ಸುಮಾರು 400 ವರ್ಷಗಳ ಕಾಲ ರಾಜಕೀಯ-ಸಾಂಸ್ಕೃತಿಕ-ಆರ್ಥಿಕ-ಕಲೆಗಳ ಬೀಡಾಗಿ ಮೆರೆಯಿತು. ಕ್ರಿ.ಶ 1362ರಿಂದ ಕ್ರಿ.ಶ 1665ವರೆಗೆ ‘ಆರಗ ರಾಜ್ಯ’ದ ಪ್ರಸ್ತಾಪ ವಿಜಯನಗರದ ಶಾಸನಗಳಲ್ಲಿ ಕಂಡುಬರುತ್ತದೆ.

‘ಕರ್ನಾಟಕ ಇತಿಹಾಸ ಅಕಾಡೆಮಿ’ಯ ಮಾಹಿತಿಯಂತೆ ವಿಜಯನಗರದ ಅರಸರು ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಮಲೆನಾಡಿನ ಈ ಭಾಗವನ್ನು ‘ಮಲೆ ರಾಜ್ಯ’ ಎಂದು ಗುರುತಿಸಿ ಅದಕ್ಕೆ ಆರಗವನ್ನು ರಾಜಧಾನಿಯನ್ನಾಗಿ ಮಾಡಿದರು. ವಿಜಯನಗರದ ಸಂಗಮ ವಂಶದ ಸೋದರರಲ್ಲಿ ಒಬ್ಬನಾದ ಮಾರಪ್ಪ ಒಡೆಯನು ಆರಗ ರಾಜ್ಯದ ಚುಕ್ಕಾಣಿಯನ್ನು ಹಿಡಿದನು. ಕ್ರಿ.ಶ 1362ರಲ್ಲಿ ವಿಜಯನಗರ ಬುಕ್ಕರಾಯನ ಮಗ ವಿರೂಪಾಕ್ಷನು ಆರಗವನ್ನು ಆಳುತ್ತಿದ್ದನು. ವಿಜಯನಗರ ರಾಜಮನೆತನಕ್ಕೆ ಸೇರಿದ ವ್ಯಕ್ತಿ ಆರಗವನ್ನು ಕೇಂದ್ರವಾಗಿಸಿಕೊಂಡು ಕರಾವಳಿ ಹಾಗೂ ದಕ್ಷಿಣ ಭಾಗದ ನಿಯಂತ್ರಕರಾಗಿ ರಾಜ್ಯಪಾಲರ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದು ಆರಗದ 18 ಹಾಗೂ ಚಂದ್ರಗುತ್ತಿಯ 18 ಕಂಪಣ(ಗ್ರಾಮಗಳ ಸಮೂಹ)ಗಳನ್ನು ಒಳಗೊಂಡಿತ್ತು. ಈಗಿನ ತೀರ್ಥಹಳ್ಳಿ, ಸಾಗರ, ಚಿಕ್ಕಮಗಳೂರು, ಹೊಸನಗರ ಮತ್ತು ಶಿವಮೊಗ್ಗ ಭಾಗಕ್ಕೆ ಆರಗ ರಾಜಧಾನಿಯಾಗಿ ಮತ್ತು ಸೊರಬ, ಶಿಕಾರಿಪುರ, ಮತ್ತು ಉತ್ತರಕನ್ನಡದ ಭಾಗಗಳಿಗೆ ಚಂದ್ರಗುತ್ತಿ ರಾಜಧಾನಿಯಾಗಿತ್ತು. ವಿಜಯನಗರದ ಚಕ್ರವರ್ತಿ ಇಮ್ಮಡಿ ಹರಿಹರರಾಯನು ತನ್ನ ಪುತ್ರರಲ್ಲಿ ಒಬ್ಬನಾದ ಚಿಕ್ಕರಾಯನನ್ನು ಆಡಳಿತಾನುಭವ ಬರಲೆಂದು ಆರಗ ಪ್ರಾಂತ್ಯಕ್ಕೆ ರಾಜ ಪ್ರತಿನಿಧಿಯಾಗಿ ನೇಮಿಸಿದ್ದನು. ತದನಂತರ ಬಂದ ದೇವರಾಯನು ತನ್ನ ಮಗನಾದ ಭಾಸ್ಕರರಾಯನನ್ನು ಆರಗ – ಚಂದ್ರಗುತ್ತಿ – ಬಾರ್ಕೂರು ಪ್ರದೇಶಕ್ಕೆ ತನ್ನ ಪ್ರತಿನಿಧಿಯನ್ನಾಗಿ ನೇಮಿಸಿದ್ದನು. ನಂತರ ಪ್ರೌಢದೇವರಾಯನು ಅರಸನಾದನು. ನಂತರ ಅರಸ ವೀರ ಬುಕ್ಕಣ್ಣ ಒಡೆಯನ ಮಗ ವಿರೂಪಾಕ್ಷರಾಯ (ಕ್ರಿ. ಶ 1362-ಕ್ರಿ. ಶ 1382) ಅಥವಾ ವೀರಣ್ಣೊಡೆಯ (ವಿರುಪಣ್ಣ ಒಡೆಯ) ಆರಗ ರಾಜ್ಯದ ಪ್ರತಿನಿಧಿಯಾಗಿದ್ದನು.

ಆರಗ ನಾರಾಯಣ ಗುರುರಾಯ (ವಿಜಯನಗರದ ಪ್ರಮುಖ ಮಂತ್ರಿ)
ಆರಗ ರಾಜ್ಯದ ವ್ಯಾಪ್ತಿಯಲ್ಲಿ ಬೋಲೆಯ ಮುಮ್ಮಯ್ಯ ಎಂಬುವವನು ಸಮಾಜಘಾತುಕ ಕೆಲಸಗಳನ್ನು ಮಾಡುತ್ತಾ ಅರಸೊತ್ತಿಗೆಗೆ ತೊಂದರೆ ಕೊಡುತ್ತಿದ್ದನು. ಇದನ್ನು ಚಕ್ರವರ್ತಿ ಪ್ರೌಢದೇವರಾಯರಿಗೆ ವೀರಣ್ಣೊಡೆಯ ಪತ್ರ ಬರೆದು ತಿಳಿಸಿದನು. ಅಗ ರಾಜಧಾನಿ ಹಂಪಿಯಲ್ಲಿ ವಿಜಯನಗರ ಅರಸರ ‘ರಾಯ ಭಂಡಾರಿ’ (ಪ್ರಮುಖ ಮಂತ್ರಿ) ಆಗಿದ್ದವರು ಆರಗ ರಾಜ್ಯದವರೇ ಆದ ನಾರಾಯಣ ಗುರುರಾಯ ಎಂಬುವವರು. ನಾರಾಯಣ ಗುರುರಾಯರು ಪ್ರೌಢದೇವರಾಯರ ಅಪ್ಪಣೆ ಪಡೆದುಕೊಂಡು ವಿಜಯನಗರದಿಂದ ಆರಗ ರಾಜ್ಯಕ್ಕೆ ಸೈನ್ಯವನ್ನು ತೆಗೆದುಕೊಂಡು ಬರುತ್ತಾರೆ. ಆರಗದ ಪ್ರತಿನಿಧಿ ವೀರಣ್ಣೊಡೆಯ ಹಾಗೂ ಅವನ ದಳಪತಿ ತಿರಕಿಗೌಡರೊಂದಿಗೆ ಬೋಲೆಯ ಮುಮ್ಮಯ್ಯನ ಮೇಲೆ ದಾಳಿ ಮಾಡುತ್ತಾರೆ. ಇವರ ದಾಳಿಯನ್ನು ಎದುರಿಸಲಾಗದೆ ಬೋಲೆಯ ಮುಮ್ಮಯ್ಯನು ಶರಣಾಗುತ್ತಾನೆ. ನಾರಾಯಣ ಗುರುರಾಯರು ಅವನನ್ನು ಕ್ಷಮಿಸಿದ್ದಲ್ಲದೆ, ವಿಜಯನಗರ ಸೈನ್ಯಕ್ಕೂ ಸೇರಿಸಿಕೊಳ್ಳುತ್ತಾರೆ. ನಂತರ ಆರಗದಿಂದ ಹೊರಟ ರಾಯಭಂಡಾರಿ ನಾರಾಯಣ ಗುರುರಾಯರು ಶೃಂಗೇರಿ, ಮುಳಬಾಗಿಲು, ಶ್ರೀರಂಗಪಟ್ಟಣ ಮತ್ತು ದ್ವಾರಸಮುದ್ರವನ್ನು ಸಂದರ್ಶಿಸಿ ವಿಜಯನಗರಕ್ಕೆ ಮರಳುತ್ತಾರೆ.

ಆಡಳಿತ ವ್ಯವಸ್ಥೆ
ಈ ಆರಗ ರಾಜ್ಯದಲ್ಲಿ 18 ಕಂಪಣಗಳು (ಇಚ್ಛೆ 9 ಕಂಪಣ ಮತ್ತು ಈಳೆ 9 ಕಂಪಣ ಎಂಬ ವಿಭಾಗವಿತ್ತು) ಹಾಗೂ 3 ಪಟ್ಟಣಗಳು ಇದ್ದವು ಎಂದು ಶಾಸನಗಳು ತಿಳಿಸುತ್ತವೆ. ಬಳಗೋಡಿನ ಕ್ರಿ.ಶ. 1560ರ ಶಾಸನವೊಂದು ಆರಗ ರಾಜ್ಯದಲ್ಲಿ 50 ನಾಡುಗಳು ಅಂತರ್ಗತವಾಗಿದ್ದವು ಎಂದು ತಿಳಿಸುತ್ತದೆ. ಆರಗವನ್ನು ಕೇಂದ್ರವನ್ನಾಗಿಟ್ಟುಕೊಂಡು ತನ್ನ ಸುತ್ತಮುತ್ತಲಿನ ಅನೇಕ ಗ್ರಾಮಗಳ ಆಡಳಿತ ಕೇಂದ್ರವಾಗಿ ಮಧುವಂಕನಾಡು ಎಂಬ ಹೆಸರಿನಿಂದ ಖ್ಯಾತವಾಗಿತ್ತು. ಕರ್ನಾಟಕದ ಮೊದಲ ರಾಜವಂಶ ಕದಂಬರ ಬನವಾಸಿಯ ಮಧುಕೇಶ್ವರ ದೇವರ ಹೆಸರನ್ನು ಇದಕ್ಕೆ ಇಡಲಾಗಿತ್ತು ಎಂಬ ವಾದ ಇದೆಯಾದರೂ ಇದಕ್ಕೆ ಯಾವುದೇ ದಾಖಲೆಗಳಿಲ್ಲ. ತೀರ್ಥರಾಜಪುರ (ಈಗಿನ ತೀರ್ಥಹಳ್ಳಿ ಪಟ್ಟಣ), ಅತ್ತಿಗಾರು, ಅಲುಗವಳ್ಳಿ, ಬಾಳಗೋಡು, ಮಳಲಿ, ಜಂಬೆ, ಬಸವನಕಲ್ಲು, ನೆರಟೂರು, ಹೊರಣಿ, ಶಿವರಾಜಪುರ, ಯಡೇಹಳ್ಳಿ, ಸಾಲೂರು, ಕೊಡಸಗೊಳಿ, ಬಳ್ಳೂರು, ಸೂರಳಿ, ಮರಗಳಲೆ, ಜೆಗಟಿಗಾರೆ, ಮಹಿಷಿ, ಕೂಳೂರು, ಬಿಕ್ಕನೂರು, ಬಸವಾನಿ, ಮತ್ತೂರು ಮುಂತಾದ ಊರುಗಳು ಈ ನಾಡಿನಲ್ಲಿ ಇದ್ದವು. ಈ ನಾಡಿನ ವಿಶೇಷವೆಂದರೆ ಕೆಲವು ಗ್ರಾಮಗಳ ಸಮುಚ್ಚಯವನ್ನು ‘ಬಾಗೆ’ (ಭಾಗ) ಎಂದು ಕರೆಯುತ್ತಿದ್ದರು. ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆಗಳಿದ್ದವು. ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಸಾಲೂರು, ಕೋಳೂರುಗಳಿದ್ದವು. ಬೆಳ್ಳೂರು ಬಾಗೆಯಲ್ಲಿ ಭಾರತೀಪುರ ಹಾಗೂ ಭಾವರಸನ ಕೊಪ್ಪ ಗ್ರಾಮಗಳಿದ್ದವು. ಮಧುವಂಕ ನಾಡಿನಲ್ಲಿ ಕೆಲವು ಪಟ್ಟಡಿಗಳಿದ್ದವು. ಈ ಪಟ್ಟಡಿಗಳು ಕಂದಾಯ ವ್ಯವಸ್ಥೆಯ ಕೇಂದ್ರಭಾಗವಾಗಿದ್ದವು. ಕೊಡಸಗೊಳಿ ಪಟ್ಟಡಿಯಲ್ಲಿ ಬೊಬ್ಬಳ್ಳಿ, ವಡದಕೆರೆ ಗ್ರಾಮ, ಹಿಂಡಚವಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ ಹಾಗೂ ಕೇದಗೆ ಬಯಲು ಗ್ರಾಮಗಳಿದ್ದವು. ಜಂಬೇ ಪಟ್ಟಡಿಯಲ್ಲಿ ಮರಗಳಲೆ, ನಿರಜವಳ್ಳಿ ಹಾಗೂ ಬಸವನಕಲ್ಲು ಗ್ರಾಮಗಳಿದ್ದವು. ವಂಬೀ ಪಟ್ಟಡಿಯಲ್ಲಿ ಬಸವನಕಲ್ಲು(2) ಗ್ರಾಮವಿತ್ತು. ನೆರಟೂರು ಪಟ್ಟಿಡಿಯಲ್ಲಿ ಸೂರಳಿ ಗ್ರಾಮವಿತ್ತು.

ಮದವಳಿಗೆಯ ನಾಡು ಎಂಬ ಪ್ರದೇಶ ಇಲ್ಲಿತ್ತು ಎಂದು ಸ್ಪಷ್ಟಪಡಿಸುವ ಎರಡು ಶಾಸನಗಳು ಮೇಗರವಳ್ಳಿಯಲ್ಲಿದೆ. ಮೇಗರವಳ್ಳಿಯ ಕ್ರಿ.ಶ 08.08.1412ರ ಶಾಸನವು ಸ್ಪಷ್ಟವಾಗಿ ‘ಆರಗದ ವೇಂಠೆಯದ ಸೀತಳಿಗೆಯ ನಾಡ ಒಳಗಣ ಮದವಳಿಗೆ ನಾಡ ಒಳಗಣ ಮೇಗರವಳ್ಳಿಯ ಗ್ರಾಮ’ ಎಂದು ತಿಳಿಸುತ್ತದೆ. ಅಂದರೆ ‘ಆರಗ ರಾಜ್ಯದ ಸಾಂತಳಿಗೆ ಪ್ರಾಂತ್ಯದ ಮದವಳಿಗೆ ವಿಭಾಗದ ಗ್ರಾಮ ಮೇಗರವಳ್ಳಿ’ ಎಂದರ್ಥ. ಇದು ಈಗಿನ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದ ಮಾದರಿಯಂತಿದೆ. ಇದು ಆ ಸಮಯದ ಆಡಳಿತ ವ್ಯವಸ್ಥೆಗೆ ಒಂದು ಉದಾಹರಣೆಯಾಗಿದೆ. ಈ ಹಿಂದೆಯೇ ನಾಡುಗಳ ಕೇಂದ್ರವಾಗಿದ್ದ ಹೊಂಬುಜ, ಬೆಳುವೆಗಳು ಕ್ರಮೇಣ ಹೊಂಬುಜ ಸೀಮೆ ಹಾಗೂ ಬೆಳುವೆಯ ಸೀಮೆಗಳಾಗಿ ರೂಪಾಂತರಗೊಂಡಿತ್ತು. ಇನ್ನುಳಿದಂತೆ ಮೊಸರೂರು ಸೀಮೆ, ಮುತ್ತೂರು ಸೀಮೆ, ಮಾಳೂರು ಸೀಮೆ, ಸಿಡಿಯ ಚಿಕ್ಕನೂರು ಸೀಮೆ, ಕೊಳಾವರದ ಸೀಮೆ, ಬಸವಾನಿ ಸೀಮೆ, ಹಳಿವಾರ ಸೀಮೆ, ನೀರೀರಕಲ ಸೀಮೆ, ಹರಿಹರಪುರದ ಸೀಮೆಗಳು ಆರಗ ರಾಜ್ಯದಲ್ಲಿ ಅಂತರ್ಗತವಾಗಿದ್ದವು. ಇದರ ಜೊತೆಗೆ ಮಂಡಗದ್ದೆ ಸೀಮೆ, ಹಣಗೆರೆ ಸೀಮೆ ಹಾಗೂ ಹಲಸರ ಸೀಮೆಗಳು ಈ ರಾಜ್ಯದಲ್ಲಿ ಸೇರಿದ್ದವು. ಇದೆಲ್ಲವನ್ನು ಗಮನಿಸಿದಾಗ ‘ಆರಗ ರಾಜ್ಯ’ದ ಭೌಗೋಳಿಕ ವ್ಯಾಪ್ತಿಗೆ ಇಂದಿನ ಶಿವಮೊಗ್ಗ ಜಿಲ್ಲೆಯ ಹೊಸನಗರ, ಶಿವಮೊಗ್ಗ, ಸಾಗರ, ಸೊರಬ, ತೀರ್ಥಹಳ್ಳಿ ತಾಲೂಕುಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಭಾಗಗಳು ಸೇರಿತ್ತು ಎಂದು ಊಹಿಸಬಹುದು.

ವ್ಯಾಪಾರ ಕೇಂದ್ರ ಮತ್ತು ಸುಂಕ ವ್ಯವಸ್ಥೆ
ಆರಗ ರಾಜ್ಯದಲ್ಲಿ 8 ಪೇಟೆಗಳು ಇದ್ದವು. ಕವಲೇದುರ್ಗದ 1674ರ ಶಾಸನವು ಹೀಗೆ ದಾಖಲಿಸುತ್ತದೆ – ‘ಆರಗದ ವೆಂಟೆಯಕೆ ಸಲುವ ಆರಗ, ಕೊಡಲೂರು (ಕೊಂಡ್ಲೂರು), ಯೆಡೆಹಳ್ಳಿ, ಅವಿನಹಳ್ಳಿ, ಕಾರುಊರು, ಬಿದರೂರು, ಮೊಸರೂರು, ಮಾಳೇನಹಳ್ಳಿ ಸಹಾ ಯಂಟು ಪೇಟೆಗಳಲ್ಲಿ ಅರಮನೆಯ ಸುಂಕ. ಈ ಪೇಟೆಗಳಲಿ ಅಡಕೆ, ಮೆಣಸು, ಝಲಿಪಟಿ (ಜಾಯಿಕಾಯಿ ಇರಬಹುದು), ಖೊಬರಿ, ಕವಾಡ (ಸರಂಜಾಮು) ಮುಂತಾದ ಗಡಿಸಿನ ಸರಕು ಹೊರತಾಗಿ ಅಕ್ಕಿ, ಭತ್ತ, ರಾಗಿ, ಯೆಂಣೆ, ತುಪ್ಪ ಕಾಯಿ, ಬೆಲ್ಲ, ವಿದುಳ (ಧಾನ್ಯ) ಮುಂತಾಗಿ…’ ಎಂದು ಶಾಸನದಲ್ಲಿ ಬರೆಯಲಾಗಿದೆ. ಈ ಗ್ರಾಮಗಳಲ್ಲಿ ಅರಮನೆಯ ಅಧಿಕಾರಿಗಳ ಸುಂಕ ಸಂಗ್ರಹಣಾ ಕೇಂದ್ರಗಳಿದ್ದವು ಎಂದು ಉಲ್ಲೇಖಿಸಲಾಗಿದೆ. ಆಗ ತಾನೇ ಭಾರತಕ್ಕೆ ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಅರಬ್ಬರು ಪಶ್ಚಿಮ ಕರಾವಳಿಯ ಮೂಲಕ ವ್ಯಾಪಾರಕ್ಕಾಗಿ ಪ್ರವೇಶಿಸಿದ್ದರು. ಈ ಎಲ್ಲಾ ವ್ಯಾಪಾರ-ವ್ಯವಹಾರಗಳಿಗೆ ಕರಾವಳಿ ಹಾಗೂ ಘಟ್ಟದ ಮೇಲಿನ ಪ್ರದೇಶಕ್ಕೆ ಆರಗವು ಮುಖ್ಯ ಹೆಬ್ಬಾಗಿಲಾಗಿತ್ತು. ಆರಗ ರಾಜ್ಯ ವ್ಯಾಪ್ತಿಯು ವಿಜಯನಗರಕ್ಕೆ ಅತೀ ಹೆಚ್ಚು ಆದಾಯ ತರುತ್ತಿದ್ದ ಪ್ರದೇಶವಾಗಿತ್ತು. ಇಲ್ಲಿ ಅರಸೊತ್ತಿಗೆಯ ತಪಾಸಣಾ ಹಾಗೂ ಸುಂಕ ಸಂಗ್ರಹಣಾ ಕೇಂದ್ರವಿತ್ತು. ಕೆಳದಿ ಹಾಗೂ ವಿಜಯನಗರ ಅರಸರ ಕಾಲದಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಪುರಾತನ ಸಂಪರ್ಕ ಮಾರ್ಗ ಈಗಿನ ಯಡೂರು ಸಮೀಪದ ಮೇಲುಸುಂಕ ಗ್ರಾಮವಾಗಿತ್ತು. ಇದು ಘಟ್ಟದ ಗಡಿಯ ಮೇಲಿದ್ದು, ಇಲ್ಲಿ ಭತ್ತದ ತಪಾಸಣಾ ಹಾಗೂ ಸುಂಕ ಸಂಗ್ರಹಣಾ ಕೇಂದ್ರವಿದ್ದುದರಿಂದ ಈ ಪ್ರದೇಶಕ್ಕೆ ಮೇಲುಸುಂಕ ಎಂಬ ಹೆಸರು ಬಂತು. ಹಾಗೆಯೇ ಘಟ್ಟದ ಕೆಳಗೆ ಕೆಳಸುಂಕ ಎಂಬ ಹಳ್ಳಿ ಇದ್ದು, ಈಗ ಅದು ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿದೆ.

ವಾಣಿಜ್ಯ ವಹಿವಾಟು ಮತ್ತು ರಫ್ತು
ಸಾಂಬಾರ ಪದಾರ್ಥಗಳು ಆರಗದ ಮೂಲಕ ಬಾರಕೂರು ಬಂದರಿಗೆ ಆಗುಂಬೆ-ಸೋಮೇಶ್ವರ ಘಾಟಿ ರಸ್ತೆ, ಮೇಲುಸುಂಕ-ತೊಂಬಟ್ಟು (ಅಮಾಸೆಬೈಲು) ಘಾಟಿ ರಸ್ತೆ ಮತ್ತು ಬಾಳೆಬರೆ (ಹುಲಿಕಲ್ಲು) ಘಾಟಿಯ ಮಣ್ಣಿನ ರಸ್ತೆಯ ಮೂಲಕ ರವಾನೆಯಾಗುತ್ತಿತ್ತು. ಬಾರಕೂರಿನಿಂದ ವಿಜಯನಗರದ ಅಧೀನದಲ್ಲಿದ್ದ ಗೋಪಕಾಪಟ್ಟಣ ಅಥವಾ ಗೋಪಿಕಾಪುರ (ಇಂದಿನ ಗೋವಾ) ಬಂದರಿನ ಮೂಲಕ ಸ್ಪೇನ್, ಪೋರ್ಚುಗಲ್, ಅರಬ್, ಇಂಗ್ಲೆಂಡ್, ಪರ್ಷಿಯಾ ಮುಂತಾದ ದೇಶಗಳಿಗೆ ರಫ್ತಾಗುತ್ತಿತ್ತು. ಆರಗ ಸಮೀಪದ ದಾವಣಿ ಬೈಲು (ದಾವಣಿ ಎಂದರೆ ಜಾನುವಾರುಗಳನ್ನು ಕಟ್ಟುವ ಹಗ್ಗ) ಎಂಬಲ್ಲಿ ಸರಕು ಸರಂಜಾಮುಗಳನ್ನು ಸಾಗಿಸುವ ಗಾಡಿಗಳ ಜಾನುವಾರುಗಳಿಗೆ (ಎತ್ತು, ಕುದುರೆ, ಆನೆ ಇತ್ಯಾದಿ) ನಿಗದಿಪಡಿಸಿದ ವಿಶ್ರಾಂತಿ ಸ್ಥಳ ಇದೆ. ಇಲ್ಲಿ ಕಪಿಲೇಶ್ವರ ದೇವಾಲಯವೂ ಇದೆ.

ವಿಜಯನಗರದ ಅರಸರಿಗೆ ಆಶ್ರಯತಾಣ
ವಿಜಯನಗರದ ಕೊನೆಯ ಅರಸು ಅರವೀಡು ವಂಶದ ಎರಡನೇ ರಂಗರಾಯ, ಬಹಮನಿ ಸುಲ್ತಾನರ ದಾಳಿ ಮತ್ತು ಆಂತರಿಕ ಕಲಹದಿಂದ ತನ್ನ ರಾಜ್ಯವನ್ನು ಕಳೆದುಕೊಂಡು ಕೆಳದಿಯ ಶಿವಪ್ಪನಾಯಕನ ಬಳಿ ಆಶ್ರಯ ಅರಸಿಕೊಂಡು ಬರುತ್ತಾನೆ. ಶಿವಪ್ಪನಾಯಕನು ರಂಗರಾಯನನ್ನು ಆರಗ ಸಮೀಪದ ಕವಲೇದುರ್ಗ ಕೋಟೆಯಲ್ಲಿ ಭದ್ರವಾಗಿ ಉಳಿಸಿಕೊಂಡು ರಕ್ಷಣೆ ನೀಡುತ್ತಾನೆ. ರಂಗರಾಯನು ಕವಲೇದುರ್ಗದಲ್ಲಿ ಚಿಕ್ಕ ವೀರಾಂಜನೇಯನ ವಿಗ್ರಹ ಪ್ರತಿಷ್ಠಾಪಿಸಿ, ಆರಗದಲ್ಲಿ ದೊಡ್ಡ ವೀರಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. ಮಾಸ್ತಿಕಲ್ಲು, ವೀರಗಲ್ಲು ಹಾಗೂ ಶಿಲಾಶಾಸನಗಳು ಆರಗ ಪ್ರಾಂತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ.

ಧಾರ್ಮಿಕ ಸ್ಥಿತಿ
ವಿಜಯನಗರ ಹಾಗೂ ಕೆಳದಿಯ ಅರಸರು ಸರ್ವಧರ್ಮ ಸಹಿಷ್ಣುತೆಗೆ ಹೆಸರಾದವರು. ಇವರ ಕಾಲದಲ್ಲಿ ಹಲವಾರು ವೈಷ್ಣವ ಹಾಗೂ ಶೈವ ದೇವಾಲಯಗಳು, ಜೈನ ಬಸದಿಗಳು ಅರಗದಲ್ಲಿ ನಿರ್ಮಾಣವಾಗಿವೆ. ಇವುಗಳಲ್ಲಿ ಕಲ್ಲೇಶ್ವರ, ಅಘೋರೇಶ್ವರ, ದೊಡ್ಡ ವೀರಾಂಜನೇಯ, ವೀರಭದ್ರ, ಅಖಂಡೇಶ್ವರ, ತಿರುಪತಿ ತಿಮ್ಮಪ್ಪನ ಮೂಲ ಸ್ಥಳವಾದ ಅರುಣಗಿರಿ ವೆಂಕಟರಮಣ, ದುರ್ಗಾ ಪರಮೇಶ್ವರಿ, ಜೈನ ತೀರ್ಥಂಕರರ ಬಸದಿಗಳು, ನರಸಿಂಹ, ನೀಲಕಂಠೇಶ್ವರ, ಅಮೃತೇಶ್ವರ, ಕಲಾನಾಥೇಶ್ವರ ದೇವಾಲಯಗಳು ಪ್ರಮುಖವಾದವು.

ವಿಪ್ರರ ಸ್ಥಿತಿಗತಿಗಳು ಮತ್ತು ಅಗ್ರಹಾರಗಳು
ವಿಜಯನಗರ ಮತ್ತು ಕೆಳದಿ ಅರಸರು ವಿಪ್ರರಿಗೆ ವಾಸಿಸಲು ಅಗ್ರಹಾರಗಳು ಮತ್ತು ದೇವಸ್ಥಾನಗಳನ್ನು ನಿರ್ಮಿಸಿ ದಿನನಿತ್ಯ ಪೂಜೆ, ಸಂಗೀತ, ವೇದಪಾಠ, ಸಾಹಿತ್ಯ ಸಂಬಂಧೀ ಚಟುವಟಿಕೆಗಳು ನಡೆಯುವಂತೆ ವ್ಯವಸ್ಥೆ ಮಾಡಿದ್ದರು. ಭೂಮಿ, ಗದ್ದೆ ಮತ್ತು ತೋಟಗಳನ್ನು ಅಗ್ರಹಾರಗಳ ಆದಾಯಕ್ಕಾಗಿ ಉಂಬಳಿಯಾಗಿ ನೀಡಿದ್ದರು. ಬೇರೆ ಬೇರೆ ಪ್ರದೇಶಗಳಿಂದ ವಿಪ್ರರನ್ನು ಅಗ್ರಹಾರಗಳಿಗೆ ಕರೆತಂದು ಅವರಿಗೆ ವಾಸಿಸಲು ಮತ್ತು ನಿತ್ಯ ಅನುಷ್ಠಾನಗಳನ್ನು ನಿರ್ವಹಿಸಲು ಸೌಕರ್ಯಗಳನ್ನು ನೀಡಿದ್ದರು. ಭಾರತೀಪುರ ಹಾಗೂ ಹುಂಚದ ಕಟ್ಟೆಯ ಶಾಸನಗಳು ಆರಗ ರಾಜ್ಯದಲ್ಲಿ ಪ್ರಮುಖವಾದ 60 ಅಗ್ರಹಾರಗಳಿದ್ದವು ಎಂದು ತಿಳಿಸುತ್ತದೆ. ಅಗಳಬಾಗಿಲು ಹತ್ತಿರದ ಸದಾಶಿವ ಅಗ್ರಹಾರವು 1545ರಲ್ಲಿ ಮಂತ್ರಿ ಮಾದಪ್ಪನಿಂದ ವಿಜಯನಗರದ ಅರಸನಾಗಿದ್ದ ಸದಾಶಿವರಾಯನ ಹೆಸರಿನಲ್ಲಿ ಸ್ಥಾಪನೆಯಾಯಿತು. ಈ ಅಗ್ರಹಾರ ಆರಗ ರಾಜ್ಯದ ಅಗ್ರಹಾರಗಳಿಗೆಲ್ಲಾ ಕೇಂದ್ರವಾಗಿದ್ದು ಇದನ್ನು ‘ಯಜಮಾನ ಅಗ್ರಹಾರ’ ಎಂದು ಶಾಸನದಲ್ಲಿ ಬರೆಯಲಾಗಿದೆ. ಆರಗ ನಾಡಿನಲ್ಲಿ ವಿರೂಪಾಂಬಿಕಾಪುರ, ವಿರೂಪಾಕ್ಷಪುರ, ನಾಗಸಮುದ್ರ, ಅಭಿನವ ಗೋಪಿನಾಥಪುರ, ಮಾಯಿಸೆ, ಬುಕ್ಲಾಪುರ, ಸದಾಶಿವ, ಬೊಮ್ಮರಸಯ್ಯ, ತ್ರಿಯಂಬಕಪುರ, ಶಿವರಾಜಪುರ, ಅರಳಾಪುರ, ಅರಳಸುರಳಿ, ಅಕ್ಲಾಪುರ ಮುಂತಾದ ಪ್ರಮುಖ ಅಗ್ರಹಾರಗಳಿದ್ದವು. 1404ನೆಯ ಇಸವಿಯಲ್ಲಿ ವಿಜಯನಗರದ ಅರಸ ಎರಡನೇ ಹರಿಹರರಾಯನು ಮರಣ ಹೊಂದಿದಾಗ ಅವರಿಗೆ ಮುಕ್ತಿ ದೊರಕಲೆಂದು ಆರಗದ ರಾಜ್ಯಪಾಲ ವಿಠಣ್ಣ ಒಡೆಯರ್ ಸಾಲೂರಿನ ಹತ್ತಿರ ‘ಮುಕ್ತಿಹರಿಹರಪುರ’ ಅಗ್ರಹಾರವನ್ನು ಸ್ಥಾಪಿಸಿದರು. ತೂದೂರು ಹತ್ತಿರದ ಗಬಡಿಯಲ್ಲಿ ವಿಜಯನಗರದ ಅರಸ ಕೃಷ್ಣದೇವರಾಯನ ತಾಯಿ ನಾಗಲಾಂಬಿಕಾ ದೇವಿಯ ಹೆಸರಿನಲ್ಲಿ ನಾಗಲಾಪುರ ಅಗ್ರಹಾರವನ್ನು ಸ್ಥಾಪಿಸಲಾಯಿತು. ಆರಗದ ರಾಜನಾಗಿದ್ದ ವಿರೂಪಾಕ್ಷರಾಯನ ಹೆಸರಿನಲ್ಲಿ ವಿರೂಪಾಕ್ಷಪುರ (ವಿರುಪಾಪುರ) ಅಗ್ರಹಾರವನ್ನು ಸ್ಥಾಪಿಸಲಾಯಿತು.

ಆರಗ ರಾಜ್ಯದ ನಿರ್ಗಮನ
ಸೋರಣ್ಣ ಒಡೆಯ, ಜನ್ನರಸ ರಾಯ, ವಿಶ್ವಪ್ಪ ಒಡೆಯ, ಲಿಂಗಣ್ಣ ಒಡೆಯ, ಸಿರಿಗಿನಾಥ ಒಡೆಯ, ದೇವಪ್ಪ ದಂಡನಾಯಕ ಸೇನಬೋವ (ಸೇನಾಪತಿ ಮತ್ತು ಮಂತ್ರಿ), ಹರಿಯಪ್ಪ, ಸಿಂಗರಸ ಮುಂತಾದವರ ಆಳ್ವಿಕೆಗೊಳಪಟ್ಟ ಆರಗ ವಿಜಯನಗರದ ಪ್ರಾಮುಖ್ಯತೆ ಕಡಿಮೆಯಾದಂತೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾ ಬಂತು. ಕ್ರಿ.ಶ.1500 ರಲ್ಲಿ ವಿಜಯನಗರದ ಕೃಷ್ಣದೇವರಾಯನು ಕೆಳದಿಯ ಚೌಡಪ್ಪ ನಾಯಕನನ್ನು ಸಾಮಂತ ರಾಜನನ್ನಾಗಿ ಮಾಡಿದನು. ವಿಜಯನಗರ ಸಾಮ್ರಾಜ್ಯದ ಪತನಾನಂತರ ಬಹುತೇಕ ಆರಗ ರಾಜ್ಯವು ಕೆಳದಿಯ ಅರಸರ ಆಡಳಿತಕ್ಕೆ ಬಂತು ಎಂದು ಕ್ರಿ.ಶ. 1695ರ ಶಾಸನದಲ್ಲಿ ದಾಖಲಾಗಿದೆ. ಕೆಳದಿ ಸದಾಶಿವನಾಯಕನು ವಿಜಯನಗರದ ಅರಸರ ಅನುಮತಿ ಪಡೆದು ಆರಗದಿಂದ ಕೆಳದಿಗೆ ತನ್ನ ಶಕ್ತಿಕೇಂದ್ರವನ್ನು ವರ್ಗಾಯಿಸಿದ ನಂತರ ಆರಗವು ತನ್ನ ಮಹತ್ವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೆಳದಿಯ ಅರಸರಾದ ವೆಂಕಟಪ್ಪ ನಾಯಕ, ಸದಾಶಿವ ನಾಯಕ, ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಮುಂತಾದವರು ಇಲ್ಲಿ ಆಳಿದ್ದಾರೆ. ಕೆಳದಿ ಅರಸರ ನಂತರ ಈ ಪ್ರದೇಶ ಹೈದರಾಲಿ-ಟಿಪ್ಪು ಸುಲ್ತಾನ್ ಕೈವಶವಾಯಿತು. ಕೆಳದಿ-ಇಕ್ಕೇರಿ, ಬಿದನೂರು-ನಗರ ಮತ್ತು ಕವಲೇದುರ್ಗದಲ್ಲಿ ಶಕ್ತಿಕೇಂದ್ರಗಳು ಬೆಳೆದಾಗ ಆರಗದ ಪ್ರಾಮುಖ್ಯತೆ ಸಹಜವಾಗಿ ಕಡಿಮೆಯಾಗುತ್ತಾ ಬಂತು. 1776ನೇ ಇಸವಿಯಲ್ಲಿ ಹೈದರಾಲಿಯು ಆಡಳಿತದ ದೃಷ್ಟಿಯಿಂದ ಆರಗವನ್ನು ‘ಹೈದೆರ್ ನಗರ (ಬಿದನೂರು) ಸೀಮೆ’ಯ ವ್ಯಾಪ್ತಿಯ 48 ಗಡಿಗಳಲ್ಲೊಂದಾಗಿ ವಿಭಾಗಿಸಿದನು. ನಂತರ ಸ್ವಲ್ಪ ಕಾಲ ಮರಾಠರ ಹಾಗೂ ಮೈಸೂರು ಒಡೆಯರ ಆಡಳಿತಕ್ಕೊಳಪಟ್ಟು ಬ್ರಿಟಿಷ್ ಸರ್ಕಾರದ ಆಡಳಿತದಡಿ ಬಂತು. ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯದ ಭಾಗವಾಯಿತು.

ಪುರಂದರ ದಾಸರು ಹುಟ್ಟಿದ್ದು ಇಲ್ಲಿ !
ಹೌದು, ಕರ್ನಾಟಕ ಸಂಗೀತ ಪಿತಾಮಹ, ಕರ್ನಾಟಕ ಶಾಸ್ತ್ರೀಯ ಸಂಗೀತದ ಆಧಾರ ಸ್ಥಂಭಗಳಲ್ಲಿ ಒಬ್ಬರಾದ, ಭಕ್ತಿ ಪಂಥದ ಹರಿಕಾರ ಪುರಂದರ ದಾಸರು ಆರಗದಲ್ಲಿ ಜನಿಸಿದರು. ಇದುವರೆಗೂ ಪುರಂದರ ದಾಸರ ಹುಟ್ಟೂರು ಎಂದು ನಂಬಿದ್ದ ಪುಣೆ ಬಳಿ ಇರುವ ಪುರಂದರಗಡ ಅಥವಾ ಬಳ್ಳಾರಿಯ ಹೊಸಪೇಟೆ ಎಂಬ ಜಿಜ್ಞಾಸೆಗೆ ಈಗಾಗಲೇ ತೆರೆ ಬಿದ್ದಿದೆ. ಪುರಂದರ ದಾಸರ ಮಾತೃ ಭಾಷೆ ತೆಲುಗು ಎಂಬ ವಾದವೂ ಇತ್ತು. 2018ರಲ್ಲಿ ಸರಕಾರ ಪುರಂದರದಾಸರ ಹುಟ್ಟೂರಿನ ಬಗ್ಗೆ ಅಧ್ಯಯನ ನಡೆಸಲು ಐದು ಜನರ ಸಮಿತಿ ರಚಿಸಿತ್ತು. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನೇಮಕ ಮಾಡಿದ್ದ ಈ ತಂಡದಲ್ಲಿ ಅಧ್ಯಕ್ಷರಾಗಿ ಹಿರಿಯ ಸಂಗೀತ ವಿದ್ವಾಂಸ ಪದ್ಮಭೂಷಣ ಆರ್‌.ಕೆ.ಪದ್ಮನಾಭ, ಸದಸ್ಯರಾಗಿ ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌, ವಿದ್ವಾಂಸ ಎ. ವಿ. ನಾವಡ, ವಿದ್ವಾಂಸ ವೀರಣ್ಣ ರಜೋರಾ, ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಇದ್ದು, ಶಿವಾನಂದ ವಿರಕ್ತಮಠ ಸಂಚಾಲಕರಾಗಿದ್ದರು. ಈ ಸಮಿತಿಯು ಆರಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐತಿಹಾಸಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ‘ಆರಗದ ಕ್ಷೇಮಪುರ (ಕೇಶವಾಪುರ) ಪುರಂದರ ದಾಸರ ಹುಟ್ಟೂರು’ ಎಂದು ಅಂತಿಮ ವರದಿ ನೀಡಿದೆ. ಸರಕಾರದ ಅಧಿಕೃತ ಘೋಷಣೆ ಬಾಕಿ ಇದ್ದು, ಆರಗಕ್ಕೆ ಪುರಂದರ ದಾಸರ ಸ್ಮಾರಕ ಹಾಗೂ ಐತಿಹಾಸಿಕ ಸ್ಥಳದ ಸ್ಥಾನಮಾನವನ್ನೂ ನೀಡಬೇಕಾಗಿದೆ. 1987ರಲ್ಲೇ ಕಟರಾಳ ಕೃಷ್ಣರಾಯರು ಆರಗವೇ ಪುರಂದರದಾಸರ ಹುಟ್ಟೂರೆಂದು ಪ್ರತಿಪಾದಿಸಿದ್ದರು. ಕ್ರಿ.ಶ 1484ರಲ್ಲಿ ಜನಿಸಿದ ಪುರಂದರ ದಾಸರು ಕ್ರಿ.ಶ 1565ರಲ್ಲಿ ಕಾಲವಾದರು. ಪುರಂದರ ದಾಸರ ತಂದೆಯ ಹೆಸರು ವರದಪ್ಪ ನಾಯಕ ಹಾಗೂ ತಾಯಿಯ ಹೆಸರು ಲಕ್ಷ್ಮೀದೇವಿ. ಪುರಂದರ ದಾಸರು ನಾರದರ ಅವತಾರ ಎಂದು ನಂಬಲಾಗಿದೆ. ಪುರಂದರ ದಾಸರ ಮೂಲ ಹೆಸರು ಶ್ರೀನಿವಾಸ ನಾಯಕ (ನವಕೋಟಿ ನಾರಾಯಣ), ವೃತ್ತಿಯಲ್ಲಿ ವಜ್ರ ವೈಢೂರ್ಯಗಳ ವರ್ತಕರು. ಅಂದರೆ ವಿಜಯನಗರ ಕಾಲದ ಸಮೃದ್ಧತೆಯ ಸಂಕೇತವೂ ಈ ಸಂಗತಿಯಲ್ಲಿದೆ. ಇವರ ಪತ್ನಿ ಸರಸ್ವತಿಬಾಯಿ ಮತ್ತು ಮಕ್ಕಳು ವರದಪ್ಪ, ಗುರುರಾಯ, ಅಭಿನವಪ್ಪ ಮತ್ತು ಮಧ್ವಪತಿ. ಜೀವನದಲ್ಲಿ ವೈರಾಗ್ಯ ಹೊಂದಿ ಹರಿ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ವಿಜಯನಗರದ ಹಂಪೆಗೆ ತೆರಳಿದ ಶ್ರೀನಿವಾಸ ನಾಯಕರಿಗೆ ವ್ಯಾಸರಾಜರು ಹರಿದಾಸ ದೀಕ್ಷೆ ನೀಡಿ ‘ಪುರಂದರ ವಿಠಲ’ ಎಂಬ ಅಂಕಿತನಾಮ ನೀಡಿದರು. ಪುರಂದರದಾಸರು ಸುಮಾರು 4.75 ಲಕ್ಷ ಕೀರ್ತನೆ ರಚಿಸಿದ್ದು ಹಾಗೂ 25 ಸಾವಿರ ಕೀರ್ತನೆಗಳನ್ನು ಇವರ ಮಗ ಮಧ್ವಪತಿದಾಸರು ಬರೆದರು ಎಂಬ ಪ್ರತೀತಿ ಇದೆ. ಆದರೆ ಇವುಗಳಲ್ಲಿ ಸುಮಾರು ಐದು ಸಾವಿರ ಕೀರ್ತನೆಗಳು ಮಾತ್ರ ಈಗ ಲಭ್ಯವಾಗಿದೆ. ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಗುರುಗಳಾದ ವ್ಯಾಸರಾಜರೇ ಹೊಗಳಿದ್ದಲ್ಲದೇ ಅವರ ಕೃತಿಗಳಿಗೆ ‘ಪುರಂದರೋಪನಿಷತ್’ ಎಂಬ ಗೌರವವನ್ನೂ ನೀಡಿದ್ದಾರೆ. ಆರಗ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿದ್ದನ್ನು ಇತಿಹಾಸ ಹೇಳುತ್ತದೆ. ಅರಸರು ವರ್ತಕರಿಗಾಗಿಯೇ ವಿಶಾಲ ಜಾಗದ ವ್ಯವಸ್ಥೆ ಮಾಡಿದ್ದು, ಈಗಲೂ ಇಲ್ಲಿ ಕೇಶವಾಪುರ, ವರ್ತೇಕೇರಿ (ವ್ಯಾಪಾರ ಸ್ಥಳ), ಸಂತೇವೇರಿ (ಶಾಂತವೇರಿ), ವಿಠಲಗುಡಿ, ಕಾಳಮ್ಮನಗುಡಿ ಎಂಬ ಹೆಸರಿನ ಪ್ರದೇಶಗಳಿವೆ. ಗೋಪಿನಾಥ ಹೊಳೆ, ವಿಠಲಯ್ಯನ ಗದ್ದೆ, ವಿಠಲನ ಗುಂಡಿ, ಅರುಣಗಿರಿ ವೆಂಕಟರಮಣ ದೇವಸ್ಥಾನವೂ ಇದೆ. ಪುರಂದರ ದಾಸರಿಗೆ ವಿಜಯನಗರದ ಅರಸರು ಉಂಬಳಿಯಾಗಿ ನೀಡಿದ್ದ ಗದ್ದೆಗಳ ಕಾರಣ ಈ ಭಾಗದಲ್ಲಿ ‘ದಾಸನಗದ್ದೆ’ ಎಂಬ ಎರಡು ಊರುಗಳು ಸಹಾ ಇವೆ.

ಹೀಗೆ ಆರಗವು ಕರ್ನಾಟಕದ ಒಂದು ಐತಿಹಾಸಿಕ ರಾಜಧಾನಿ ಎಂದರೆ ಅತಿಶಯೋಕ್ತಿಯಲ್ಲ. ಈ ಬಗ್ಗೆ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಾಯ ಇಲಾಖೆ, ಸಂಗೀತ ಅಕಾಡೆಮಿ, ಇತಿಹಾಸ ಅಕಾಡೆಮಿ, ಪುರಾತತ್ವ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳು ಒಂದು ವಿಸ್ತೃತ ಅಧ್ಯಯನ ನಡೆಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ದಾಖಲಿಸಬೇಕಾಗಿದೆ. ಹಾಗೆಯೇ ಐತಿಹಾಸಿಕ ಪುರಂದರ ದಾಸ ಸ್ಮಾರಕ, ವಸ್ತುಸಂಗ್ರಹಾಲಯ, ಪಾಳುಬಿದ್ದಿರುವ ಹತ್ತಾರು ದೇವಾಲಯ ಹಾಗೂ ಬಸದಿಗಳ ಜೀಣೋದ್ಧಾರಗಳನ್ನು ಮಾಡಿ ಭಾರತದ ಪ್ರವಾಸಿ ಭೂಪಟದಲ್ಲಿ ಪ್ರಮುಖ ಸ್ಥಾನವನ್ನೂ ನೀಡಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ…

✍️ ರಾಘವೇಂದ್ರ ಅಡಿಗ ತೀರ್ಥಹಳ್ಳಿ
ಮೊ: 9164742218
ಇ : adigatvr@gmail.com

B. Y. Raghavendra ಶಿವಮೊಗ್ಗದಲ್ಲಿ ಆಯುರ್ವೇದ & ನ್ಯಾಚುರೋಪಥಿ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಚಿವರೊಂದಿಗೆ ಸಂಸದ ರಾಘವೇಂದ್ರ ಚರ್ಚೆ

0

B. Y. Raghavendra ಶಿವಮೊಗ್ಗದಲ್ಲಿ ಅಖಿಲ ಭಾರತ ಮಟ್ಟದ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದಂತೆ, ಪೂರ್ವದಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಕೇಂದ್ರ ಆಯುಷ್ ರಾಜ್ಯ ಸಚಿವರಾದ ಶ್ರೀ ಪ್ರತಾಪ್ ರಾವ್ ಜಿ ಜಾಧವ್ ಅವರೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು
ಚರ್ಚೆ ನಡೆಸಿದರು

B. Y. Raghavendra ಈ ದಿಕ್ಕಿನಲ್ಲಿ ಮುಂದಿನ ಹಂತಗಳ ಬಗ್ಗೆ ಸಕಾರಾತ್ಮಕ ಮಾತುಕತೆ ನಡೆಯಿತು. ಇತ್ತೀಚಿನ ಕೇಂದ್ರ ಬಜೆಟ್‌ ಭಾರತೀಯ ಸಂಪ್ರದಾಯಬದ್ಧ ಆಯುರ್ವೇದಕ್ಕೆ ಹೊಸ ಉತ್ತೇಜನ ನೀಡಿದ್ದು, ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ಪರಿಹಾರವಾಗಿ ಅದರ ಪಾತ್ರವನ್ನು ಬಲಪಡಿಸಿದೆ. ಜೊತೆಗೆ ಯೋಗವನ್ನು ದಿನನಿತ್ಯದ ಜೀವನಶೈಲಿಯಾಗಿ ಸದಾ ಉತ್ತೇಜಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಈ ಮಹತ್ವದ ಪ್ರಸ್ತಾವನೆಗೆ ಅಗತ್ಯವಾದ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

Water Tax ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್.

0

Water Tax ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2025-26 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ಫೆ. 15 ರ ಭಾನುವಾರದಂದು ಎ.ಎನ್.ಕೆ.ರಸ್ತೆ, ಜಿಲ್ಲಾ ಪಂಚಾಯತ್ ಹಿಂಭಾಗ, ಗಾಂಧೀನಗರ, ಶಾಂತಿನಗರದ ಯಲ್ಲಮ್ಮ ದೇವಸ್ಥಾನದ ಹತ್ತಿರ, ಪುರಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ, ಬೊಮ್ಮನಕಟ್ಟೆ ಅಪೂರ್ವ ಕಾಲೇಜಿನ ಹತ್ತಿರ ಹಾಗೂ ಕಾಶೀಪುರ ಮುಖ್ಯರಸ್ತೆ ಕೆನರಾ ಬ್ಯಾಂಕ್ ಹತ್ತಿರ ವಿಶೇಷ ಕರ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.
Water Tax ಸಾರ್ವಜನಿಕರು ಇದರ ಸದುಪಯೋಗ ಪಡೆದು ನೀರಿನ ಬಾಕಿ ಕಂದಾಯ ಹಾಗೂ ಬಾಕಿ ಕರವಸೂಲಾತಿ ಉಳಿಸಿಕೊಂಡಿರುವ ಗ್ರಾಹಕರು ಕಂದಾಯ ಪಾವತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Marikamba Jatra 2026 ಮಾರಿಕಾಂಬ ಜಾತ್ರೆ ಫೆಬ್ರವರಿ 24 ರಿಂದ 28 ವರೆಗೆ ಆಯೋಜನೆ. ಅದ್ಧೂರಿ ಉತ್ಸವದ ಪೋಸ್ಟರ್ ಬಿಡುಗಡೆ.

0

Marikamba Jatra 2026 ಇತಿಹಾಸ ಪ್ರಸಿದ್ಧ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

ಫೆಬ್ರವರಿ 24 ರಿಂದ 28 ರವರೆಗೆ ನಡೆಯಲಿರುವ ಈ ಅದ್ಧೂರಿ ಉತ್ಸವದ ಪೋಸ್ಟರ್ ಅನ್ನು ದೇವಾಲಯದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ಎಸ್. ಕೆ. ಮರಿಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಸೇರಿದಂತೆ ಹಲವು ಪದಾಧಿಕಾರಿಗಳು ಪೋಸ್ಟರ್‌ಗಳನ್ನು ಅನಾವರಣಗೊಳಿಸಿದರು. ಸಂಪ್ರದಾಯದಂತೆ ಶಿವಮೊಗ್ಗ ನಗರದ ಆಟೋ ರಿಕ್ಷಾಗಳ ಹಿಂಭಾಗದಲ್ಲಿ ಜಾತ್ರೆಯ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸಾರ್ವಜನಿಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

Marikamba Jatra 2026 ಈ ಸಂದರ್ಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಮಾತನಾಡಿ, ಜಾತ್ರೆಯ ಅಂಗವಾಗಿ ಈ ಬಾರಿ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರಿಕೆಟ್ ಟೂರ್ನಮೆಂಟ್ ಹಾಗೂ ರಾಜ್ಯ ಮಟ್ಟದ ಟಗರು ಕಾಳಗದ ಪೋಸ್ಟರ್‌ಗಳನ್ನೂ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಫೆಬ್ರವರಿ 14 ರಂದು ಮಂಡಳಿ ಯುವಕರ ತಂಡದ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗಿದ್ದರೆ, ಫೆಬ್ರವರಿ 21 ಮತ್ತು 22 ರಂದು ನಗರದ ಸೈನ್ಸ್ ಮೈದಾನದಲ್ಲಿ ರಾಜ್ಯ ಮಟ್ಟದ ಟಗರು ಕಾಳಗ ನಡೆಯಲಿದೆ. ಈ ರೋಚಕ ಸ್ಪರ್ಧೆಗೆ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯ ಮೆರುಗನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.

Bhagavad Gita ಭಗವದ್ಗೀತೆ ಮತ್ತು ಅಪರಾಧ ಶಾಸ್ತ್ರ…ಮಾಲಿಕೆಭಾಗ-4. ( ಅಂತಿಮ ಕಂತು)

0

ಲೇ: ಡಾ.ರಾಮಕೃಷ್ಣ ಮುದ್ದೇಪಾಲ.
” ಸರ್ವರಿಗೂ ಭವದ್ಗೀತೆ”

Bhagavad Gita ಗೀತೆಯ ಬೋಧೆ ಕರ್ತವ್ಯ ಕರ್ಮದ ಪವಿತ್ರತೆಯನ್ನು ಒತ್ತಿ ಹೇಳುತ್ತದೆ. ಅಪರಾಧ ತಡೆ, ಅಪರಾಧ ಮತ್ತು ಅಪರಾಧಿಗಳ ಪತ್ತೆ, ಸಮಾಜದಲ್ಲಿ ಶಾಂತಿ ಪಾಲನೆಯ ಜವಾಬ್ದಾರಿಯನ್ನು ಹೊತ್ತಿರುವ ಆರಕ್ಷಕರು ಭಗವದ್ಗೀತೆಯಿಂದ ಪ್ರೇರೇಪಣೆ ಪಡೆದರೆ ಪ್ರಾಮಾಣಿಕತೆ, ಸತ್ಯನಿಷ್ಠೆ, ನಿರಪೇಕ್ಷತೆ, ನ್ಯಾಯ ಸಂವೇದನೆ ಮತ್ತು ಆತ್ಮಸಂಯಮಗಳೊಂದಿಗೆ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ಕಾರ್ಯನಿರ್ವಹಿಸಿದರೆ ಅಪರಾಧ ನಿಯಂತ್ರಣ ಸಾಧ್ಯ. ಭಗವದ್ಗೀತೆಯ ಉಪದೇಶಗಳು ಆರಕ್ಷಕಸೇವೆಯ ಮೂಲಸಿದ್ಧಾಂತಗಳೊಂದಿಗೆ ತಾಳೆಯಾಗುತ್ತವೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದರೊಂದಿಗೆ ಅವರನ್ನು ಪರಿವರ್ತಿಸಲು ಆರಕ್ಷಕರು ಮತ್ತು ಕಾರಾಗೃಹ ಇಲಾಖೆಯವರು ಶ್ರಮಿಸಬೇಕು.
ಅಪರಾಧಿಗಳಿಗೆ ಭಗವದ್ಗೀತೆ: ಬಾಲಾಪರಾಧಿಗಳಿಗೆ, ಸಾಧಾರಣ ಅಪರಾಧಿಗಳಿಗೆ, ರೂಢಿಗತ ಅಪರಾಧಿಗಳಿಗೆ, ಸಾಂದರ್ಭಿಕ ಅಪರಾಧಿಗಳಿಗೆ, ಆರೋಪಿಗಳಿಗೆ ಮತ್ತು ವಿಚಾರಣಾಧೀನ ಕೈದಿಗಳಿಗೆ ಭಗವದ್ಗೀತೆಯ ಶಿಕ್ಷಣ ಪರಿವರ್ತನೆಯ ದಾರಿದೀಪವಾಗಬಹುದು.
ಕೇವಲ ಶಿಕ್ಷೆ ನೀಡುವುದು ನ್ಯಾಯಾಂಗ ವ್ಯವಸ್ಥೆಯ ಉದ್ದೇಶವಲ್ಲ. ಅಪರಾಧಿಗಳನ್ನು ಪರಿವರ್ತಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ನ್ಯಾಯಾಂಗ ವ್ಯವಸ್ಥೆಯ ಆಶಯ. ಆದ್ದರಿಂದ ಕಾರಾಗೃಹ ಇಲಾಖೆಯನ್ನು ಇದೀಗ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಎಂದು ಕರೆಯಲಾಗುತ್ತಿದೆ.
ಭಾರತದ ಹಲವು ಕಾರಾಗೃಹಗಳಲ್ಲಿ ಪುನರ್ವಸತಿ ಮತ್ತು ನೈತಿಕ ಸುಧಾರಣೆಯ ಭಾಗವಾಗಿ ಕೈದಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುತ್ತಿದೆ. ಇವುಗಳಿಂದ ಕೈದಿಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿರುತ್ತದೆ. ದೆಹಲಿಯ ತಿಹಾರ ಜೈಲಿನಲ್ಲಿ ಕೈದಿಗಳಲ್ಲಿ ಕ್ರೋಧ ಮತ್ತು ಆಕ್ರಮಣಕಾರೀ ಪ್ರವೃತ್ತಿ ತಗ್ಗಿ ಶಿಸ್ತಿನಲ್ಲಿ ಸುಧಾರಣೆಯಾಗಿರುವುದನ್ನು ದಾಖಲಿಸಲಾಗಿದೆ. ಅಲ್ಲದೇ ಕೈದಿಗಳು ಪಶ್ಚಾತ್ತಾಪ ಪ್ರಜ್ಞೆ ಹೊಂದಿ ಆಂತರಿಕ ಶಾಂತಿಯ ಅನುಭೂತಿ ಪಡೆದಿದ್ದಾರೆ.
ಹಾಗೇ ಪುಣೆಯಲ್ಲಿರುವ ಯೆರವಾಡಾ ಕೇಂದ್ರ ಕಾರಾಗೃಹದಲ್ಲಿ ಭಗವದ್ಗೀತೆಯ ಪ್ರಯೋಗದಿಂದ ಕೈದಿಗಳಲ್ಲಿ ಹಿಂಸಾ ಪೃವೃತ್ತಿ ತಗ್ಗಿ ಅವರ ವರ್ತನೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಉತ್ತರ ಪ್ರದೇಶ ಮತ್ತು ಗುಜರಾತ ರಾಜ್ಯಗಳ ಕಾರಾಗೃಹಗಳಲ್ಲಿ ಕೈದಿಗಳಿಗೆ ಭಗವದ್ಗೀತೆಯನ್ನು ಬೋಧಿಸಿ ಉತ್ತಮ ಫಲಿತಾಂಶ ಪಡೆಯಲಾಗಿದೆ.
ಅಮೆರಿಕ, ಬ್ರಿಟನ್ ಮತ್ತು ರಶಿಯಾ ದೇಶಗಳ ಕೆಲವು ಕಾರಾಗೃಹಗಳ ಕೈದಿಗಳಲ್ಲಿ ಭಗವದ್ಗೀತೆಯ ಶಿಕ್ಷಣದಿಂದ ಪರಿವರ್ತನೆ ಕಂಡುಬಂದಿರುತ್ತದೆ. ಭಗವದ್ಗೀತೆಯ ಶಿಕ್ಷಣವನ್ನು ದೇಶದ ಎಲ್ಲ ಕಾರಾಗೃಹಗಳ ಕೈದಿಗಳಿಗೆ ವಿಸ್ತರಿಸುವ ಅವಶ್ಯಕತೆಯಿದೆ.

Bhagavad Gita ಯುವಜನತೆಗೆ ಮತ್ತು ಮಕ್ಕಳಿಗೆ ಭಗವದ್ಗೀತೆ: ಅಪರಾಧಶಾಸ್ತ್ರೀಯ ಅಧ್ಯಯನಗಳಿಂದ ಕಂಡುಬಂದಿರುವ ಅಂಶವೆಂದರೆ ಅಪರಾಧ ಪ್ರವೃತ್ತಿಯು ೧೩ ರಿಂದ ೩೦ ರ ವಯೋಮಾನದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಪೋಷಕರು ಮನೆಯಲ್ಲಿ ಭಗವದ್ಗೀತೆಯನ್ನು ಬೋಧಿಸಿದರೆ ಸಮಾಜದಲ್ಲಿ ಅಪರಾಧ ನಿಯಂತ್ರಣ ಸಾಧ್ಯ. ಉತ್ತಮ ಆಹಾರ, ವಿಹಾರ, ಸಂಸ್ಕಾರಯುತ ಜೀವನ ಶೈಲಿಯೊಂದಿಗೆ, ಅಪರಾಧಕ್ಕೆ ಪೂರಕವಾಗುವಂತಹ ಮದ್ಯಪಾನ ಮತ್ತು ಮಾದಕದ್ರವ್ಯಸೇವನೆಯಿಂದ ದೂರವಿರಲು ಯುವಜನತೆಯನ್ನು ಪ್ರೇರೇಪಿಸಬೇಕಿದೆ.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸುI
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾII೬.೧೭II
ಆಹಾರ ವಿಹಾರಗಳಲ್ಲಿ, ಕರ್ಮಗಳಲ್ಲಿ ಮತ್ತು ನಿದ್ರೆ-ಎಚ್ಚರಗಳಲ್ಲಿ ಮಿತವಾಗಿರುವವನಿಗೆ ದುಃಖನಾಶಕವಾದ ಯೋಗವು ಉಂಟಾಗುವುದು.

ಅಪರಾಧಶಾಸ್ತ್ರ ಹಲವು ಸ್ತರಗಳಲ್ಲಿ ಅಪರಾಧ ನಿಯಂತ್ರಣವನ್ನು ಸೂಚಿಸುತ್ತದೆ. ಆದ್ದರಿಂದ ವಿವಿಧ ಸ್ತರಗಳಲ್ಲಿ ಭಗವದ್ಗೀತೆಯನ್ನು ಪ್ರಯೋಗಿಸುವುದು ಒಳಿತು.
೧. ವ್ಯಕ್ತಿ
೨. ಕುಟುಂಬ
೩. ಸಮಾಜ
೪. ಆರಕ್ಷಕರು
೫.ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು
೫. ನ್ಯಾಯ ವ್ಯವಸ್ಥೆ.
ಸರ್ವರಿಗೂ ಭಗವದ್ಗೀತೆ: ಅಪರಾಧಶಾಸ್ತ್ರದ ಮೂಲ ಪ್ರಶ್ನೆಯಾದ ಮನುಷ್ಯ ಯಾಕೆ ಅಪರಾಧ ಮಾಡುತ್ತಾನೆ? ಎನ್ನುವುದನ್ನು ಭಗವದ್ಗೀತೆಯು ಬಹು ಆಯಾಮಗಳಲ್ಲಿ ವಿಶ್ಲೇಷಿಸಿ ನಿಖರವಾದ ಉತ್ತರವನ್ನು ನೀಡುತ್ತದೆ. ಅಪರಾಧವೆನ್ನುವ ರೋಗಕ್ಕೆ ಸಮಗ್ರವಾದ ಮತ್ತು ಉಪಯುಕ್ತವಾದ ಚಿಕಿತ್ಸೆಯನ್ನು ಭಗವದ್ಗೀತೆ ನೀಡುವುದರಿಂದ ಅದು ಅಪರಾಧ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಒದಗಿಸುತ್ತದೆ. ಆದ್ದರಿಂದ ಪರಮಪೂಜ್ಯ ಶ್ರೀಗಳವರ ಆಶಯದಂತೆ ಯಾವದೇ ಜಾತಿ ಮತ ಲಿಂಗಭೇದವಿಲ್ಲದೇ ಸಮಾಜದ ಸರ್ವರಿಗೂ ಭಗವದ್ಗೀತೆಯ ತತ್ವಜ್ಞಾನ ಲಭ್ಯವಾಗುವಂತೆ ನಾವೆಲ್ಲರೂ ಪ್ರಯತ್ನಶೀಲರಾಗೋಣ.

(ದಿನಾಂಕ 18.11.2025 ರಂದು ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಲೇಖಕರು ಮಂಡಿಸಿದ ಪ್ರಬಂಧದ
ಸಂಕ್ಷಿಪ್ತ ಲೇಖನರೂಪ.)

ಸೈಬರ್ ವಂಚನೆಗೊಳಪಟ್ಟಲ್ಲಿ1930 ಗೆ ದೂರವಾಣಿ ಕರೆಮಾಡಿ ನೆರವು ಪಡೆಯಿರಿ- ಎ.ಜಿ.ಕಾರಿಯಪ್ಪ

0

ನಾವು ಪ್ರತಿನಿತ್ಯ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ ಬಳಸುತ್ತಿದ್ದು ಸುರಕ್ಷಿತ ಮತ್ತು ಜವಾಬ್ದಾರಿಯುತ ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚೆಚ್ಚು ಜಾಗೃತರಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಅಪರ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್‌ಐಸಿ ಶಿವಮೊಗ್ಗ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಾದಿಯಾಗಿ ಎಲ್ಲರೂ ಇಂದು ಅಂತರ್ಜಾಲ ಬಳಕೆಯಲ್ಲಿ ತೊಡಗಿದ್ದೇವೆ.ಬ್ಯಾಂಕಿಂಗ್ ಇ ಆಫೀಸ್, ಆನ್‌ಲೈನ್ ತರಗತಿಗಳು, ಮೀಟಿಂಗ್‌ಗಳು, ಹೀಗೆ ಎಲ್ಲೆಡೆ ಅಂತರ್ಜಾಲ ಬಳಕೆ ವ್ಯಾಪಕವಾಗಿದೆ. ಅದೇ ರೀತಿಯಲ್ಲಿ ಸೈಬರ್ ಅಪರಾಧಗಳೂ ಹೆಚ್ಚಿವೆ. ಅಕ್ಷರಸ್ಥರೇ ಹೆಚ್ಚು ಈ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಕೋಟಿಗಟ್ಟಲೆ ಹಣವನ್ನು ಖಾತೆಯಿಂದ ಕಬಳಿಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್ಗಳಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ವಂಚನೆಗೆ ಒಳಗಾದಲ್ಲಿ ತಕ್ಷಣ 1930 ಗೆ ಕರೆ ಮಾಡಿ ವರದಿ ಮಾಡಬೇಕು.
ಕಚೇರಿಗಳಲ್ಲಿ ಲಾಗಿನ್ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತಿ ಅಗತ್ಯ. ಬಳಕೆ ನಂತರ ಕಡ್ಡಾಯವಾಗಿ ಲಾಗ್ ಔಟ್ ಮಾಡಬೇಕು. ಮಕ್ಕಳು, ಹದಿಹರೆಯದವರು ಕಲಿಕೆ, ಮನರಂಜನೆಗಾಗಿ ಇಂದು ಹೆಚ್ಚಾಗಿ ಅಂತರ್ಜಾಲಕ್ಕೆ ಅಂಟಿಕೊAಡಿದ್ದು, ವಿಶೇಷವಾಗಿ ಹದಿಹರೆಯದವರು ಯಾವ ರೀತಿಯ ಸೈಟ್‌ಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ, ದಾರಿತಪ್ಪುವ ಸೈಟ್‌ಗಳಿಗೆ ಬಲಿಯಾಗದಂತೆ ನಿಗಾ ವಹಿಸಿ ಕಾಳಜಿ ತೆಗೆದುಕೊಳ್ಳಬೇಕು.
ವಂಚಕರು ಮೊಬೈಲ್‌ಗೆ ಕರೆ ಮಾಡಿ ನೀವು ಕಳುಹಿಸಿದ ಕೊರಿಯರ್ ಪಾರ್ಸಲ್‌ಗಳಲ್ಲಿ ಮಾದಕ ವಸ್ತು, ನಕಲಿ ಪಾಸ್‌ಪೋರ್ಟ್ಗಳು ಇವೆ ನಿಮ್ಮ ಮೇಲೆ ದೆಹಲಿ ಕೊಲ್ಕತಾ, ಬೆಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಜುಡೀಷಿಯಲ್ ಅರೆಸ್ಟ್ ವಾರೆಂಟ್ ಇದೆ ಎಂದು ಸಂಭಾಷಣೆ ನಡೆಸಿ ಬೇರೊಬ್ಬರನ್ನು ಸಂಪರ್ಕ ಮಾಡುವಂತೆ ಒತ್ತಡಕ್ಕೆ ಸಿಲುಕಿಸಿ ಹಣವನ್ನು ಪಡೆದು ವಂಚಿಸುವುದು, ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನೈಜ ಬ್ಯಾಂಕಿAಗ್ ಅಪ್ಲಿಕೇಶನ್‌ಗಳಂತೆ ಕಾಣುವ ಎಪಿಕೆ ಫೈಲ್ ಕಳುಹಿಸಿ ವಂಚಿಸುವುದು, ನಕಲಿ ಹೂಡಿಕೆ ಅಪ್ಲಿಕೇಷನ್ ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುವ ಭರವಸೆ ನೀಡುವ ನಕಲಿ ಹೂಡಿಕೆ ಮಾಡುವ ಆ್ಯಪ್ ಗಳು ಹೆಚ್ಚಾಗಿದೆ. ಹಾಗೂ ವಿದೇಶಗಳಿಂದಲೂ ಸೈಬರ್ ವಂಚಕರು ಕರೆ ಮಾಡಿ ವಂಚನೆ ಮಾಡುತ್ತಿದ್ದು ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು, ಸುರಕ್ಷಿತ ಮತ್ತು ಜವಾಬ್ದಾರಿಯುತ ಅಂತರ್ಜಾಲ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಎನ್‌ಐಸಿಯ ಜಿಲ್ಲಾ ಸೂಚನಾ ವಿಜ್ಞಾನಾಧಿಕಾರಿ ನಿತಿನ್ ಮಾತನಾಡಿ, ‘ಚತುರ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐ ನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದು’ ಎಂಬುದು ಈ ವರ್ಷದ ಸುರಕ್ಷಿತ ಅಂತರ್ಜಾಲ ಬಳಕೆ ದಿನದ ಘೋಷವಾಕ್ಯವಾಗಿದ್ದು, ನಾವೆಲ್ಲರೂ ಅಂತರ್ಜಾಲ ವಂಚನೆ ಬಗ್ಗೆ ಜಾಗರೂಕರಾಗಿರಬೇಕು.
ಅಂತರ್ಜಾಲ ವಂಚನೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ತಿಳುವಳಿಕೆ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದ ಅವರು ಪಿಪಿಟಿ ಮೂಲಕ ಸೈಬರ್ ಬೆದರಿಕೆ, ಫಿಶಿಂಗ್, ಎಸ್‌ಎಂಎಸ್ ಹೆಡರ್ ಥ್ರೆಟ್, ನಕಲಿ ಕಸ್ಟಮರ್ ಕೇರ್ ಸ್ಕ್ಯಾಮ್ ಬಗ್ಗೆ ತಿಳಿಸಿ ನಾವು ಅಂತರ್ಜಾಲ ಬಳಕೆಯಲ್ಲಿ ಇಟ್ಟುಕೊಳ್ಳಬೇಕಾದ ಉತ್ತಮ ಅಭ್ಯಾಸಗಳು, ಸುರಕ್ಷತಾ ವಿಧಾನಗಳು, ಸೈಬರ್ ಅಪರಾಧಗಳನ್ನು ವರದಿ ಮಾಡುವ ಬಗ್ಗೆ ತಿಳಿಸಿದರು. ಹಾಗೂ ನಾವು ಎಂದಿಗೂ ನಮ್ಮ ವೈಯಕ್ತಿಕ ಮಾಹಿತಿ, ಓಟಿಪಿ, ಪಿನ್ ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಯಮಿತವಾಗಿ ಪಿನ್ ಸಂಖ್ಯೆಯನ್ನು ಬದಲಾಯಿಸುತ್ತಿರಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ಆನ್‌ಲೈನ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿವುದು ಈ ದಿನದ ಉದ್ದೇಶವಾಗಿದ್ದು ಇಂದು ನಾವೆಲ್ಲ ಜಾಗತಿಕ ಅಂತರ್ಜಾಲದ ಭಾಗವಾಗಿದ್ದು, ದಿನ ನಿತ್ಯ ಸಂಪರ್ಕಕ್ಕಾಗಿ, ಮಾಹಿತಿ, ಕಲಿಕೆ , ಶಾಪಿಂಗ್, ಸೇವೆಗಳು, ಮನರಂಜನೆ, ಮೀಟಿಂಗ್‌ಗಳು, ಬ್ಯಾಂಕಿAಗ್, ಹಣಕಾಸು ಹೀಗೆ ಹಲವಾರು ಕಾರ್ಯಗಳಿಗೆ ಅಂತರ್ಜಾಲದ ಮೇಲೆ ಅವಲಂಬಿತರಾಗಿದ್ದೇವೆ. ಅಂತರ್ಜಾಲ ಬಳಕೆಯಿಂದ ಲಾಭ ಮತ್ತು ಅನುಕೂಲಗಳು ಸಾಕಷ್ಟಿದ್ದರೂ ಅನಾನುಕೂಲತೆಗಳು, ನಷ್ಟಗಳ ಬಗ್ಗೆಯೂ ನಾವು ಸಾಕಷ್ಟು ಜಾಗೃತರಾಗಿರಬೇಕು. ಅಂತರ್ಜಾಲ ಬಳಕೆಯಿಂದ ಹಲವಾರು ಸಮಸ್ಯೆಗಳಿದ್ದು, ಫಿಶಿಂಗ್, ಮಾಲ್ ವೇರ್, ಐಡೆಂಟಿಟಿ ಥೆಫ್ಟ್, ಇತರೆ ಅಪರಾಧಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ ಅವರು ಪಿಪಿಟಿ ಪ್ರದರ್ಶನ ಮೂಲಕ ಸುರಕ್ಷಿತ ಅಂತರ್ಜಾಲ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈ ಎಸ್‌ಪಿ ಕೃಷ್ಣಮೂರ್ತಿ, ಕೆಎಸ್‌ಆರ್‌ಪಿ ಡೆಪ್ಯುಟಿ ಕಮಾಂಡೆಂಟ್ ಮಂಜುನಾಥ್ ಎಸ್ ಅಣಜಿ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

CM Siddharamaiah ಮಾಜಿ ‘ ಸಿಎಂ’ ಕೆಂಗಲ್ ಹನುಮಂತಯ್ಯನವರ ಜಯಂತಿ. ಪುಷ್ಪನಮನ ಸಲ್ಲಿಸಿದ ಸಿದ್ಧರಾಮಯ್ಯ

0

CM Siddharamaiah ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಸಣ್ಣಹಳ್ಳಿಗಳಲ್ಲಿ ಯುವಕರು ಒಗ್ಗೂಡಿ ಕ್ರೀಡೆಯನ್ನು ಆಯೋಜಿಸಬೇಕು- ಪ್ರದೀಪ್ ಗೌಡ ಬಾಡದಬೈಲು

0

ಗ್ರಾಮೀಣ ಮಟ್ಟದಲ್ಲಿ ಯುವಕರು ಕೇವಲ ಕ್ರೀಡಾಪಟುಗಳಾಗಿ ಅಷ್ಟೇ ಉಳಿಯದೆ. ಉತ್ತಮ ಸಂಘಟಕರಾಗಿ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಮುಂದಾಗುತ್ತಿರುವುದು ಸಮಾಜದ ಆರೋಗ್ಯಕರ ಬೆಳವಣಿಗೆಯ ಸಂಕೇತವಾಗಿದೆ ಎಂದು ತಾಲೂಕು ಪಿ.ಎಲ್‌.ಡಿ ಬ್ಯಾಂಕ್ ನಿರ್ದೇಶಕ ಪ್ರದೀಪ್ ಗೌಡ ಬಾಡದಬೈಲು ಅಭಿಪ್ರಾಯಪಟ್ಟರು.

ತಾಲೂಕಿನ ಚಂದ್ರಗುತ್ತಿ ಸಮೀಪದ ಶಿವಪುರ-ಕತವಾಯಿ ಗ್ರಾಮಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ ಎಸ್ ಕೆ ಪಿ ಎಲ್ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನದಲ್ಲಿ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸವನ್ನು ನೀಡುತ್ತವೆ. ಸಣ್ಣ ಹಳ್ಳಿಗಳಲ್ಲಿ ಯುವಕರು ಒಗ್ಗೂಡಿ ನಮ್ಮೂರಿನಲ್ಲಿ ನಾವು ಕ್ರೀಡೆಯನ್ನು ಆಯೋಜಿಸಬೇಕು ಎಂಬ ಮನೋಭಾವ ಬೆಳೆಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂತಹ ಪ್ರಯತ್ನಗಳಿಂದ ಗ್ರಾಮೀಣ ಕ್ರೀಡಾ ಪ್ರತಿಮೆಗಳು ಮುನ್ನೆಲೆಗೆ ಬರಲು ಸಾಧ್ಯವಾಗುತ್ತದೆ ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಜ್ಜು ಮತ್ತು ಶಮ್ ಶೀರ್ ಮಾಲಿಕತ್ವದ ಕಾನಗೋಡು ರಾಕರ್ಸ್ ತಂಡ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು, ಆರಕ್ಷಕ ಪ್ರದೀಪ್ ಮಾಲಿಕತ್ವದ ತಂಡ ಸೊರಬ ಸೂಪರ್ ಕಾಪ್ಸ್ ದ್ವಿತೀಯ ಸ್ಥಾನ ಗಳಿಸಿತು, ಮಂಜು ನಾಯ್ಕ ಅವರ ಸಿ ಎನ್ ಸಿ ಕ್ರಿಕೆಟರ್ಸ್ ಹಾಗೂ ನಿಖಿಲ್, ದಿನೇಶ್ ಶಿವಪುರ ಮಾಲಿಕತ್ವದ ಎಸ್ ಕೆ ಚಾಲೆಂಜರ್ಸ್ ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದುಕೊಂಡು. ಇನ್ನು ಉಳಿದಂತಹ ತಂಡಗಳಿಗೆ ಶಿಸ್ತು ಬದ್ಧ ಹಾಗೂ ಸಮಾಧಾನಕರ ಬಹುಮಾನ ನೀಡಿದರು. ಉತ್ತಮವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ಗುರುತಿಸಿ ಆಕರ್ಷಕ ಟ್ರೋಫಿ ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಗ್ರಾಪಂ ಸದಸ್ಯ ಸಲೀಂ, ಜಗದೀಶ್, ದಿನೇಶ್, ಶಿಕ್ಷಕ ಈರಪ್ಪ ನಾಯ್ಕ, ಮಂಜುನಾಥ್ ಶೇಟ್, ಅಜೀಮ್, ನೌಶಾದ್, ಅಜೀಜ್ ಸಾಬ್, ನಿಖಿಲ್, ಕೀರ್ತಿ ನಾಯ್ಕ, ಲೋಕೇಶ್, ಪ್ರವೀಣ್, ರವಿಕಿರಣ್, ಪುನೀತ್ ಬಡಿಗೇರ್, ಸೇರಿದಂತೆ ಶಿವಪುರ-ಕತವಾಯಿ ಗ್ರಾಮದ ಸಂಘಟಕರು, ಉಪಸ್ಥಿತರಿದ್ದರು.