ರಾಜ್ಯಾದ್ಯಂತ ಮುಂಗಾರು ಮಳೆಯ ಅಭಾವದಿಂದಾಗಿ ತೀವ್ರ ಬರ ಪರಿಸ್ಥಿತಿ ತಲೆದೂರಿದ್ದು, ನಮ್ಮ ನಾಡಿನ ಅನ್ನದಾತ ರೈತ ಬಾಂಧವರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ, ಶ್ರೀ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಜನಪ್ರತಿನಿಧಿಗಳ ವಿಶೇಷ ಅಧ್ಯಯನ ನಿಯೋಗವು ಹಾಸನ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ನಡೆಸಿತು.
ನಿಯೋಗವು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆಹೊಸಳ್ಳಿ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡ ಕಾಡನೂರು ಕೃಷಿ ಪ್ರದೇಶಗಳಿಗೆ ಭೇಟಿ ನೀಡಿತು. ಈ ಭಾಗದಲ್ಲಿ ರೈತರು ವ್ಯಾಪಕವಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಗೆ ‘ಬಿಳಿಸುಳಿ’ ರೋಗ ಆವರಿಸಿದ್ದು, ಪರಿಶೀಲನೆಯ ವೇಳೆ ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತ ಬಾಂಧವರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿ ಧೈರ್ಯ ತುಂಬಲಾಯಿತು.
ಸಂಕಷ್ಟದಲ್ಲಿರುವ ರೈತರ ಪರವಾಗಿ ಶಾಸಕರ ನಿಯೋಗವು ದೃಢವಾಗಿ ನಿಲ್ಲಲಿದ್ದು, ಮುಂಬರುವ ಅಧಿವೇಶನದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ರೈತರ ಧ್ವನಿಯಾಗಿ ಹೋರಾಟ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಲಾಗುವುದು ಎಂದು ನಿಯೋಗವು ಭರವಸೆ ನೀಡಿತು.
ಈ ಅಧ್ಯಯನ ಪ್ರವಾಸದಲ್ಲಿ ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಸಕಲೇಶಪುರ ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್, ಬೇಲೂರು ಶಾಸಕರಾದ ಶ್ರೀ ಎಚ್.ಕೆ. ಸುರೇಶ್, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ, ಹಾಸನ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ನಾರಾಯಣ ಗೌಡ ಸೇರಿದಂತೆ ಸ್ಥಳೀಯ ಪ್ರಮುಖರು, ರೈತ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
