Graduation Day “ಜ್ಞಾನವು ಕೌಶಲ್ಯವಾಗದಿದ್ದಲ್ಲಿ ನಿರರ್ಥಕ”
-ಬಾಪೂಜಿ ಎಂಬಿಎ ಪದವಿ ಪ್ರದಾನದಲ್ಲಿ ವಿನಯ್ ಪಾಟೀಲ್-
ದಾವಣಗೆರೆ.ಏ.18. ಪದವಿ ಮೂಲಕ ಪಡೆದ ಶೈಕ್ಷಣಿಕ ಜ್ಞಾನವು ಕೌಶಲ್ಯವಾಗಿ ಪರಿವರ್ತನೆಯಾಗದಿದ್ದಲ್ಲಿ ನಿರರ್ಥಕ ಎಂದು ನಾಯಕತ್ವ ತರಬೇತುದಾರ ವಿನಯ್ ಪಾಟೀಲ್ ಅಭಿಪ್ರಾಯಪಟ್ಟರು.
ಅವರಿಂದು ಸಂಜೆ ನಗರದ ಲೇಕ್ ವ್ಯೂನ ಬಾಪೂಜಿ ಎಂಬಿಎ ಪದವಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮ್ಯಾನೇಜ್ಮೆಂಟ್ ಪದವೀಧರರು ಶೈಕ್ಷಣಿಕ ಮತ್ತು ಔದ್ಯಮಿಕ ರಂಗದ ನಡುವಿನ ಸೇತುವೆಯಂತೆ ಕಾರ್ಯಗೈಯಬೇಕಿದ್ದು ಸಮಾಜದೊಂದಿಗೆ ಬೆರೆತು ಔದ್ಯಮಿಕರಂಗದ ವೈವಿಧ್ಯತೆಗಳ ಅರಿವು ಪಡೆದು ನಿರ್ಧಾರಗಳನ್ನು ಕೈಗೊಳ್ಳಬೇಕು, ಇದಕ್ಕೆ ಆತ್ಮವಿಶ್ವಾಸವೇ ಬಂಡವಾಳವೆಂದು ಭಾವಿಸಬೇಕು ಎಂದರು. ವೇತನದ ಮೊತ್ತ ನೋಡಿ ನೌಕರಿಗಳಿಗೆ ಹೋಗದೆ ಕಲಿಯಲು ಅವಕಾಶ ಎಷ್ಟಿದೆ ಎಂಬುದನ್ನು ಪರಿಗಣಿಸಬೇಕು ಎಂದರಲ್ಲದೇ ಯುದ್ಧ ಯಾವುದೇ ರಾಷ್ಟ್ರಗಳ ಮಧ್ಯೆ ನಡೆದರೂ ಯಾರೂ ನಿಶ್ಚಿಂತೆಯಿಂದ ಕೂರುವಂತಿಲ್ಲ, ಉಂಟಾಗುವ ಪರಿಣಾಮಗಳಿಗೆ ಸಾಧ್ಯ ಪರಿಹಾರ ಏನೆಂಬುದನ್ನು ಆಲೋಚಿಸಲೇಬೇಕು ಎಂದರು.
ಅಧ್ಯಕ್ಷೀಯ ನುಡಿಗಳ ನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಅಥಣಿ ಎಸ್ ವೀರಣ್ಣನವರು ಪದವೀಧರರಿಗೆ ವಿಶಾಲ ವಿಶ್ವವು ತೆರೆದಿದೆ, ಅದರಲ್ಲಿ ಛಾಪು ಮೂಡಿಸಲು ಅವಕಾಶವಿದೆ, ಇದಕ್ಕಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಅರಿವನ್ನು ನಿರಂತರ ಹೊಂದುತ್ತಿರಬೇಕು ಎಂದು ನಿರ್ವಹಣಾ ಪದವೀಧರರಿಗೆ ಕಿವಿಮಾತು ಹೇಳಿದರು.
Graduation Day ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಸ್ವಾಗತ ಕೋರಿದರು. ವರದಿ ವಾಚನವನ್ನು ಸಹಾಯಕ ಅಧ್ಯಾಪಕಿ ಸರೋಜಾ ಎಸ್ ಮಾಡಿದರೆ ಸಹಾಯಕ ಅಧ್ಯಾಪಕ ಡಾ. ವಿಜಯ್ ಕೆ ಎಸ್ ಪದವಿ ಪ್ರದಾನದ ವಿನಂತಿ ನೆರವೇರಿಸಿದರು. ವಿಭಾಗ ಮುಖ್ಯಸ್ಥ ಡಾ ಸುಜಿತ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ. ಶ್ರುತಿ ಮಾಕನೂರು ಮುಂತಾಗಿ ಬೋಧಕ ವರ್ಗದ ಉಪಸ್ಥಿತಿಯಲ್ಲಿ ರಾಂಕ್ ವಿಜೇತರನ್ನು ಪುರಸ್ಕರಿಸಲಾಯಿತು. ಪ್ರಾಂಶುಪಾಲ ಡಾ. ಪ್ರಕಾಶ್ ಎಸ್ ಅಳಲಗೇರಿ ವಂದನೆ ಸಮರ್ಪಿಸಿದರು.
-ಚಿತ್ರ ಹಾಗೂ ವರದಿ:
ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು
