ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ತಂತಿಗಳಿಗೆ ಅಡ್ಡಲಾಗಿ ಬೆಳೆದಿದ್ದ ಕೊಂಬೆಗಳನ್ನು ಕತ್ತರಿಸಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳೀಯವಾಗಿ ಅತ್ಯಂತ ಜನಪ್ರಿಯರಾಗಿದ್ದ ಕ್ರಿಕೆಟ್ ಆಟಗಾರ ಸಾವನ್ನಪ್ಪಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತಾರಗೋಡು ಗ್ರಾಮದವರಾದ ಪ್ರವೀಣ ಹೆಗಡೆ (36 ವರ್ಷ) ವಿದ್ಯುತ್ ಅವಘಡಕ್ಕೆ ಬಲಿಯಾದ ದುರ್ದೈವಿ . ಇವರು ಕೆಲವು ವರ್ಷಗಳ ಹಿಂದಷ್ಟೇ ಹಾರೆಗೊಪ್ಪದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಅಲ್ಲಿಯೇ ನೆಲೆಸಿದ್ದರು.
ಭಾನುವಾರ ತಂತಿಗಳಿಗೆ ಅಡ್ಡ ಬಂದಿದ್ದ ಕೊಂಬೆಗಳನ್ನು ಕತ್ತರಿಸಲು ಮುಂದಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಈ ದುರಂತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪ್ರವೀಣ ಹೆಗಡೆ ಅವರು ಕೇವಲ ಕೃಷಿಕರಷ್ಟೇ ಅಲ್ಲದೆ ಉತ್ತಮ ಕ್ರಿಕೆಟ್ ಆಟಗಾರರಾಗಿಯೂ ಮಲೆನಾಡು ಭಾಗದಲ್ಲಿ ಹೆಸರು ಮಾಡಿದ್ದರು.
ಇವರು ಕೆಎಸ್ಸಿಎ ಶಿವಮೊಗ್ಗ ವಲಯದ ಕ್ರಿಕೆಟ್ ಲೀಗ್ನಲ್ಲಿ ನಿಸರಾಣಿ ಕ್ಲಬ್ ಪರವಾಗಿ ಕಣಕ್ಕಿಳಿದು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಹವ್ಯಕ ಕ್ರಿಕೆಟ್ ಲೀಗ್ ಸೇರಿದಂತೆ ಈ ಭಾಗದ ಅನೇಕ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲೂ ಆಡಿ ಕ್ರೀಡಾಭಿಮಾನಿಗಳನ್ನು ಸಂಪಾದಿಸಿದ್ದರು.
