ಇಂದಿನ ಮಕ್ಕಳಲ್ಲಿ ಜೀವನ ಎದುರಿಸುವ, ಸವಾಲುಗಳನ್ನ ಸ್ವೀಕರಿಸಿ ಮುನ್ನುಗ್ಗುವ ಮನೋಭಾವ ಬೆಳಸಬೇಕಿದೆ. ಕೇವಲ ಮಕ್ಕಿಕಾಮಕ್ಕಿ ಬೋಧನೆಯೂ ಕೂಡ ಮಕ್ಕಳ ಸರ್ವತೋಮುಖ ಬೆಳವಣಿಗೆ ಮಾಡಲು ಸಾಧ್ಯವಿಲ್ಲ. ಮಾರ್ಕ್ಸುಗಳಿಂದ, ಶ್ರೇಣಿಗಳಿಂದ ಮಕ್ಕಳ ಬೌದ್ಧಿಕಮಟ್ಟ ಅಳೆಯುವ ಉಪಕ್ರಮ ಯಾವತ್ತಿಗೂ ನಮಗೆ ಒಳ್ಳೆಯ ಫಲ ನೀಡದು ಎಂದು ಉಡುಪಿ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಅಶೋಕ ಕಾಮತ್ ಹೇಳಿದರು.
ಶಿವಮೊಗ್ಗದ ಸನ್ ಹಾಸ್ಪಿಟಲ್ ನ ಧನ್ವಂತರಿ ಸಭಾಂಗಣದಲ್ಲಿ “ಕಿಶೋರ ದೀಪಿಕಾ” ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಸಂಸ್ಕಾರ ಭಾರತಿ,ಮಂಥನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಶಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮವಮ್ನ ಏರ್ಪಡಿಸಲಾಗಿತ್ತು. ಜೀವನದಲ್ಲಿ ಒಳ್ಳೆಯದು ಮತ್ತು ಒಳ್ಳೆಯದಲ್ಲದ್ದನ್ನ
ಚಿಂತಿಸಿ ನಿರ್ಧರಿಸುವ ವಿವೇಚನೆಯನ್ನ ಮಕ್ಕಳಲ್ಲಿ ಬೆಳೆಸಬೇಕಿದೆ. ಹದಿಹರೆಯದ ಹಂತದಲ್ಲಿನ ಮಕ್ಕಳಿಗೆ ಪ್ರಸ್ತುತ ” ಕಿಶೋರ ದೀಪಿಕಾ” ಒಂದು ತೋರುದೀಪ ಆಗಲಿದೆ ಎಂಬ ವಿಶ್ವಾಸ ನನ್ನದು. ನೈತಿಕವಾಗಿ ಆಲೋಚಿಸಲು ನೆರವಾಗುವಂತೆ ವಿವೇಚನೆಯ ಬೀಜ ಬಿತ್ತಲು ನೈತಿಕ ಶಿಕ್ಷಣವೇ ಪರಿಹಾರ ಸೂತ್ರ. ಆದರೆ ನಮ್ಮ ಸಮಾಜ ಇದನ್ನ ಸ್ವಲ್ಪ ಅವಧಿ ಅನುಸರಿಸಿತ್ತು. ಆದರೆ ಮುಂದುವರೆಯಲಿಲ್ಲ. ಈಗ ಗಂಭೀರವಾಗಿ ಈ ಬಗ್ಗೆ ಎಲ್ಲರೂ ಆಲೋಚಿಸುವ ಸನ್ನಿವೇಶ ಅನಿವಾರ್ಯ ನಿರ್ಮಾಣವಾಗಿದೆ. “ಕಿಶೋರ ದೀಪಿಕಾ”
ಸದ್ಯ ಕಿಶೋರ ಪೀಳಿಗೆಗೆ ಕಿವಿಮಾತು ಹೇಳಲು ಸಾಕಷ್ಟು ಪೂರಕ ವಿಚಾರಗಳನ್ನ ತುಂಬಿಕೊಂಡಿದೆ ಎಂದು ಡಾ.ಅಶೋಕ್ ಕಾಮತ್ ನುಡಿದರು.
ನಿವೃತ್ತ ಅಧ್ಯಾಪಕಿ ಮತ್ತು ಬಾಲಗೋಕುಲ ನಿರ್ವಹಿಸಿದ ಹಿರಿಯ ಲೇಖಕಿ ಹಾಗೂ “ಕಿಶೋರ ದೀಪಿಕಾ” ಗ್ರಂಥದ ಸಂಪಾದಕಿ ರುಕ್ಮಿಣಿ ನಾಯಕ್ ಅವರು ” ಪ್ರಸ್ತುತ ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಬೆಳೆಸಬೇಕಾದ ಗುಣ ನಡತೆಗಳ ಬೋಧನೆ ಬಗ್ಗೆ ಸಾಕಷ್ಟು ಮಾರ್ಗದರ್ಶಿ ಸಾಹಿತ್ಯ ರಚನೆಯಾಗುತ್ತಿದೆ. ಹದಿಹರೆಯದ ಹಂತದಲ್ಲಿ ಮಕ್ಕಳ ಮನೋಭೂಮಿಕೆಯನ್ನ ಧನಾತ್ಮಕ ರೂಪಿಸಲು ಎಷ್ಟೇ ಸಾಹಿತ್ಯ ಈಗ ಬಂದಿದ್ದರೂ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಸಾಲದಾಗಿದೆ. ಇಂತಹ ಸಂದರ್ಭದಲ್ಲಿ ಹಿರಿಯರ, ಮಾದರಿ ವ್ಯಕ್ತಿಗಳ ಜೀವನಾದರ್ಶಗಳು ಹಾಗೂ ವರ್ತಮಾನದ ಎಚ್ಚರದೊಂದಿಗೆ ಬರೆದ ಲೇಖನಗಳು ಇಲ್ಲಿವೆ. ವಿವಿಧ ಲೇಖಕರೊಂದಿಗೆ ಸಮಗ್ರವಾಗಿ ದೀರ್ಘಕಾಲ ಸಮಾಲೋಚಿಸಿ “ಕಿಶೋರ ದೀಪಿಕಾ” ಓದುಗರ ಕೈಸೇರಿದೆ.
ಎಂದು ಪುಸ್ತಕದ ಹಿನ್ನೆಲೆ ಬಗ್ಗೆ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಆಕಾಶ್ ಹೊಸತೋಟ ಅವರು” ಈಗ ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸುವ ಸಾಮರ್ಥ್ಯವನ್ನ ನಮ್ಮ ಮಕ್ಕಳಲ್ಲಿ ಬೆಳೆಸುವ ಸಮಯ ಬಂದಿದೆ. “ಕಿಶೋರ ದೀಪಿಕಾ” ಈ ದಿಸೆಯಲ್ಲಿ ಒಂದು ಸೂಕ್ತ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗದ “ಬಾಲಗೋಕುಲ” ನಿರ್ಮಾತೃವಾಗಿ ಗಮನಾರ್ಹ ಸೇವೆ ಸಲ್ಲಿಸಿದ , ಸದ್ಯ ಬ್ರಹ್ಮಾವರದಲ್ಲಿರುವ ಹಿರಿಯ ವಕೀಲ ಕಾ.ಗು.ಶ್ರೀಪಾದರಾವ್ ಅವರನ್ನ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಟಿ.ಜೆ .ನಾಗರತ್ನ ಪ್ರಾರ್ಥಿಸಿದರು. ಉಷಾ ನಟೇಶ್ ಕಾಸರವಳ್ಳಿ ಅವರು ಎಲ್ಲರಿಗೂ ಸ್ವಾಗತ ಕೋರಿದರು. ಡಾ.ರಂಜಿನಿ ಬಿದರಳ್ಳಿ ಅವರು ಆಕರ್ಷಕವಾಗಿ ಕಾರ್ಯಕ್ರಮ ನಿರೂಪಿಸಿದರು.
‘ಮಂಥನ’ ಕಾರ್ಯಕರ್ತ ನಿತಿನ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
