ವಿಶೇಷ ವರದಿ: ಪ್ರಭಾಕರ ಕಾರಂತ.
Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ಹತ್ತುದಿನದ ಯಶಸ್ವೀ ಧರ್ಮ ವಿಜಯ ಯಾತ್ರೆ ನೇಪಾಳದಲ್ಲಿ ಮುಗಿಸಿ ಶೃಂಗೇರಿಯತ್ತ ಮರು ಪ್ರಯಾಣ ಆರಂಭಿಸಿದ್ದಾರೆ.ಈ ಯಾತ್ರೆ ಭಾರತ ಮತ್ತು ನೇಪಾಳ ಎಂಬ ಎರಡು ಪುಣ್ಯ ಭೂಮಿಗಳ ಧಾರ್ಮಿಕ ಸಂಪರ್ಕವನ್ನು ಗಟ್ಟಿಗೊಳಿಸಿತು.ಸನಾತನ ಧರ್ಮದ ತ್ಯಾಗ, ತಪಸ್ಸು, ಶಾಂತಿ, ಸಹಬಾಳ್ವೆ,ಆಸ್ತಿಕತೆ,ಸಂದೇಶವನ್ನು
ವಿಶ್ವಕ್ಕೆ ನೇಪಾಳದ ಪುಣ್ಯ ಭೂಮಿಯಲ್ಲಿ ನಿಂತು ಜಗದ್ಗುರುಗಳು ಸಾರಿದರು.ಶಂಕರ ಭಗವತ್ಪಾದರ ಅದ್ವೈತ ತತ್ವವನ್ನು ನೇಪಾಳದ ಆಸ್ತಿಕ ಜನರಲ್ಲಿ ಪುನರುತ್ಥಾನ ಮಾಡಿದರು.ಧರ್ಮದ ಮೂಲಕ ಎರಡೂ ನಾಡಿನ ಬೆಸುಗೆಯನ್ನು ಗಟ್ಟಿಗೊಳಿಸಿದರು.
ತಮ್ಮ ಭವ್ಯ ಗುರುಪರಂಪರೆಯ ಸಮಸ್ತ ತಪೋಬಲದಿಂದ ನೇಪಾಳದ ಸನಾತನ ಅಂತರಾತ್ಮ ಜಾಗೃತಗೊಳಿಸಿದರು.ಅವರ ಉಪದೇಶಗಳು ಜ್ಞಾನಾಮೃತ ವರ್ಷ ವೃಷ್ಟಿ ಮಾಡಿತು.
ಆವರು ಪಾದಸ್ಪರ್ಶವಾದಲ್ಲೆಲ್ಲಾ ಆಧ್ಯಾತ್ಮಿಕತೆ ಪುಟಿದೆದ್ದಿತು.ಕಾಳೀ ಸಪ್ತ ಸಂಗಮದಲ್ಲಿ ಪವಿತ್ರ ತೀರ್ಥಸ್ನಾನ ಮಾಡಿ ಪವಿತ್ರ ಚಕ್ರಶಿಲೆ ಎಂಬ ಮಹಾಕಾಯ ಏಕಶಿಲೆಯ ಮೇಲೆ ವಿರಾಜಮಾನನಾದ ಪರಶಿವನನ್ನು ಪೂಜಿಸಿ ಲೋಕ ಸುರಕ್ಷತೆಯ ಭರವಸೆ ಮೂಡಿಸಿದರು.ದೇವಘಾಟ್ ದಾಮದ ವಸಿಷ್ಠ ಗುಹೆಯಲ್ಲಿ ನಿಂತು ಯೋಗಾ ವಾಸಿಷ್ಠದ ದಿವ್ಯ ಸನ್ನಿವೇಶವನ್ನು ಸ್ಮರಣೆಗೆ ತಂದರು.
ವಾಪಾಸು ತೆರಳುವ ಮುನ್ನಾದಿನ ಅವರು ನೇಪಾಳದ ರಾಜಧಾನಿ ಕಾಟ್ಮಂಡು ತಲುಪಿದಾಗ ಪಶುಪತಿನಾಥನ ಈ ದಿವ್ಯ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು.ಅಂದು ರಾತ್ರಿ ನಡೆದ ಚಂದ್ರಮೌಳೀಶ್ವರ ಪೂಜೆಯನ್ನು ಹೃದಯ ತುಂಬಿಕೊಳ್ಳಲು ಅಸಂಖ್ಯ ಭಕ್ತರು ನೆರೆದಿದ್ದರು.
ಜಗದ್ಗುರುಗಳು ನೇಪಾಳದಲ್ಲಿ ಆರ್ಷೇಯ ವಿದ್ಯೆಯ ಉನ್ನತಿಗೆ ಶೃಂಗೇರಿಯ ಸಹಾಯಹಸ್ತ ಒದಗಿಸಿದರು.ತಮ್ಮ ಗುರುಗಳು ಮತ್ತು ಪರಮ ಗುರುಗಳ ನೆನಪಿನಲ್ಲಿ ವೇದ ವಿದ್ಯೆಯನ್ನು ಆರಿಸಿ ಸಾಧಿಸಿದವರಿಗೆ ಅನವರತ ಪ್ರೋತ್ಸಾಹ ನೀಡುವ ವಾಗ್ದಾನ ಇತ್ತರು.ಭಗವತ್ಪಾದರ ಸಭಾಂಗಣ ನಿರ್ಮಾಣಕ್ಕೆ ಆಶೀರ್ವಾದಿಸಿದರು.ನೇಪಾಳದಲ್ಲಿ ಶೃಂಗೇರಿಯ ಶಂಕರಮಠ ಆರಂಭಕ್ಕೆ ತಮ್ಮ ಗುರುಗಳಲ್ಲಿ ಪ್ರಾರ್ಥಿಸುವ ವಾಗ್ದಾನವಿತ್ತರು.
Klive Special Article ಸನ್ನಿಧಾನಂಗಳು ಯಾತ್ರೆಯ ಕಡೆಯಲ್ಲಿ ನೀಡಿದ ಸಂದೇಶವಂತೂ ಕಣ್ತೆರೆಸುವಂತಿತ್ತು.”ಈ ಧರ್ಮ ವಿಜಯ ಯಾತ್ರೆ ತಮ್ಮ ಗುರುಗಳ ಆಜ್ಞೆಯಂತೆ ಆವರ ಆಶೀರ್ವಾದದಿಂದಲೇ ನಡೆದಿದೆ.ಈ ಯಾತ್ರೆಗೆ ಭಾರತದ ಸರ್ಕಾರ ಅದರಲ್ಲೂ ವಿಶೇಷವಾಗಿ ಪ್ರಧಾನಮಂತ್ರಿ ಕಾರ್ಯಾಲಯ,ಗೃಹ, ವಿಮಾನಯಾನ,ವಿದೇಶಾಂಗ ಸಚಿವಾಲಯ, ದೆಹಲಿಯ ನೇಪಾಳದ ರಾಯಭಾರ ಕಚೇರಿ, ನೇಪಾಳದ ಸರ್ಕಾರ,ಅಲ್ಲಿನ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ, ಸಂಸ್ಕೃತಿ ಇಲಾಖೆ, ಭಾರತದ ರಾಯಭಾರಿ ಕಚೇರಿ, ನೇಪಾಳದ ರಕ್ಷಣಾ ಇಲಾಖೆ, ಪೊಲೀಸ್ ಇಲಾಖೆ ಮತ್ತು ಎಲ್ಲ ಭಕ್ತರೂ ಸಹಯೋಗ ನೀಡಿದ್ದಾರೆ.ಅವರೆಲ್ಲರಿಗೂ ಶಾರದಾ ಚಂದ್ರಮೌಳೀಶ್ವರ ಮತ್ತು ನಮ್ಮ ಗುರುಗಳ ಆಶೀರ್ವಾದ ದೊರೆಯಲಿ.ನೇಪಾಳ ಭಾರತ ಭಾಂದವ್ಯ ಗಟ್ಟಿಗೊಳ್ಳಲಿ.ಇಲ್ಲಿನ ನಾಗರೀಕರು ದೇಶದ ಏಳ್ಗೆಗೆ ಶ್ರಮಿಸಬೇಕು.ಒಗ್ಗಟ್ಟು ಕಾಯ್ದುಕೊಳ್ಳಬೇಕು.ಮಕ್ಕಳು ಮತ್ತು ಯುವಕರೇ ದೇಶದ ಆಸ್ತಿ.ಯುವಕರು ನೇಪಾಳವನ್ನು ಸಮರ್ಥವಾಗಿ ಮುನ್ನೆಡೆಸಬೇಕು.”
ಹೀಗೆ ಸಂದೇಶ ನೀಡುವ ಮೂಲಕ ಅವರು ನೇಪಾಳದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದರು.ನೇಪಾಳದಿಂದ ಭಕ್ತರು ಹಲವು ಬಾರಿ ಶೃಂಗೇರಿಗೆ ಬಂದು ಜಗದ್ಗುರುಗಳನ್ನು ಆಹ್ವಾನಿಸಿದ್ದರು.ಅಂತೂ ಮೂರನೇ ಬಾರಿಗೆ ಯಾತ್ರೆ ಯಶಸ್ವಿಯಾಗಿ ನಡೆಯಿತು.ಈ ದೇಶದ ಜನರ ಶ್ರದ್ಧೆ ಮತ್ತು ಭಕ್ತಿ ನೋಡಿದರೆ ಆಗಾಗ ಈ ದೇಶಕ್ಕೆ ಬರುತ್ತಿರಬೇಕು ಎಂದು ಅನಿಸಿದೆ ಎಂದು ಅನುಗ್ರಹ ಭಾಷಣದಲ್ಲಿ ಜಗದ್ಗುರುಗಳು ಹೇಳಿದ್ದರು.ಅಲ್ಲಿನ ಆಸ್ತಿಕರು ಇದನ್ನೇ ಸ್ಮರಣೆಗೆ ತಂದುಕೊಳ್ಳುತ್ತಾ ಜಗದ್ಗುರುಗಳ ಪುನರಾಗಮನಕ್ಕೆ ಭಕ್ತಿಯಿಂದ ಕಾಯುವುದಂತೂ ಸತ್ಯ.
