Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ. ಆಡಳಿತದಲ್ಲಿ ಸ್ಥಿರತೆ ಹೇಗಾದರೂ ಬಂದೀತು. ಪಕ್ಷಗಳ ಧುರೀಣರ ಮೇಲಾಟವೇ ಅದು ಆಡಳಿತದಲ್ಲಿರಲಿ ಅಥವಾ ವಿಪಕ್ಷದಲ್ಲಿರಲಿ ಪರಿಣಾಮಕಾರಿಯಾಗಿರುತ್ತದೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನುರಿತ
ಅನುಭವದಿಂದ ಭಿನ್ನಮತೀಯರನ್ನ ಸಂಭಾಳಿಸುತ್ತಿದ್ದರು.
ಅವರು ಸಾಮಾನ್ಯವಾಗಿ ಮುಖ್ಯಮಂತ್ರಿಗಳಾದಾಗ ತಮ್ಮ ವಿಶ್ವಾಸಕ್ಕಿರುವ ವ್ಯಕ್ತಿಗಳನ್ನೇ ಜೊತೆಮಾಡಿ ಸಂಪುಟ ರಚನೆ ಮಾಡುತ್ತಿದ್ದರು.
ಹೀಗಾಗಿ ಅವರ ದೀರ್ಘ ಅವಧಿಯಲ್ಲಿ ಯಾವುದೂ ತಾರಕಕ್ಕೇರಿರಲಿಲ್ಲ.
ಈಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ನಂತರ ಒಂದಿಷ್ಟು ಒರಟೊರಟು ಘಟನೆಗಳು ಸಂಭವಿಸುತ್ತಿವೆ. ಹಿಂದೆ ಮುಖ್ಯಮಂತ್ರಿಗಳಾದ ಅನುಭವ ಅವರಿಗಿಲ್ಲದಿರಬಹುದು.ಆದರೆ ರಾಜಕೀಯ ವರಸೆಗಳು ಸಿದ್ಧರಾಮಯ್ಯನವರಿಗಿಂತ ಡಿಕೆಶಿ ಅವರ ಬತ್ತಳಿಕೆಯಲ್ಲಿವೆ. ಅದೇ ಮುಖ್ಯಮಂತ್ರಿಗಳ ಪ್ರಬಲ ಅಂಶ.
ಸಚಿವ ಸ್ಥಾನ ಸಿಗಲಿಲ್ಲ ಅಂದಾಕ್ಷಣ ರಾಜಿನಾಮೆ ನೀಡುವ ಬಗ್ಗೆ ಘೋಷಣೆ ಮಾಡಿದ ಶಾಸಕರು
ಈಗ ಒಬ್ಬೊಬ್ಬರೇ ಥಣ್ಣಗಾಗುತ್ತಿದ್ದಾರೆ.
“ರಾಜಿನಾಮೆ ಕೊಡುವವರು ಕೊಡಿ.ಐದು ನಿಮಿಷದಲ್ಲಿ ಅಂಗೀಕರಿಸುವೆ” ಎಂಬ ಈಗಿನ ಮುಖ್ಯಮಂತ್ರಿಗಳ ದಿಢೀರ್ ಹೇಳಿಕೆ ಪಕ್ಷದ ಶಾಸಕರ ಎದೆಯಲ್ಲಿ
“ತೌಡು ಕುಟ್ಟಿದೆ” ಎಂಬುದರಲ್ಲಿ
ಸಂದೆಹವಿಲ್ಲ.
ಬಹಳ ಮಂದಿ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ ಬಿರುಗಾಳಿಯಲ್ಲಿ ತೂರಿಕೊಂಡು ಬಂದವರು.
ಅವರಿಗೀಗ ಸಚಿವ ಸ್ಥಾನ ಕೊಡದಿದ್ದರೇನಾಯಿತು. ಸದ್ಯ ಶಾಸಕ ಸ್ಥಾನದ ಸುಖ ಅನುಭವಿಸಲು ಸಾಕು ಅನ್ನಿಸಿಬಿಟ್ಟಿದೆ.
ಇನ್ನು ಎರಡು ಮೂರು ಬಾರಿ ಗೆದ್ದವರ ವೈಖರಿಯೇ ಬೇರೆ. ‘ರಾಜಿನಾಮೆ ಕೊಡ್ತೀವಿ ಅಂತ ಹೇಳಿದ್ವಿ. ಆದರೆ ಪಕ್ಷ ನಮಗೆ ದೊಡ್ಡದು. ನಾಯಕರು, ಕೆಲವರು ಸರಿಯಿಲ್ಲ ‘ಎಂದು ಹೈಕಮಾಂಡ್ ಗೆ ತಮ್ಮ ನಿಷ್ಠೆಯನ್ನ ವ್ಯಕ್ತಪಡಿಸುವವರಿದ್ದಾರೆ. ಈ ಕಡೆ ಅತೃಪ್ತಿ ಹೇಳಬೇಕು.ಆ ಕಡೆ ತಮ್ಮ ಅಹವಾಲುಗಳಿಗೆ ಬೆಲೆ ನೀಡಿ ಅಂತ ಕೇಳಿದ ಹಾಗಾಗಿರಬೇಕು ಹೀಗೆ ಶ್ಲೇಷಾತ್ಮಕ ನಿಲುವು ತೋರಿದ್ದಾರೆ.
ಈ ನಡುವೆ
ಮುಖ್ಯಮಂತ್ರಿಗಳಿಗೆ ಮಹಿಳಾ ಪ್ರಾತಿನಿಧ್ಯದ ತಲೆಬಿಸಿ ಶುರುವಾಗಿದೆ.
ಜೊತೆಗೆ ಬ್ರಾಹ್ಮಣ ಅಭ್ಯರ್ಥಿಗೆ ಸ್ಥಾನ ನೀಡದೇ ಸಂಪುಟ ರಚನೆಯಾಗಿದೆ. ಮುಸ್ಲೀಮರಿಗಿದೆ, ಲಿಂಗಾಯತರಿಗೆ
ಜಾಸ್ತಿಯಿದೆ. ಇನ್ನೂ ಕೆಲವು ಜಾತಿಗಳಿಗಿಲ್ಲ ಎಂಬ ಕೂಗು ಕೇಳಿ ಬರಲಾರಂಭಿಸಿದೆ. ಇರುವ ಮೂವತ್ತರಲ್ಲಿ ಎಲ್ಲರನ್ನೂ ತೃಪ್ತಿಪಡಿಸುವುದು ಆಗದ ಮಾತು.
Shivamogga News ಆದರೂ ಮುಖ್ಯಮಂತ್ರಿಗಳಲ್ಲಿ ಮತ್ತೊಂದು ಅಸ್ತ್ರವಿದೆ. ನಿಗಮ ಮಂಡಳಿಗಳ ಅಧ್ಯಕ್ಷತೆ ಹಂಚುವುದು. ಕೊನೆಯ ಪ್ರಯತ್ನ.
ಆದರೆ ಅದೂ ಕೂಡ ಕಷ್ಟವೆ.. ಏಕೆಂದರೆ ಶಾಸಕರೇ ಅಲ್ಲದೇ ಪಕ್ಷನಿಷ್ಠರಿಗೆ, ಚುನಾವಣೆಯಲ್ಲಿ ಬೆಂಬಲಿಸಿದವರಿಗೆ ಈ ಸ್ಥಾನಗಳನ್ನ ನೀಡಲೇ ಬೇಕು.
ಈಗಲೇ ಪಟ್ಟದಲ್ಲಿ ಕೂತವರ ರಾಜಿನಾಮೆ ಕೇಳಬೇಕು. ಮತ್ತೆ ಅವರಲ್ಲಿ ಕೆಲವರೊಪ್ಪಬಹುದು. ಹಲವರಿಗೆ ಹೊಟ್ಟೆ ತೊಳಿಸಬಹುದು. ಇದೂ ಕೂಡ ಶೀಎಂ ಗೆ ಅಸಿಧಾರಾವ್ರತ.
ಇಲ್ಲಿ ಇನ್ನೊಂದು ರೀತಿಯ ತಲೆಬಿಸಿ ಶುರುವಾಗುತ್ತದೆ.
ಉಳಿದಿರುವ ಅವಧಿ ಎರಡು ವರ್ಷಗಳಿಗಿಂತಲೂ ಕಡಿಮೆ. ಇಂತಹ ಸಂದಿಗ್ಧದಲ್ಲಿ ಡಿ.ಕೆ.ಶಿವಕುಮಾರ್ ಸಿಲುಕಿದ್ದಾರೆ. ಆದರೆ ಅವರೀಗ ಮುಂಚಿನ ಅಗ್ರೆಸಿವ್ ವ್ಯಕ್ತಿ ಆಗಿಲ್ಲ. ಬಹಳ ಕಡೆ ಮೃದು ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಅವರಿಗೆ ಪರಿಸ್ಥಿತಿಯೇ ಈ ತಾಳ್ಮೆ ಕಲಿಸಿದೆ.
ಸಾಮಾನ್ಯ ಸಚಿವರಾಗಿ,ಪಕ್ಷದ ಅಧ್ಯಕ್ಷರಾಗಿದ್ದಾಗ ನಡೆದುಕೊಳ್ಳುತ್ತಿದ್ದ ವರ್ತನೆಗಳಿಗೆ ಬ್ರೇಕ್ ಹಾಕಿ , ಪಳಗಿದ, ಮಾಗಿದ ನಡೆ ಅವರಲ್ಲಿ ಕಂಡುಬರುತ್ತಿದೆ.
ಮಹಿಳೆಯರೊಬ್ಬರು ಮಂತ್ರಿ ಆಗಲೇಬೇಕು.
ಈಗಿರುವ ಭಿನಮತೀಯರು ಶಮನವಾಗಬೇಕು.
ಸೀಎಂ ಶಿವಕುಮಾರ್ ಅವರು ಯಾವುದಕ್ಕೂ ಜಗ್ಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.
“ಶಿವಶಕ್ತಿ” ಯ ಬಳಕೆ
ಹೇಗಾಗುತ್ತದೆ ಕಾದುನೋಡಬೇಕಿದೆ.
ಕೊನೇಹನಿ: ಬಾಂಬೆ ಬಾಯ್ಸ್ ಫಾರ್ಮುಲಾ ರಿಪೀಟ್ ಅಗುತ್ತ? ಪ್ರಶ್ನೆ.
ಛೆ..ಛೇ..ಹಾಗಾಗೋದಿಲ್ಲ ಬಿಡಿ.
