Karnataka Forest Department ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾನವ–ವನ್ಯಜೀವಿ ಸಂಘರ್ಷವೂ ತೀವ್ರವಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಹೇಳಿದರು.
ಅವರು ಕರ್ನಾಟಕ ಅರಣ್ಯ ಇಲಾಖೆ, ಚಿಕ್ಕಮಗಳೂರು ವೃತ್ತ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಆಯೋಜಿಸಿದ್ದ ‘ಮಾನವ–ವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸುಮಾರು 40 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶದಲ್ಲಿ 11 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಸಂರಕ್ಷಿತ ವಲಯವಾಗಿ ಗುರುತಿಸಲಾಗಿದೆ. ಸರ್ಕಾರದ ಸಂರಕ್ಷಣಾ ಕ್ರಮಗಳಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ತಿಳಿಸಿದರು.
ಅರಣ್ಯದ ಅಂಚಿನಲ್ಲಿ ಕೃಷಿ ಚಟುವಟಿಕೆಗಳು ಹಾಗೂ ವಾಣಿಜ್ಯ ಬೆಳೆಗಳ ಹೆಚ್ಚಳದಿಂದ ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಸೆಳೆಯಲ್ಪಡುತ್ತಿವೆ. ರಸ್ತೆ ಅಭಿವೃದ್ಧಿ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಇದರಿಂದ ಸಂಘರ್ಷ ಹೆಚ್ಚುತ್ತಿದೆ ಎಂದು ಹೇಳಿದರು.
ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್, ಸೌರ ಬೇಲಿ ಹಾಗೂ ಆನೆ ನಿರೋಧಕ ಕಂದಕಗಳಂತಹ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ದೀರ್ಘಕಾಲೀನ ಪರಿಹಾರಕ್ಕಾಗಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಸಾಕಾನ್ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎಚ್.ಎನ್. ಕುಮಾರ್ ಮಾತನಾಡಿ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೊಸ ಸಮಸ್ಯೆಯಲ್ಲ. ಅದು ಮಾನವ ನಾಗರಿಕತೆಯ ಇತಿಹಾಸದಷ್ಟೇ ಹಳೆಯದು ಎಂದು ಹೇಳಿದರು.
Karnataka Forest Department ಪ್ರಾಚೀನ ಕಾಲದ ನೇಪಾಳದ ಪಶುಪತಿ ಶಿಲ್ಪಕಲೆಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿದೆ. ‘ಪಶು’ ಎಂದರೆ ಪ್ರಾಣಿ, ‘ಪತಿ’ ಎಂದರೆ ರಕ್ಷಕ ಎಂಬ ಅರ್ಥವಿದ್ದು, ಅಂದಿನ ಕಾಲದಲ್ಲೇ ಪ್ರಾಣಿಗಳಿಗೆ ರಕ್ಷಣೆ ಅಗತ್ಯ ಎಂಬ ಚಿಂತನೆ ಇತ್ತು ಎಂದು ತಿಳಿಸಿದರು.
ಐಎಫ್ಎಸ್ ಅಧಿಕಾರಿ ಪುಲ್ಕಿತ್ ಮೀನಾ ಮಾತನಾಡಿ, ತಂತ್ರಜ್ಞಾನ ಮಾತ್ರದಿಂದ ವನ್ಯಜೀವಿ ಸಂರಕ್ಷಣೆ ಸಾಧ್ಯವಿಲ್ಲ. ಜನರಲ್ಲಿ ವನ್ಯಜೀವಿಗಳ ಬಗ್ಗೆ ಸಹಿಷ್ಣುತೆ ಬೆಳೆಸುವುದು ಅಗತ್ಯ ಎಂದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಟಿ.ಎನ್. ಪ್ರಕಾಶ್ ಕಮ್ಮರಡಿ, ಐಎಫ್ಎಸ್ ಯಶ್ಪಾಲ್ ಕ್ಷೀರಸಾಗರ್ ಹಾಗೂ ವನ್ಯಜೀವಿ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಉಪಸ್ಥಿತರಿದ್ದರು.
