Friday, June 19, 2026
Friday, June 19, 2026

Klive Special Article ಮುನ್ನೂರು ಹಲಸಿನ ತಳಿಗಳ ಸಂರಕ್ಷಣೆ: ಕೃಷಿಕ ನರೇಂದ್ರರ ದೇಶಮಟ್ಟದಲ್ಲಿ ಗಮನ ಸೆಳೆದ ಸಾಧನೆ ಲೇ: ಡಾ.ಮೋಹನ್ ತಲಕಾಲುಕೊಪ್ಪ

Date:

  • ಡಾ. ಮೋಹನ್ ತಲಕಾಲುಕೊಪ್ಪ

Klive Special Article ಯಾವ ಅನುದಾನದ ಸಹಾಯವಿಲ್ಲದೆ ತನ್ನ ನಾಲ್ಕೂವರೆ ಎಕರೆ ಜಾಗದಲ್ಲಿ ಮುನ್ನೂರು ಹಲಸಿನ ತಳಿಗಳನ್ನು ಬೆಳೆಸಿ ಸಂರಕ್ಷಿಸುತ್ತಿರುವ ಕೃಷಿಕರು ನಿಮಗೆ ಗೊತ್ತೇ? ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಬೇಳೂರಿಗೆ ಬನ್ನಿ. ಇಲ್ಲಿನ ಕೃಷಿಕ ಬಿ. ಟಿ. ನರೇಂದ್ರರ ಸಾಧನೆ ದೇಶಮಟ್ಟದಲ್ಲಿ ಗುರುತಿಸಲೇಬೇಕಾದ ಶ್ಲಾಘನೀಯ ಕೆಲಸ! ಇಷ್ಟು ತಳಿಗಳನ್ನು ಸ್ವಂತ ಆಸಕ್ತಿಯಿಂದ ಬೆಳೆಸಿದ ಇನ್ನೊಬ್ಬ ಕೃಷಿಕರು ದೇಶದಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಸೀದಾ ಸಾದಾ ಉಡುಪಿನ, ಸರಳ ಕೃಷಿಕ. ಸಾಧಕನ ಹಮ್ಮುಬಿಮ್ಮು ಯಾವುದೂ ಇಲ್ಲದ ಹಸನ್ಮುಖಿ.

ಸಂಜೆ ನಾಲ್ಕೂವರೆ. ಅವರ ಮನೆಗೆ ಹೋದಾಗ ಅಂಗಳದ ಬದಿಯಲ್ಲಿ ಹಲಸಿನ ಗಿಡಗಳಿಗೆ ಕಸಿ ಕಟ್ಟುತ್ತಿದ್ದ ನರೇಂದ್ರರು (73) ಕಣ್ಣಿಗೆ ಬಿದ್ದರು. ” ಬನ್ನಿ, ಬನ್ನಿ, ಒಂದೆರಡು ಹಲಸಿನ ಗಿಡಗಳಿಗೆ ಕಸಿ ಕಟ್ಟಿ ಬರುತ್ತೇನೆ” ಎಂದರು. ಈ ವಯಸ್ಸಿನಲ್ಲೂ ಅದೆಂಥಾ ಉತ್ಸಾಹ! ನಾನವರನ್ನು ನೋಡಿದ್ದು ಇದೇ ಮೊದಲ ಬಾರಿ. ಮನೆಯಿಂದ ಅನತಿದೂರದಲ್ಲಿರುವ ಅವರ ತೋಟಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಹಲವಾರು ಹಲಸಿನ ಮರಗಳು ಕಂಡವು. ಕೆಲವುದರಲ್ಲಿ ಹಣ್ಣುಗಳಿದ್ದವು. ಹಾಗೇ ತೋರಿಸುತ್ತಾ ತನ್ನ ಹಲಸಿನಗಾಥೆಯನ್ನು ಬಿಚ್ಚಿಟ್ಟರು.

ಹಲಸಿನ ತಳಿಗಳ ತೋಪು:

“ಸೊಪ್ಪಿನ ಬೆಟ್ಟದಲ್ಲಿ ಸಿಗುವ ಕಾಡುಮರಗಳ ಸೊಪ್ಪು ಅಡಿಕೆ ತೋಟಕ್ಕೆ ಸಾಕಾಗುತ್ತಿರಲಿಲ್ಲ. ಸೊಪ್ಪಿಗಾಗಿ ಸೂಕ್ತ ಮರದ ಹುಡುಕಾಟದಲ್ಲಿದ್ದೆ. ನನ್ನ ಪತ್ನಿಯ ಸಲಹೆ ” ಹಲಸು ಉತ್ತಮ ಆಯ್ಕೆ”. ಮೊದಲಿಗೆ ಉತ್ತಮ ತಳಿಯ ಬೀಜಗಳನ್ನು ಸಂಗ್ರಹಿಸಿ ಗಿಡ ಎಬ್ಬಿಸಿದೆ. ದುರದೃಷ್ಟವಶಾತ್ ಎದ್ದ ನೂರಕ್ಕೆ ತೊಂಭತ್ತೈದು ಗಿಡಗಳನ್ನು ಮೊಲಗಳು ತಿಂದು ಹಾಳುಮಾಡಿದವು . ನಂತರ ಕಸಿ ಗಿಡಗಳನ್ನು ನೆಡುವ ಬಗ್ಗೆ ಯೋಚಿಸಿದೆ. ಈ ಯೋಚನೆಯೊಟ್ಟಿಗೆ ಅತ್ಯುತ್ತಮ ತಳಿಗಳನ್ನು ನೆಡಬೇಕೆಂಬ ತುಡಿತವುಂಟಾಯಿತು. ನಂತರ ಸ್ಥಳೀಯ ತಳಿಗಳ ಜೊತೆಗೆ ಕರ್ನಾಟಕ ಹಾಗೂ ದೇಶ-ವಿದೇಶಗಳ ಅತ್ಯುತ್ತಮ ತಳಿಗಳನ್ನು ಸಂಗ್ರಹಿಸಿ ನೆಡುತ್ತಾ, ರಕ್ಷಿಸುತ್ತಾ ಬಂದೆ. ಉಡುಪಿಯ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯ ಹಲವು ತಳಿಗಳನ್ನು ಕೊಟ್ಟಿದ್ದಾರೆ. ನನ್ನ ಸಂಗ್ರಹದಲ್ಲಿ ಮಲೇಷಿಯಾ, ಥಾಯ್ಲೆಂಡ್ ಮೂಲದ ತಳಿಗಳೂ ಸೇರಿದಂತೆ ಐದಾರು ದೇಶಗಳ ತಳಿಗಳಿವೆ” .

ನರೇಂದ್ರರ ತೋಟದಲ್ಲಿ ಪ್ರಸ್ತುತ 300 ಹಲಸು ತಳಿಗಳ 680 ಗಿಡಗಳಿವೆ. ಹದಿನೈದು ಅಡಿಗೊಂದರಂತೆ ತ್ರಿಕೋನ ವಿನ್ಯಾಸದಲ್ಲಿ ಹಲಸಿನ ಗಿಡಗಳನ್ನು ಬೆಳೆಸಿದ್ದಾರೆ. “ಕಸಿ ಗಿಡವಾದ್ದರಿಂದ ಈ ಅಂತರ ಸಾಕಾಗಬಹುದು ಎಂದು ನನ್ನ ಆಲೋಚನೆ. ಬೀಜದಿಂದ ತಯಾರಿಸಿದ ಗಿಡಗಳಿಗೆ ಮೂವತ್ತು ಅಡಿ ಬೇಕೇ ಬೇಕು”. ಮರಗಳಿಗೆ ಸಾವಯವ ಗೊಬ್ಬರದ ಪೂರೈಕೆ. ಕಾಲಕಾಲಕ್ಕೆ ಪ್ರೂನಿಂಗ್ ಮಾಡುತ್ತಾರೆ. ಈ ಎಲ್ಲಾ ತಳಿಗಳು ಇರುವ ಸ್ಥಳದ ಮ್ಯಾಪ್ ಹಾಗೂ ಪ್ರಾಥಮಿಕ ದಾಖಲಾತಿಯನ್ನು ಮಾಡಿಟ್ಟಿದ್ದಾರೆ. ಅಡಿಕೆ ಪ್ರಮುಖ ಬೆಳೆಯಾಗಿರುವ ಈ ಪ್ರಾಂತ್ಯದಲ್ಲಿ, ಅದೂ ಸ್ವಂತ ಜಾಗದಲ್ಲಿ ಅಡಿಕೆ ಬದಲಾಗಿ ಹಲಸು ಬೆಳಸಿರುವುದು ನರೇಂದ್ರರ ಹಲಸು ಪ್ರೀತಿಯ ದ್ಯೋತಕ!!

ಕಳೆದ ಹತ್ತು ವರ್ಷಗಳಿಂದ ಹಲಸಿನ ತಳಿಗಳ ಸಂಗ್ರಹ ಹಾಗೂ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ನರೇಂದ್ರರು ಈವರೆಗೆ ಸಿಕ್ಕ ಹಣ್ಣುಗಳನ್ನು ಹಂಚುವುದರಲ್ಲೇ ಸಂತೋಷ ಹೊಂದಿದ್ದಾರೆ. ಕಸಿ ಕುಡಿಗಳನ್ನೂ ಕೊಟ್ಟಿದ್ದಾರೆ. “ಮುಂದಿನ ದಿನಗಳಲ್ಲಿ ಹಣ್ಣಿನ ಮಾರಾಟ ಮತ್ತು ಮೌಲ್ಯವರ್ಧನೆ ಮಾಡುವ ಯೋಚನೆ ಇದೆ”. ನಿಮ್ಮ ಈವರೆಗಿನ ಅನುಭವದ ಪ್ರಕಾರ ಮಲೆನಾಡಿಗೆ ಸೂಕ್ತವಾಗುವ ಟಾಪ್ ಹಲಸಿನ ತಳಿಗಳು? “ಮಂಕಾಳೆ ರೆಡ್, ರುದ್ರಾಕ್ಷಿ ರೆಡ್, ಬೆಳವಾಯಿ ತಳಿಗಳು ಬಹಳ ಚೆನ್ನಾಗಿವೆ. ಬಯಲು ಸೀಮೆಯ ತಳಿಗಳಾದ ಸಿದ್ದು, ಶಂಕರ, ತೂಬುಗೆರೆ ತಳಿಗಳು ಇಲ್ಲಿ ಆ ರುಚಿ ಉಳಿಸಿಕೊಳ್ಳುವುದಿಲ್ಲ”. ಇವರಲ್ಲಿರುವ ಎಲ್ಲಾ ತಳಿಗಳು ಗಟ್ಟಿ ತೊಳೆಯ “ಬಕ್ಕೆ” ವಿಧದವು. ಕೆಲವು ಹಲಸಿನ ತಳಿಗಳು ಇನ್ನೂ ಫಲ ಕೊಡಲು ಶುರು ಮಾಡಿಲ್ಲ.

“ಉತ್ತಮ ಫಲಿತಾಂಶ ಕೊಡದ ತಳಿಗಳನ್ನು ಕತ್ತರಿಸಿ ಒಳ್ಳೆಯ ತಳಿಗಳನ್ನು ಅವಕ್ಕೆ ಕಸಿ ಮಾಡುವ ಆಲೋಚನೆ ಇದೆ. ಜೊತೆಗೆ ಸತ್ತು ಹೋದ ಗಿಡಗಳ ಜಾಗ ಮತ್ತು ಇನ್ನಿರುವ ಖಾಲಿ ಜಾಗದಲ್ಲಿ ಇನ್ನಷ್ಟು ಹಲಸಿನ ತಳಿಗಳನ್ನು ನೆಡಬೇಕು.” ಮುಂದಿನ ಯೋಜನೆಗಳನ್ನು ಖುಷಿಯಿಂದ ವಿವರಿಸುತ್ತಾರೆ ನರೇಂದ್ರ. ಕೌಟುಂಬಿಕ ಕಾರಣಗಳಿಂದ ಅವರಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಗಮನ ಹರಿಸಲು ಆಗಿರಲಿಲ್ಲ. ಹೊಸ ಹುರುಪಿನೊಂದಿಗೆ ಮತ್ತೆ ಶುರು ಮಾಡಿದ್ದಾರೆ. “ತೋಟದ ಸುತ್ತ ಹನ್ನೆರಡು ಅಡಿ ಎತ್ತರದ ಬೇಲಿ ಇದೆ. ಆದರೆ ಅದನ್ನೂ ಹಾರಿಕೊಂಡು ಬಂದು ಜಿಂಕೆಗಳು ಹಲಸಿನ ಮಿಡಿ, ಎಲೆಗಳನ್ನು ತಿಂದು ಕಾಟ ಕೊಡುತ್ತವೆ. ಹಾಗಾಗಿ ಇನ್ನಷ್ಟು ಸುರಕ್ಷಿತ ಬೇಲಿ ಅತ್ಯಗತ್ಯ”.

ತಳಿಗಳ ಅನನ್ಯ ದಾಖಲಾತಿ:

Klive Special Article ” ಹಲಸಿನ ತಳಿಗಳ ಬಗ್ಗೆ ಆಸಕ್ತಿ ಮೂಡುತ್ತಾ ಹೋದಂತೆ ತೋಟಕ್ಕೆ ಬೇಕಾದ ಸೊಪ್ಪಿನ ವಿಚಾರ ಹಿನ್ನೆಲೆಗೆ ಸರಿಯಿತು !” ನಕ್ಕು ಮಾತಾಡುತ್ತಲೇ ನರೇಂದ್ರರು ಅಲ್ಲೇ ಇದ್ದ “ಲಾಲ್ ಬಾಗ್ ಮಧುರ” ತಳಿಯ ಹಲಸು ಹಣ್ಣನ್ನು ಕೊಯ್ದರು. ಕೊಯ್ಯಲು ಬಳಸಿದ ಸಣ್ಣ ಕತ್ತಿ ಹಾಗೂ ಕಾಯಿಯನ್ನು ಸುಲಭವಾಗಿ ಕೊಂಡೊಯ್ಯಲು ಮಾಡಿದ ರಚನೆ ನನ್ನ ಗಮನ ಸೆಳೆಯಿತು. (ಚಿತ್ರ ನೋಡಿ). ನಂತರ ಮನೆಗೆ ಬಂದು ತಮ್ಮ ದಾಖಲಾತಿಯನ್ನು ಉತ್ಸಾಹದಿಂದ ತೋರಿಸಿದರು.

ಕಾಯಿಯಿಂದ ಹಣ್ಣಾಗುವವರೆಗೆ ಸಿಪ್ಪೆ ಹೊರತುಪಡಿಸಿ ಎಲ್ಲಾ ಭಾಗಗಳನ್ನು ಬಳಸಲು ಸಾಧ್ಯವಿರುವ “ತರಕಾರಿ ಹಲಸು”, ಡೆಂಗ್ ಸೂರ್ಯ, ವಿಯಟ್ನಾಮ್ ಅರ್ಲಿ, ಗಂಲೆಸ್, ಶ್ರೀವಿಜಯ, ಸದಾನಂದ, ಸರ್ವಋತು, ಶೃಂಗೇರಿ ರೆಡ್, ಸಿಂಗಾಪುರ್ ರೆಡ್, ಉದುರು ಬಕ್ಕೆ, ಎಲೆ ಬಕ್ಕೆ, ಎಳ್ಳಾರೆ ಬಕ್ಕೆ, ತುಷಾರ, ಏಲಕ್ಕಿ ಹಲಸು, ನೀಲಿ ಮಂಗಳ, ಸೀಡ್ ಲೆಸ್ ಹಲಸು, ಶ್ರಾವಣ ಬಕ್ಕೆ, ಸಂಪಿಗೆ ಬಕ್ಕೆ, ಮಾರ್ನವಮಿ ಬಕ್ಕೆ, ನೀಚಡಿ ರೆಡ್, ಭೀಮನೇರಿ ರೆಡ್, ಕೊಟ್ಟಿಗೆ ಬಕ್ಕೆ ಜೇನು ಬಕ್ಕೆ, ಓಹ್…… ಇವರಲ್ಲಿರುವ 300 ತಳಿಗಳಲ್ಲಿ ಕೆಲವು. ವರ್ಗೀಕರಣ ಮಾಡಿದರೆ ಗುಜ್ಜೆ(ಎಳೆ ಹಲಸು), ಬೇಳೆ ಚೆಕ್ಕೆ,(ಎಳೆ ಹಲಸಿನ ಮುಂದಿನ ಹಂತ), ಕಾಯಿ ಹಲಸು, ಹಣ್ಣು, ಚಿಪ್ಸಿಗೆ ಸೂಕ್ತವಾಗುವ ತಳಿಗಳು, ಬೀಜ ತೆಗೆದು ಇಡೀ ತೊಳೆಯನ್ನು ಚಿಪ್ಸ್ ಮಾಡುವ ತಳಿ ಇತ್ಯಾದಿ ಇಲ್ಲಿವೆ.

ಹಲಸಿನ ತೊಳೆಯ ಮಾಲೆ!

” ನನಗೆ ಅರ್ಧ- ಮುಕ್ಕಾಲು ಘಂಟೆ ಸಮಯ ಕೊಟ್ಟರೆ ಒಂದೂ ತೊಳೆ ಹಾಳಾಗದಂತೆ ಹಲಸನ್ನು ಕತ್ತರಿಸಿ ಮಾಲೆ ಮಾಡಿ ತೋರಿಸುವೆ ” ಎಂದ ನರೇಂದ್ರರು ನಾನು ಗೆಳೆಯ ಬೇಳೂರು ವಿನಾಯಕ್ ರಾವ್ ಅವರ ಮನೆಗೆ ಹೋಗಿ ಬರುವುದರ ಒಳಗೆ ತೋಟದಿಂದ ತಂದ ಲಾಲ್ ಬಾಗ್ ಮಧುರ ತಳಿಯ ಹಲಸಿನ ಮಾಲೆಯನ್ನು ಮಾಡಿಟ್ಟಿದ್ದರು. ಸುಮಾರು ಇಪ್ಪತ್ತೈದು ಅಡಿ ಉದ್ದಕ್ಕಿದ್ದ ಮಾಲೆಯಲ್ಲಿ ಒಂದು ತೊಳೆಯೂ ಹಾಳಾಗಿರಲಿಲ್ಲ. ನಾನು ಈವರೆಗೆ ಈ ರೀತಿ ಹಲಸು ಕತ್ತರಿಸುವುದನ್ನು ನೋಡಿರಲಿಲ್ಲ. (ಚಿತ್ರ ಮತ್ತು ವೀಡಿಯೋ ನೋಡಿ). ಇದು ವಿಶೇಷವಾದ ಕೌಶಲ್ಯ ಹಾಗೂ ಹಲಸು ಮೇಳಗಳಲ್ಲಿ ಜನರನ್ನು (ವಿಶೇಷವಾಗಿ ಮಕ್ಕಳನ್ನು) ಸೆಳೆಯಲು ಅಲಂಕಾರವಾಗಿ ಒದಗುತ್ತದೆ. ಅವರು ಮಾತಾಡುತ್ತಾ ಹೇಳಿದ್ದು “ಹಲಸನ್ನು ಕತ್ತರಿಸದೆ ಮೇಲಿನ ಮುಳ್ಳುಗಳ ರಚನೆಯನ್ನು ಗಮನಿಸಿ ಒಳಗಿರುವ ತೊಳೆಗಳ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯ”.

ಸಾಗಬೇಕಾದ ದಾರಿ:

ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಮಾಡಬೇಕಾದ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸವನ್ನು ಇಷ್ಟು ಆಸಕ್ತಿಯಿಂದ ಮಾಡುತ್ತಿರುವ ನರೇಂದ್ರರನ್ನು ಕನಿಷ್ಠ ಗುರುತಿಸುವ ಕೆಲಸವಾದರೂ ಆಗಬೇಕಾಗಿತ್ತು. ಸಸ್ಯ ತಳಿ ಸಂರಕ್ಷಣೆ ಮತ್ತು ರೈತ ಹಕ್ಕುಗಳ ಪ್ರಾಧಿಕಾರ, ನವದೆಹಲಿಯ ” ಪ್ಲಾಂಟ್ ಜಿನೋಮ್ ಸೇವಿಯರ್” (ಸಸ್ಯ ತಳಿ ಸಂರಕ್ಷಕ) ಪುರಸ್ಕಾರಕ್ಕೆ ಖಂಡಿತಾ ಇವರಿಗೆ ಅರ್ಹತೆ ಇದೆ. ಆದರೆ ಪ್ರಚಾರದ ಹಿಂದೆ ಬೀಳದ ಅವರಿಗೆ ಗೌರವ/ಪುರಸ್ಕಾರ ಸಿಗದ ಕುರಿತು ಯಾವುದೇ ವಿಷಾದವಿದ್ದ ಹಾಗೆ ಕಾಣಲಿಲ್ಲ!! ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಇವರ ಸಂಗ್ರಹವನ್ನು ತಳಿ ವಿಜ್ಞಾನಿಗಳು ” ಹಲಸು ತಳಿ ವೈವಿಧ್ಯದ ಸಂಗ್ರಹಣಾ ತಾಕು” ಎಂದು ಗುರುತಿಸಿ ಅದರ ನಿರ್ವಹಣೆಗೆ ಸೂಕ್ತ ಅನುದಾನ ಕೊಡುವ ಅಗತ್ಯವಿದೆ. ಜೊತೆಗೆ ಎಲ್ಲ ತಳಿಗಳಿಗೆ ಸಮರ್ಪಕವಾದ QR ಕೋಡ್ ಲೇಬಲ್ ಗಳನ್ನು ಹಾಕಬೇಕು. ಜೊತೆಗೆ ಡಿಜಿಟಲ್ ರೂಪಕ್ಕೆ ಇವರ ದಾಖಲಾತಿಯನ್ನು ವ್ಯವಸ್ಥಿತವಾಗಿ ತರುವ ತುರ್ತಿದೆ. ಆಸಕ್ತರು, ಕೃಷಿಕರು, ವಿದ್ಯಾರ್ಥಿಗಳು, ಸಂಶೋಧಕರು ಈ ಅಮೂಲ್ಯ ಪ್ರಯತ್ನವನ್ನು ನೋಡಿ ತಿಳಿಯಬಹುದು. ಈ ತಳಿವೈವಿಧ್ಯದ “ಮೂಲದ್ರವ್ಯ”ವನ್ನು ಬಳಸಿಕೊಂಡು ಹೊಸ ತಳಿಗಳ ಅಭಿವೃದ್ಧಿಯನ್ನು ವಿಜ್ಞಾನಿಗಳು ಕೈಗೊಳ್ಳಬಹುದು. ಹಲಸಿನ ಸಂಸ್ಕರಣೆ, ಹೊಸ ಉತ್ಪನ್ನ ತಯಾರಿ, ಡಿಎನ್ ಎ ಅಧ್ಯಯನ ಇತ್ಯಾದಿಗಳನ್ನು ಮಾಡಬಹುದು. ಬಹಳ ಹಿಂದೆ ಬಿದ್ದಿರುವ ನಮ್ಮಲ್ಲಿನ ಹಲಸಿನ ಕುರಿತಾದ ಸಂಶೋಧನೆಗೆ ಈ ರೀತಿಯ ತಾಕುಗಳು ಬಹಳ ಉಪಯುಕ್ತ. ಎಲ್ಲಕ್ಕಿಂತ ಹೆಚ್ಚಾಗಿ ನರೇಂದ್ರರ ಮಸ್ತಕದಲ್ಲಿರುವ ಹಲಸು ಕುರಿತ ಅತ್ಯಪೂರ್ವ ಅನುಭವಗಳನ್ನು ದಾಖಲಾತಿ ಮಾಡಿ ಸರಿಯಾಗಿ ಉಪಯೋಗಿಸಿದರೆ ಸಮುದಾಯದ ಅಭಿವೃದ್ಧಿಗೆ ಗಣನೀಯ ಕೊಡುಗೆಯಾಗುತ್ತದೆ.

ಗ್ರಾಮೀಣ ಭಾರತ ತನ್ನ ಒಡಲೊಳಗೆ ಅದೆಷ್ಟು ಅಚ್ಚರಿಗಳನ್ನು ಇಟ್ಟುಕೊಂಡಿದೆಯೋ? ಸರಿಯಾಗಿ ಹುಡುಕಿದರೆ ನಮ್ಮ ನಡುವೆಯೇ ಇಂಥಾ ಅನನ್ಯ ಸಾಧಕರು, ಅನರ್ಘ್ಯ ರತ್ನಗಳು ಸಿಗುವುದು ಖಾತ್ರಿ.

( ತಮ್ಮ ತೋಟದ ಒಂದೊಂದು ಅಡಿಕೆ ಮರದ ಇಳುವರಿ ಹಾಗೂ ಅಡಿಕೆಯ ಗುಣಮಟ್ಟದ ದಾಖಲಾತಿಯಲ್ಲೂ ನರೇಂದ್ರರದು ಅದ್ವೀತಿಯ ಸಾಧನೆ. ಅದನ್ನು ಈ ಲೇಖನದಲ್ಲಿ ಸೇರಿಸಿಲ್ಲ; ಬಹುತೇಕರಿಗೆ ಅಪ್ಪೆಮಿಡಿಯ ಅನನ್ಯ ತಳಿಗಳ ಸಂರಕ್ಷಕ ದಿ. ಬೇಳೂರು ಸುಬ್ಬಣ್ಣ ಪರಿಚಿತರು. ಅವರದೇ ಊರಿನವರು ನರೇಂದ್ರ)

ಫೋಟೋ ಮತ್ತು ವೀಡಿಯೊ: ಡಾ. ಮೋಹನ್ ತಲಕಾಲುಕೊಪ್ಪ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಜೂನ್ 19. ಸಂಜೆ 4 ಗಂಟೆಗೆ ವಿಕಸಿತ್ ಭಾರತ್ ರೋಜ್ ಗಾರ್ ಪ್ರೋತ್ಸಾಹ ಧನ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ

B.Y. Raghavendra ಕಾರ್ಮಿಕ ಭವಿಷ್ಯನಿಧಿ ಸಂಘಟನೆ, ಶಿವಮೊಗ್ಗ ಪ್ರಾದೇಶಿಕ ಕಚೇರಿ ಮತ್ತು...

D.K. Shivakumar ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ- ಸೀಎಂ ಡಿ.ಕೆ.ಶಿವಕುಮಾರ್

D.K. Shivakumar ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಗೆಲುವು...