ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರ ಅಬ್ಬರ ತಾರಕ ತಲುಪಿರುವ ನಡುವೆಯೇ ಇದುವರೆಗೆ ಬೂದಿಮುಚ್ಚಿದ ಕೆಂಡದಂತಿದ್ದ ಪೆಗಾಸಸ್ ಸ್ಟೈವೇರ್ ಹಗರಣ ಮತ್ತೆ ಮುನ್ನಲೆಗೆ ಬಂದಿದೆ.
2017ರಲ್ಲಿ ಭಾರತ – ಇಸ್ರೇಲ್ ಬೃಹತ್ 200 ಕೋಟಿ ಡಾಲರ್ ಮೊತ್ತದ ಒಪ್ಪಂದ ಕುದುರಿದೆ. ಅದರ ಕೇಂದ್ರ ಬಿಂದು ಪೆಗಾಸಸ್ ಸ್ಟೈ ವೇರ್ ಮತ್ತು ಕ್ಷಿಪಣಿ ವ್ಯವಸ್ಥೆ ಖರೀದಿ ಒಡಂಬಡಿಕೆ ಎಂದು ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವುದು ವಿವಾದ ಮತ್ತೊಮ್ಮೆ ಜೀವ ಪಡೆಯಲು ಕಾರಣವಾಗಿದೆ.
ಇಸ್ರೇಲ್ ನ ಎನ್ಎಸ್ಒ ಗ್ರೂಪ್ ತಯಾರಿಸಿ ಮಾರಾಟ ಮಾಡಿರುವ ಪೆಗಾಸಸ್ ಬೇಹುಗಾರಿಕೆ ಸಾಫ್ಟ್ವೇರ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಿವಾದಕ್ಕೆ ಇದು ಕಾರಣವಾಗಿದೆ. ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರ ವಿರುದ್ಧ ಇಸ್ರೇಲ್ ನ ಈ ಸ್ಟೈ ವೇರ್ ಅನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಪ್ರಕರಣವನ್ನು ಕಳೆದ ವರ್ಷ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಸತ್ಯಾಸತ್ಯತೆಯ ತನಿಖೆಗೆ ಸಮಿತಿ ರಚನೆ ಮಾಡಿದೆ.
ಈ ಸ್ಟೈ ವೇರ್ ಅನ್ನು ಕೇಂದ್ರ ಸರ್ಕಾರ ಖರೀದಿಸಿ ದುರ್ಬಳಕೆ ಮಾಡಿರುವುದು ಸತ್ಯಶೋಧ ನಡೆಯುತ್ತಿರುವಾಗಲೇ, ಅಮೆರಿಕದ ಪತ್ರಿಕೆ ವರದಿ ಪ್ರಕಟಿಸಿದೆ. ಭಾರತ ಮತ್ತು ಇಸ್ರೇಲ್ ನಡುವೆ ಪೆಗಾಸಸ್ ಖರೀದಿ ಒಪ್ಪಂದ ನಡೆದಿರುವುದು ನಿಜ ಎಂದು ತಿಳಿಸಿದೆ. ದಿ ಬೆಟಲ್ ಫಾರ್ ದ ವರ್ಲ್ಡ್ ಮೋಸ್ಟ್ ಪವರ್ಫುಲ್ ಸೈಬರ್ ವೆಪನ್ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಗೊಂಡಿದೆ.
ಎನ್ಎಸ್ಒ ಸುಮಾರು ಒಂದು ದಶಕದಿಂದ ತನ್ನ ಬೇಹುಗಾರಿಕೆ ಸಾಫ್ಟ್ವೇರ್ ಅನ್ನು ವಿವಿಧ ದೇಶಗಳಿಗೆ ಮಾರಾಟ ಮಾಡುತ್ತ ಬಂದಿದೆ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ತನ್ನ ಸ್ಟೈ ವೇರ್ ಮಾಡುತ್ತದೆ ಎಂದು ಪುಸಲಾಯಿಸಿ ಸರ್ಕಾರಗಳ ಬೇಹುಗಾರಿಕೆ ಸೇವಾ ಸಂಸ್ಥೆಗಳಿಗೂ ಸಹ ಅದನ್ನು ಮಾರಾಟ ಮಾಡಲಾಗುತ್ತಿದೆ. ಐಫೋನ್ ಅಥವಾ ಅಂಡ್ರಾಯ್ಡ್ ಸ್ಮಾರ್ಟ್ಫೋನ್ ಯಾವುದಿದ್ದರೂ ಸರಿ, ಸಮರ್ಥವಾಗಿ ಭೇದಿಸಿ ಮಾಹಿತಿ ಕಲೆಹಾಕಿ ಎಂದು ಎನ್ಎಸ್ಒ ತನ್ನ ಸ್ಟೈ ವೇರ್ ಬಗ್ಗೆ ಹೇಳಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ಯಾಲೆಸ್ತಿನ್ ವಿಚಾರದಲ್ಲಿ ಇಸ್ರೇಲ್ ಪರ ಒಲವು ಹೊಂದಿರುವ ಭಾರತ, ಸದಾ ಸಮತೋಲನ ಕಾಯ್ದುಕೊಳ್ಳುವ ಸರ್ಕಸ್ ಮಾಡುತ್ತ ಬಂದಿದೆ. 2017ರಲ್ಲಿ ಇದೇ ವಿಷಯವನ್ನು ಮುನ್ನೆಲೆಯಲ್ಲಿ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿದ್ದರು. ಅಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮೋದಿ ಬೀಚ್ ನಲ್ಲಿ ಬರಿಗಾಲಿನಿಂದ ನಡೆದದ್ದು ಸುದ್ದಿಯಾಗಿತ್ತು. ಇದೆಲ್ಲವೂ ಒಪ್ಪಂದದ ಮುಸುಕಿನಲ್ಲಿ ನಡೆದ ವ್ಯವಸ್ಥಿತ ತಂತ್ರಗಾರಿಕೆ ಯಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
200 ಕೋಟಿ ಡಾಲರ್ ಮೊತ್ತದ ಪೆಗಾಸಸ್ ಹಾಗೂ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದವನ್ನು ಇಬ್ಬರು ಗಣ್ಯರ ಭೇಟಿಯ ಒಳಮರ್ಮ ವಾಗಿತ್ತು. ಒಪ್ಪಂದದ ನಂತರ 2019ರಲ್ಲಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು. ಇವರ ಕೊಡು-ಕೊಳ್ಳುವ ವ್ಯವಹಾರದ ಭಾಗವಾಗಿಯೇ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ ಪ್ಯಾಲೆಸ್ತೀನ್ ವಿಷಯ ಪ್ರಸ್ತಾಪವಾದಾಗ ಭಾರತವು ಇಸ್ರೇಲ್ ಪರ ಮತ ಹಾಕಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.