ರಾಜ್ಯ ಸರ್ಕಾರ ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಸಮಿತಿಯನ್ನು ರಚಿಸಿದ್ದು ವರದಿ ಸಲ್ಲಿಸಲು 30 ದಿನಗಳ ಗಡುವನ್ನು ನೀಡಿದೆ.
ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮೆಸ್ಕಾಂನ ಶಿವಮೊಗ್ಗ ವ್ಯಾಪ್ತಿಯಲ್ಲಿ ನಡೆದ ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ನಡೆದಿರುವ ನ್ಯೂನತೆ ಹಾಗೂ ಲೋಪದ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಿ ಆದೇಶವನ್ನು ಹೊರಡಿಸಿದ್ದಾರೆ.
ಈ ಸಮಿತಿಯನ್ನು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಪ್ರೆಸಿಡೆಂಟ್ ಭಾಗದ ನಿವೃತ್ತ ನಿರ್ದೇಶಕ ಕೆ ವಿ ಶಿವಕುಮಾರ್, ತಾಂತ್ರಿಕ ವಿಭಾಗದ ಮ್ಯಾನೇಜರ್ ಬಿ.ಆರ್.ಮಂಜುನಾಥ್, ಕೆಪಿಟಿಸಿಎಲ್ ಯಂತ್ರಣ ಅಧಿಕಾರಿ ಕೆ.ಜಿ.ಅನಿತಾ ಈ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು ಯೋಜನೆಯಲ್ಲಿನ ಅವ್ಯವಹಾರ ಹಾಗೂ ನಡೆದಿರುವ ನ್ಯೂನ್ಯತೆಗಳ ಬಗ್ಗೆ ನಿರಂತರ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಫಲವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಈ ಕುರಿತಂತೆ ಜನವರಿ ಒಂದರಂದು ಜಿಲ್ಲೆಯ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಅಧಿಕಾರಿಗಳನ್ನು ಇಂಧನ ಸಚಿವರು ತರಾಟೆಗೆ ತೆಗೆದುಕೊಂಡಿದ್ದರು.
ನಿರಂತರ ಜ್ಯೋತಿ ಕಾಮಗಾರಿಗಳ ಮೇಲುಸ್ತುವಾರಿಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಭದ್ರಾವತಿ ಗ್ರಾಮೀಣ ಉಪವಿಭಾಗ ಘಟಕ 1ರ ಕಿರಿಯ ಎಂಜಿನಿಯರ್ ಬಾಲಕೃಷ್ಣ ಶಿವಮೊಗ್ಗ ಕಾರ್ಯ ಮತ್ತು ಪಾಲನಾ ವೃತ್ತ ಎಂ. ಆರ್.ಟಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಮದನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರು ಈ ಪ್ರಕರಣದ ಪೂರ್ಣ ತನಿಖೆಗೆ ಆದೇಶಿಸಿದ್ದಾರೆ.