B.Y. Vijayendra ಯಾವ ಮಹತ್ಸಾಧನೆಗಾಗಿ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಸಾಧನಾ ಸಮಾವೇಶ ಸಂಘಟಿಸುತ್ತಿದೆ? ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಸ್ತಾಪಿತ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಔಚಿತ್ಯವನ್ನ ಪ್ರಶ್ನಸಿದ್ದಾರೆ.
ವಿಜಯೇಂದ್ರ ಅವರು ತಮಗಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಕಾಂಗ್ರೆಸ್ ಆಡಳಿತದ ವೈಫಲ್ಯಗಳನ್ನ ಬಯಲಿಗೆಳೆದಿದ್ದಾರೆ.
ನಿಮ್ಮ ಮೂರು ವರ್ಷದ ಆಡಳಿತ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದೇ ನಿಮ್ಮ ಸಾಧನೆಯೇ?
ಉತ್ಪನ್ನ ಕ್ಷೇತ್ರವನ್ನು ಉತ್ತೇಜಿಸದೇ ಅಭಿವೃದ್ಧಿಯನ್ನು ಶೂನ್ಯಗೊಳಿಸಿದ್ದು ನಿಮ್ಮ ಸಾಧನೆಯೇ?
ರೈತ ಕಲ್ಯಾಣಕ್ಕಾಗಿ ಯಾವುದೇ ಯೋಜನೆಯನ್ನು ರೂಪಿಸದೇ ನಿರಂತರವಾಗಿ ರೈತ ಹೋರಾಟಗಳನ್ನು ಹತ್ತಿಕ್ಕಿದ್ದು ನಿಮ್ಮ ಸಾಧನೆಯೇ?
ಮಹಿಳಾ ಕಲ್ಯಾಣಕ್ಕಾಗಿ ಯಾವುದೇ ಕಾರ್ಯಕ್ರಮವನ್ನೂ ಕೊಡಲಿಲ್ಲ, ಗೃಹಲಕ್ಷ್ಮೀ ಯೋಜನೆಯನ್ನೂ ಸಕಾಲದಲ್ಲಿ ತಲುಪಿಸುತ್ತಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ, ನಿರಂತರ ಅತ್ಯಾಚಾರಗಳು ನಿಮ್ಮ ಸರ್ಕಾರದಲ್ಲಿ ಸ್ತ್ರೀ ಕುಲವನ್ನು ಕಾಡಿದ ದೌರ್ಭಾಗ್ಯ. ಇದಕ್ಕಾಗಿ ನಿಮ್ಮ ಸಾಧನಾ ಸಮಾವೇಶವೇ?
ಸೂರುರಹಿತ ಜನರಿಗಾಗಿ ನಿವೇಶನ ಹಂಚಲಿಲ್ಲ, ಮನೆಗಳನ್ನು ವಿತರಿಸಲಿಲ್ಲ, ಮೈಸೂರು ಮುಡಾದಲ್ಲಿ ಸಾವಿರಾರು ನಿವೇಶನಗಳ ಲೂಟಿಕೋರತನದ ಸೂತ್ರ ವಹಿಸಿದ್ದು ನಿಮ್ಮ ಸಾಧನೆಯೇ?
ಮಹರ್ಷಿ ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ಕೆ ಮೀಸಲಾಗಿದ್ದ ಹಣವನ್ನು ಬ್ಯಾಂಕ್ ಖಾತೆಗೆ ಕನ್ನ ಹಾಕಿ, ಲೂಟಿ ಹೊಡೆದದ್ದು, ಪರಿಶಿಷ್ಟ ಜಾತಿ ಪಂಗಡಗಳ ಕಲ್ಯಾಣ ಕಾರ್ಯದ ಹಣವನ್ನು ದುರ್ಬಳಕೆ ಮಾಡಿಕೊಂಡು, ಆ ವರ್ಗವನ್ನು ವಂಚಿಸಿದ್ದು ನಿಮ್ಮ ಸರ್ಕಾರದ ಸಾಧನೆಯೇ?
ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಗಳಿಗೆ ಯೋಜನೆ ರೂಪಿಸಲಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನೂ ಬಿಡುಗಡೆ ಮಾಡದೇ, ಹಿಂದುಳಿದವರ ಕಲ್ಯಾಣ ಕಾರ್ಯಕ್ಕೆ ಕಲ್ಲು ಹಾಕಿದ್ದು ನಿಮ್ಮ ಸಾಧನೆಯೇ?
ಮೀಸಲಾತಿ ಹೆಸರಿನ ಗೊಂದಲ, ಹಿಂದುಳಿದ ವರ್ಗದ ಆಯೋಗ ಡಾ. ಕಾಂತರಾಜು ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆದು, ಜನರ ತೆರಿಗೆ ಹಣ ರೂ. 165 ಕೋಟಿಗೆ ತರ್ಪಣ ಬಿಟ್ಟಿದ್ದು, ಹೊಸದಾಗಿ ಸಾಮಾಜಿಕ ಸಮೀಕ್ಷೆ ನಡೆಸುತ್ತೇವೆಂದು ರೂ. 400 ಕೋಟಿ ಮೀಸಲಿರಿಸಿಕೊಂಡು ಈ ಕ್ಷಣಕ್ಕೂ ವರದಿ ಬಿಡುಗಡೆ ಮಾಡದಿರುವುದು ನಿಮ್ಮ ಸಾಮಾಜಿಕ ನ್ಯಾಯದ ಸಾಧನೆಯೇ?
ಒಳ ಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲವೇರ್ಪಡಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಹೆಚ್ಚುವರಿ ಮೀಸಲಾತಿಯನ್ನು ಉಳಿಸಿ ರಕ್ಷಿಸಿಕೊಡದೇ, ಈ ಸಮುದಾಯಗಳ ಸಾಂವಿಧಾನಿಕ ಹಕ್ಕನ್ನು ಕಸಿದಿದ್ದು ನಿಮ್ಮ ಸಾಧನೆಯೇ?
ಶಾಂತಿ-ಸುವ್ಯವಸ್ಥೆಗೆ ಹೆಸರಾದ ಕನ್ನಡ ನಾಡನ್ನು ಗಾಂಧಿ, ಬಸವಾದಿಗಳ ಚಿಂತನೆ-ಆಶಯಗಳನ್ನು ಮೂಲೆಗುಂಪು ಮಾಡಿ 500 ಮೀಟರ್ಗೊಂದು ಮದ್ಯದಂಗಡಿ ತೆರೆದು ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಿದ್ದು ನಿಮ್ಮ ಸಾಧನೆಯೇ?
B.Y. Vijayendra ಉದ್ಯೋಗವಂಚಿತ ಯುವಜನರ ಬದುಕನ್ನು ಅಂಧಕಾರದಲ್ಲಿ ಮುಳುಗಿಸಿದ ನೀವು ಡ್ರಗ್ ವ್ಯಸನಿಗಳಾಗಿಸುವಂತೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್ ಫ್ಯಾಕ್ಟರಿಯೇ ತೆರೆದುಕೊಂಡಿದ್ದು, ರಾಜ್ಯದ ಉದ್ದಗಲಕ್ಕೂ ಡ್ರಗ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಕರುನಾಡು ವ್ಯಸನಿಗಳ ಬೀಡಾಗಿದೆ. ಲಕ್ಷಾಂತರ ಕುಟುಂಬಗಳು ಇದರಿಂದ ಬೀದಿಗೆ ಬೀಳುವಂತಾಗಿರುವುದು ನಿಮ್ಮ ಸಾಧನೆಯೇ?
ಶಿಕ್ಷಣ ಸೌಭಾಗ್ಯ ಕಲ್ಪಿಸಿ ಭವಿಷ್ಯತ್ತಿನ ಮಕ್ಕಳನ್ನು ದೇಶದ ಸಂಪನ್ಮೂಲವನ್ನಾಗಿಸಲು ಸಂಕಲ್ಪ ತೊಡಬೇಕಾದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯನ್ನೂ ತರಲಿಲ್ಲ, ಶಾಲೆಗಳನ್ನಂತೂ ತೆರೆಯಲೇ ಇಲ್ಲ, ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಮುಂದಾಗಲಿಲ್ಲ, ಜ್ಞಾನ ಗಂಗೆ ಹರಿಯಬೇಕಾದ ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್ ತೊಡಲು ಅವಕಾಶ ಮಾಡಿಕೊಟ್ಟು ಮತೀಯ ವಿಷ ಬೆರೆಸಲು ಹೊರಟಿರುವುದು ನಿಮ್ಮ ಸರ್ಕಾರದ ಸಾಧನೆಯೇ?
ಆರೋಗ್ಯ ಇಲಾಖೆಯಂತೂ ತುಕ್ಕು ಹಿಡಿದು ಕುಳಿತಿದೆ. 9 ತಿಂಗಳು ಹೊತ್ತು ಹೆತ್ತು ತಮ್ಮ ಕನಸಿನ ಕಂದಮ್ಮನನ್ನು ಮಡಿಲಿಗೆ ಹಾಕಿಕೊಳ್ಳುವ ಕನಸು ಹೊತ್ತು ಬರುವ ಗರ್ಭಿಣಿ ಸ್ತ್ರೀಯರ ಹಾಗೂ ಬಾಣಂತಿಯರ ಸರಣಿ ಸಾವು ನಿಮ್ಮ ಮೂರು ವರ್ಷ ಆಡಳಿತದ ಕರಾಳ ಛಾಯೆ. ಹೊಸ ಆಸ್ಪತ್ರೆಗಳ ಆರಂಭಿಸುವುದಾಗಿರಲಿ, ಕೊಳೆತು ನಾರುವ ಸ್ಥಿತಿಯಲ್ಲಿರುವ ಆಸ್ಪತ್ರೆಗಳನ್ನು ಸುಧಾರಿಸುವ ಯಾವ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಿಲ್ಲ. ದೇವ ಧನ್ವಂತರಿಯ ಜಾಗದಲ್ಲಿ ಯಮನ ಸ್ವರೂಪಿಯ ಆಸ್ಪತ್ರೆಗಳನ್ನು ಸೃಷ್ಟಿಸಿದ್ದು ನಿಮ್ಮ ಸಾಧನೆಯೇ?
ಸರ್ಕಾರದ ಪಾವತಿಯನ್ನು ನಂಬಿ ಗುತ್ತಿಗೆ ಪೂರೈಸಿದ ಗುತ್ತಿಗೆದಾರರ ಕತ್ತು ಹಿಸುಕಲು ಕಮೀಷನ್ ಮುಷ್ಠಿಯನ್ನು ಬಳಸಿ, ಗುತ್ತಿಗೆದಾರರ ಬದುಕನ್ನು ಹೀಯಾಯ ಸ್ಥಿತಿಗೆ ತಳ್ಳಿ, ಪರ್ಸೆಂಟೇಜ್ ಸರ್ಕಾರ ಎಂದು ಕರೆಸಿಕೊಂಡಿದ್ದು ನಿಮ್ಮ ಸರ್ಕಾರದ ಸಾಧನೆಯೇ?
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ, ಪ್ರಜಾಪ್ರಭುತ್ವ ವ್ಯವಸ್ತೆಯ ನಂಬಿಕೆಗೆ ದ್ರೋಹ ಬಗೆದು, ತಳಮಟ್ಟದಿಂದ ಉನ್ನತ ಮಟ್ಟದವರೆಗೆ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಲೂಟಿಕೋರತನ, ಕಮೀಷನ್ ದಂಧೆ, ವಿಪರೀತ ಬೆಲೆಯೇರಿಕೆಯ ಬಿಸಿ ನಿಮ್ಮ ಸರ್ಕಾರದ ಕುಖ್ಯಾತಿ ಸಾಧನೆಯ ಕಿರೀಟಕ್ಕೆ ತಗುಲಿಸೊಂಡು ಸಂಘಟಿಸುತ್ತಿರುವ ನಿಮ್ಮ ಸಮಾವೇಶ ಸಾಧನೆಯದ್ದಲ್ಲ, ಭಂಡತನದ ಪರಾಕಾಷ್ಠೆಯ ಪ್ರದರ್ಶನ.
ನೀವು ಘೋಷಿಸಿರುವ ಸಾಧನೆಗಳೆಲ್ಲವೂ ಕಾಗದದ ಮೇಲಷ್ಟೇ ಜಾಹಿರಾತಿನ ಫಲಕಗಳ ಮೇಲಷ್ಟೇ ಕಾಣುತ್ತಿದೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ
