ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ವತಿಯಿಂದ ‘ಸಹಿತ’ ದ್ವೈಮಾಸಿಕ ವಿದ್ಯುನ್ಮಾನ ಗೃಹಪತ್ರಿಕೆಯ ವಿಜಯದಶಮಿ ವಿಶೇಷಾಂಕಕ್ಕೆ ಲೇಖನಗಳನ್ನು ಆಹ್ವಾನಿಸಲಾಗಿದೆ.
‘ಸಹಿತ’ ಪತ್ರಿಕೆಯ ನಾಲ್ಕನೇ ಸಂಚಿಕೆ ತುಲಾ–ವೃಶ್ಚಿಕ ವಿಶೇಷಾಂಕವಾಗಿದ್ದು, ವಿಜಯದಶಮಿಯ ಅಂಗವಾಗಿ ಸಂಪೂರ್ಣವಾಗಿ ಸಾಹಿತ್ಯಿಕ ಮೌಲ್ಯದ ಬರಹಗಳಿಗೆ ಮೀಸಲಾಗಿರಲಿದೆ. ಈ ಸಂಚಿಕೆಯಲ್ಲಿ ಕಥೆ, ಕವಿತೆ, ಲಘು ಬರಹ, ನಗೆ ಬರಹ ಹಾಗೂ ಲಲಿತ ಪ್ರಬಂಧ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಬರಹಗಳನ್ನು ಪ್ರಕಟಿಸಲು ಅವಕಾಶ ಕಲ್ಪಿಸಲಾಗಿದೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಯಾವುದೇ ಕೂಟದ ಸದಸ್ಯರು ಹಾಗೂ ತಾಲ್ಲೂಕು, ಜಿಲ್ಲಾ, ವಿಭಾಗ ಸೇರಿದಂತೆ ವಿವಿಧ ಸಮಿತಿಗಳ ಕಾರ್ಯಕರ್ತರು ತಮ್ಮ ಬರಹಗಳನ್ನು ಪ್ರಕಟಣೆಗಾಗಿ ಕಳುಹಿಸಬಹುದು.
ಬರಹ ಕಳುಹಿಸುವವರು ತಮ್ಮ ಹೆಸರಿನೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಯಾವ ಕೂಟದ ಸದಸ್ಯರಾಗಿದ್ದಾರೆ ಅಥವಾ ಯಾವ ಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ವಿವರಗಳಿಲ್ಲದ ಬರಹಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಕಳುಹಿಸುವ ಬರಹಗಳು ಅಪ್ರಕಟಿತ ಹಾಗೂ ಸ್ವತಂತ್ರ ಬರಹಗಳಾಗಿರಬೇಕು. ಸಣ್ಣ ಕಥೆಗಳು ಗರಿಷ್ಠ 1000 ಪದಗಳ ಮಿತಿಯಲ್ಲಿರಬೇಕು. 350 ಪದಗಳ ಅತಿಸಣ್ಣ ಕಥೆಗಳಿಗೆ ಆದ್ಯತೆ ನೀಡಲಾಗುತ್ತದೆ. ನಗೆ ಬರಹ ಹಾಗೂ ಲಲಿತ ಪ್ರಬಂಧಗಳು 700 ಪದಗಳನ್ನು ಮೀರಬಾರದು. ಕವಿತೆಗಳು ಛಂದೋಬದ್ಧ ಅಥವಾ ಮುಕ್ತಛಂದದಲ್ಲಿರಬಹುದು, ಆದರೆ 30ರಿಂದ 32 ಸಾಲುಗಳನ್ನು ಮೀರಬಾರದು.
ಬರಹಗಳನ್ನು ಕಳುಹಿಸಲು ಕೊನೆಯ ದಿನ ಸೆಪ್ಟೆಂಬರ್ 25, 2026. ಆಸಕ್ತರು ತಮ್ಮ ಬರಹಗಳನ್ನು sahita.absp@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕದ ‘ಸಹಿತ’ ಸಂಪಾದಕರು ಈ ಮೂಲಕ ಸದಸ್ಯರಿಂದ ಉತ್ತಮ ಸಾಹಿತ್ಯಿಕ ಬರಹಗಳನ್ನು ನಿರೀಕ್ಷಿಸಿದ್ದಾರೆ.
