ಇಂದು ಶಿವಮೊಗ್ಗದ ರೈಲ್ವೆ ನಿಲ್ದಾಣದಿಂದ ಆದಿ ಕೈಲಾಸಕ್ಕೆ ಚಾರಣಹೊರಟವರಿಗೆ ಬೀಳ್ಕೊಡುತ್ತಾ ಮಾತನಾಡಿದ ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್ ಚಾರಣಗರಿಗೆ ಹಿಮಾಲಯ ತವರುಮನೆ ಇದ್ದಂತೆ. ಪ್ರತೀ ವರ್ಷ ಇಲ್ಲಿ ಚಾರಣ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಲು ಸಹಕಾರಿ ಎಂದರು.
ಭಾರತದ ಉತ್ತರಾಖಂಡ ರಾಜ್ಯದ ಪಿಥೋರಗಢ ಜಿಲ್ಲೆಯ ಹಿಮಾಲಯದಲ್ಲಿ ಆದಿ ಕೈಲಾಸ ಪರ್ವತವಿದೆ. ಸಮುದ್ರಮಟ್ಟದಿಂದ ಸುಮಾರು 6,191 ಮೀಟರ್ ಎತ್ತರದಲ್ಲಿರುವ ಈ ಪವಿತ್ರ ಸ್ಥಳವು ಕೈಲಾಸ ಮಾನಸ ಸರೋವರದ ಪ್ರತಿಕೃತಿಯಾಗಿದೆ. ಪಾರ್ವತಿ ಸರೋವರ ಮತ್ತು ಗೌರಿ ಕುಂಡ ಆದಿ ಕೈಲಾಸದ ತಪ್ಪಲಿನಲ್ಲಿರುವ ಪವಿತ್ರ ಸರೋವರಗಳು. ಈ ಯಾತ್ರೆಯಲ್ಲಿ ನೈಸರ್ಗಿಕವಾಗಿ ‘ಓಂ’ ಆಕಾರವನ್ನು ಹೋಲುವ ಮತ್ತೊಂದು ಪವಿತ್ರ ಪರ್ವತವನ್ನು ಕಾಣಬಹುದು.
ಇದನ್ನು ಹಿಂದೂ ಧರ್ಮದಲ್ಲಿ ಪಂಚ ಕೈಲಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಯಾತ್ರೆಯು ಸಂಪೂರ್ಣವಾಗಿ ಭಾರತೀಯ ಭೂಪ್ರದೇಶದಲ್ಲೇ ನಡೆಯುತ್ತದೆ.
ದೆಹಲಿಯಿಂದ ಕುಮಾವೂನ್ ಪ್ರದೇಶದ ಮೂಲಕ ಧಾರ್ಚುಲಾ ತಲುಪಿ, ಅಲ್ಲಿಂದ ಟ್ರೆಕ್ಕಿಂಗ್ ಮೂಲಕ ಆದಿ ಕೈಲಾಸ ತಲುಪಬಹುದು. ಉತ್ತರಾಖಂಡ ಪ್ರವಾಸೋದ್ಯಮ ಅತ್ಯುತ್ತಮವಾಗಿ ಆಯೋಜನೆ ಮಾಡಿದೆ, ಇದನ್ನು ಶಿವ ಕೈಲಾಶ್ , ಚೋಟಾ ಕೈಲಾಶ್, ಬಾಬಾ ಕೈಲಾಶ್ ಅಥವಾ ಜೊಂಗ್ಲಿಂಗ್ಕಾಂಗ್ ಶಿಖರ ಎಂದೂ ಕರೆಯುತ್ತಾರೆ ಎಂದರು.
ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ ಆದಿ ಕೈಲಾಸವು ಶಿವ ಮತ್ತು ತಾಯಿ ಪಾರ್ವತಿಯ ಪವಿತ್ರ ನೆಲೆಯಾಗಿದೆ. ಹಿಂದೂ ಪುರಾಣಗಳ ಪ್ರಕಾರ ಆದಿ ಕೈಲಾಸ ಪಂಚ ಕೈಲಾಸಗಳಲ್ಲಿ ಒಂದಾಗಿದೆ ಆದಿ ಕೈಲಾಸ ಯಾತ್ರೆಯು ಆಧ್ಯಾತ್ಮಿಕ ಅನ್ವೇಷಕರಿಗೆ ಮತ್ತು ಸಾಹಸವನ್ನು ಬಯಸುವವರಿಗೆ ಹಿಮಾಲಯದ ಭವ್ಯವಾದ ಇಳಿಜಾರುಗಳ ನಡುವಿನ ಪವಿತ್ರ ಮತ್ತು ರಮಣೀಯ ಪ್ರಯಾಣವಾಗಿದೆ ಎಂದರು.
ಘಟಕದ ಕಾರ್ಯದರ್ಶಿ ಸುರೇಶ್ ಕುಮಾರ್, ನಾಗರಾಜ್, ಡಾ.ಗುರುಪಾದಪ್ಪ, ಡಾ.ಶೇಖರ್, ಡಾ.ಶಾಂತ, ಡಾ.ಶಶಿಕಲಾ, ಭಾರತಿ, ದಾನಮ್ಮ, ಮಲ್ಲಿಕಾರ್ಜುನ್, ರವೀಂದ್ರ ಮುಂತಾದವರು ಇದ್ದರು.
