ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯಲ್ಲಿ ಸಹ ಮಕ್ಕಳ ಪಾತ್ರ ಅಪಾರವಾಗಿದ್ದು ಪ್ರತಿ ಮಗು ಜಾಗೃತ ನಾಗರೀಕರಾಗಿ ಸಮಾಜ ಬದಲಾವಣೆಯ ರಾಯಭಾರಿಗಳಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಕರೆ ನೀಡಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ವಕೀಲರ ಸಂಘ, ಹಾಲು ಒಕ್ಕೂಟ ಹಾಗೂ ದೇಶೀಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ದೇಶೀಯ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026” ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವೂ ಶಾಲೆಗೆ ದಾಖಲಾತಿ ನಿಯಮಿತವಾಗಿ ಶಿಕ್ಷಣ ಪಡೆಯಬೇಕು. ಹಾಗೂ ಮಕ್ಕಳು ತಮ್ಮ ಸುತ್ತಮುತ್ತಲಿನ ಯಾವುದೇ ಮಗು ಶಾಲೆಯಿಂದ ಹೊರಗುಳಿದಿರುವುದನ್ನು ಅಥವಾ ಕೆಲಸಕ್ಕೆ ಹೋಗುತ್ತಿರುವುದನ್ನು ಗಮನಸಿದರೆ ಶಿಕ್ಷಕರಿಗೆ, ಕಾರ್ಮಿಕ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ತಿಳಿಸಬೇಕು.
ಶಿಕ್ಷಣವನ್ನು ಮೊಟಕುಗೊಳಿಸಿ ಬಾಲ ಕಾರ್ಮಿಕತೆಗೆ ಹಚ್ಚುವ ಈ ವ್ಯವಸ್ಥೆಯನ್ನು ತೊಡೆದುಹಾಕಲು ಎಲ್ಲರೂ ಕೈಜೋಡಿಸಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು. ಈ ಪದ್ದತಿ ವಿರುದ್ದ ಆಂದೋಲನದ ರೀತಿಯಲ್ಲಿ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.
ಪ್ರತಿಯೊಂದು ಮಗುವೂ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ. ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸಲು ಸರ್ಕಾರ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ತಂದಿದೆ. ಇದರ ಸಂಪೂರ್ಣ ಸದ್ಬಳಕೆ ಆಗಬೇಕು ಎಂದ ಅವರು ಮಾಜಿ ರಾಷ್ಟçಪತಿಗಳಾದ ಡಾ.ಎಪಿಜೆ ಅಬ್ದುಲ್ ಕಲಾಂ ರ 5 ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಹೇಳಿಸಿ, ಇವು ಮಂತ್ರಗಳಿದ್ದ ಹಾಗೆ. ದಿನನಿತ್ಯ ಹೇಳಿಕೊಳ್ಳಬೇಕೆಂದು ತಿಳಿಸಿದರು.
ಅಂದು ಶಿಕ್ಷಣ ನೀಡಲು ಮುಂದಾದವರನ್ನು ಬ್ರಿಟಿಷರು ಜೈಲಿಗೆ ಹಾಕಿದ್ದರು. ಆರು ಜನರು ಶಿಕ್ಷಣ ನೀಡುವ ಸಂಕಲ್ಪ ಮಾಡಿ ನಾವೇ ಶಾಲೆ ತೆರೆಯಬೇಕೆಂದು ದೇಶೀಯ ವಿದ್ಯಾ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇಂತಹ ಉತ್ಕೃಷ್ಟ ಸಂಸ್ಥೆಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಚರಣೆ ಮಾಡುತ್ತಿರುವುದು ಉತ್ತಮ ವಿಚಾರ ಎಂದು ಸ್ಮರಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷರಾದ ಕೆ. ಬಸಪ್ಪಗೌಡ ಮಾತನಾಡಿ, ಬಾಲ ಕಾರ್ಮಿಕ ಪದ್ದತಿಯು ನಾಗರೀಕ ಸಮಾಜ ಪ್ರಾರಂಭದಿAದಲೂ ಇದೆ. ಅಪರಾಧಗಳನ್ನು ತಡೆಯಲು ಹಂತ ಹಂತವಾಗಿ ಕಾನೂನುಗಳನ್ನು ರೂಪಿಸಲಾಗಿದೆ. ಬಾಲ ಕಾರ್ಮಿಕ ಪದ್ದತಿ ನಿಷೆಧ ಕಾಯ್ದೆ ಬಂದು 40 ವರ್ಷ ಕಳೆದರೂ ಈ ಪದ್ದತಿಯನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಇದನ್ನು ತೊಡೆದು ಹಾಕುವುದು ನಾಗರೀಕ ಸಮಾಜದ ವ್ಯವಸ್ಥೆಯ ಜವಾಬ್ದಾರಿಯಾಗಿದೆ.
ಯಾವುದೇ ಮಗು ಕೂಡ ಶಿಕ್ಷಣದಿಂದ ವಂಚಿತನಾಗಬಾರದು. ಶಿಕ್ಷಣದಿಂದ ವಂಚಿತರಾದಲ್ಲಿ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗುವ ಸಂಭವ ಹೆಚ್ಚಿರುವ ಕಾರಣ, ಶಿಕ್ಷಣ ಕೊಡಿಸುವ ಹೊಣೆಗಾರಿಕೆ ನಮ್ಮ ಎಲ್ಲರ ಮೇಲಿದೆ. ಕಟ್ಟಕಡೆಯ ಮಗುವಿಗೂ ಶಿಕ್ಷಣ ಕೊಡಿಸುವ ವ್ಯವಸ್ಥೆ ನಿರ್ಮಿಸೋಣ. ಬಾಲ ಕಾರ್ಮಿಕರನ್ನು ನಾವು ಸಾಮಾನ್ಯವಾಗಿ ವಲಸೆ ಹೋಗುವವರಲ್ಲಿ, ಸ್ಲಂಗಳಲ್ಲಿ ಕಾಣುತ್ತಿದ್ದು, ಈ ಮಕ್ಕಳನ್ನು ಸಮೀಪದ ವಸತಿ ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ಆಗಬೇಕೆಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ ಜಿ. ಆರ್ ಮಾತನಾಡಿ, ವಿದ್ಯಾರ್ಥಿಗಳೇ, ಬಾಲ ಕಾಮಿಕರು ತಮ್ಮ ಗಮನಕ್ಕೆ ಬಂದರೆ ಕಾರ್ಮಿಕ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿಗೆ ತಿಳಿಸಿರಿ. ವಿದ್ಯಾರ್ಥಿಗಳು ಗ್ರಹಿಕೆಯಲ್ಲಿ ನಿಪುಣರು. ಆದ್ದರಿಂದ ತಮ್ಮ ಸುತ್ತಮುತ್ತ ಜಾಗೃತಿ ಮೂಡಿಸಬೇಕು. ನಮ್ಮಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಇದ್ದು, ಇಂತಹ ಶಿಕ್ಷಣ ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಮಾತನಾಡಿ, ಎಲ್ಲ ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರವಾದ ಸಮಾಜದಲ್ಲಿ ಬದುಕುವ ಹಕ್ಕು ಇದೆ. ಆದರೂ ಈಗಲೂ ಬಾಲ ಕಾರ್ಮಿಕ ಪದ್ದತಿ ಇದೆ. ಆದ್ದರಿಂದ ನಾವೆಲ್ಲ ಒಟ್ಟಾಗಿ ಬಾಲ ಕಾರ್ಮಿಕತೆಯನ್ನು ತೊಡೆದು ಹಾಕುವ ಪ್ರತಿಜ್ಞೆ ಮಾಡೋಣ ಎಂದರು.
ಶಿಕ್ಷಣ ವಂಚಿತ ಮಕ್ಕಳು ವ್ಯಸನಕ್ಕೊಳಗಾಗುವ ಸಂಭವ ಹೆಚ್ಚಿದೆ. ಹಾಗೂ ವ್ಯಸನಕ್ಕೊಳಗಾದ ಮಕ್ಕಳು ಅಪರಾಧ ಚಟುವಟಿಕೆಯಲ್ಲೂ ಪಾಲ್ಗೊಳ್ಳುತ್ತಾರೆ. ಮತ್ತು ವ್ಯಸನಕ್ಕೆ ಹಣ ಸಿಗದಿದ್ದಾಗ ಬಾಲ ಕಾರ್ಮಿಕತೆಗೆ ಒಳಗಾಗುತ್ತಾರೆ. ಹೀಗೆ ಒಂದಕ್ಕೊAದು ಸಂಬAಧ ಇದ್ದು, ಈ ಪದ್ದತಿಯಿಂದ ಇವರನ್ನು ಹೊರತರಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಡ್ಡಾಯವಾಗಿ ಶಾಲೆಗೆ ದಾಖಲಿಸಬೇಕು. ವಿದ್ಯಾರ್ಥಿಗಳು ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಏನೇ ಸಮಸ್ಯೆಗಳಿದ್ದರೆ ಸಹಾಯವಾಣಿ 1098 ಗೆ ಕರೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕಿನ ಮಾಯಮುಡಿಯ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ದಿವಾಕರ್ ಆರ್. ಅವರು “ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016” ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ನಿರೀಕ್ಷಕ ಎಂ.ಕೃಷ್ಣ ಸ್ವಾಗತಿಸಿದರು. ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ರಘುನಾಥ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಬಣಕಾರ್, ಡಿವಿಎಸ್ ಕಾರ್ಯದರ್ಶಿಗಳಾದ ಎಸ್.ಪಿ. ದಿನೇಶ್, ಪ್ರಾಂಶುಪಾಲರುಗಳಾದ ವೆಂಕಟೇಶ್, ಸರಿತಾ ಎನ್ ರಾವ್, ನಿರೀಕ್ಷಕಿ ಸುಖಿತಾ ಇತರರು ಹಾಜರಿದ್ದರು.
ಅರಿವು ಜಾಥಾ : “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026” ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಗರದ ಶಿವಪ್ಪ ನಾಯಕ ಸರ್ಕಲ್ ನಿಂದ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಜಾಥಾ ಮೂಲಕ ಜಾಗೃತಿ ಮೂಡಿಸುವ ಘೊಷಣೆಗಳನ್ನು ಕೂಗುತ್ತಾ ದೇಶೀಯ ವಿದ್ಯಾ ಸಂಸ್ಥೆಯನ್ನು ತಲುಪಿದರು.
ಮಕ್ಕಳ ಶಿಕ್ಷಣ ಮೊಟಕುಮಾಡಿ ಬಾಲಕಾರ್ಮಿಕತೆ ಹಚ್ಚುವ ವ್ಯವಸ್ಥೆ ತೊಡೆದುಹಾಕಲು ಎಲ್ಲರೂ ಕೈ ಜೋಡಿಸಬೇಕು- ನ್ಯಾ.ಎಂ.ಎಸ್.ಸಂತೋಷ್
Date:
