ಸುಖ ಸಂತೋಷಗಳು ದೇಹ ಮತ್ತು ಮನಸ್ಸಿಗೆ ಆಗುವ ಅನುಭವಗಳಾದರೆ ಆನಂದವು ಹೃದಯ ಮತ್ತು ಆತ್ಮಕ್ಕೆ ಆಗುವ ಅನುಭವ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಸಂಗೀತ ಕಲಾ ಕೇಂದ್ರದ ವತಿಯಿಂದ ಏರ್ಪಾಡಾಗಿದ್ದ ಪುರಂದರ ದಾಸರ, ತ್ಯಾಗರಾಜರ ಹಾಗೂ ವಾಗ್ಗೇಯಕಾರರ ಸ್ಮರಣೋತ್ಸವದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಯ, ಶೋಕ, ಮೋಹಗಳಿಲ್ಲದ ಆನಂದದ ಅನುಭವವು ನಮಗೆ ಗಾಢ ನಿದ್ರೆಯಲ್ಲಿ ಆಗುತ್ತಿದ್ದು ಇದನ್ನು ಎಚ್ಚರದಲ್ಲೂ ಹೊಂದಲು ಭಾರತೀಯ ವಾದ ಶಾಸ್ತ್ರೀಯ ಸಂಗೀತ, ನೃತ್ಯ, ಸಾಹಿತ್ಯ, ಲಲಿತ ಕಲಾದಿಗಳಿಂದ ಸಾಧ್ಯ ಎಂದು ಹೇಳಿದರು.
ಕಠಿಣ ತರವಾಗಿದ್ದ ಶಾಸ್ತ್ರೀಯ ಸಂಗೀತವನ್ನು ಮಕ್ಕಳು ಸಹಾ ಸುಲಭವಾಗಿ ಕಲಿಯುವಂತೆ ಸರಳೀಕರಣ ಗೊಳಿಸಿ ಕೊಟ್ಟವರು ದಾಸ ಶ್ರೇಷ್ಠ ಪುರಂದರದಾಸರು. ಇಂತಹ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳಿಗೆ ಕೃತಿಗಳನ್ನು ರಚಿಸಿ ಕೊಟ್ಟವರು ತ್ಯಾಗರಾಜ ಭಾಗವತರು ಮುಂತಾಗಿ ಅನೇಕ ವಾಗ್ಗೇಯಕಾರರು, ಇಂತಹ ಶಾಸ್ತ್ರಿಯ ಕಲೆಗಳನ್ನು ತಾವೂ ಕಲಿತು ಮಕ್ಕಳಿಗೂ ಕಲಿಯಲು ಪ್ರೋತ್ಸಾಹಿಸುವ ಪೋಷಕರು ಅಭಿನಂದನಾರ್ಹರು ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಹಿಂದೂಸ್ತಾನಿ ಸಂಗೀತ ಕಲಾವಿದರಾದ ಭೀಮಸೇನ ರಂಗಾಚಾರ್ ಜೋಶಿಯವರು ಹಾಡಲು ಪ್ರಯತ್ನಿಸುವವರಿಗೆ ಸ್ವರ ಲಯಗಳು ತಾನಾಗಿಯೇ ಬರಬಹುದು ಆದರೆ ರಾಗ ತಾಳಗಳು ಮಾತ್ರ ಗುರುಗಳಿಂದಲೇ ಕಲಿಯಬೇಕಾದ್ದು ಎಂದರು.
ಗೌರವ ಉಪಸ್ಥಿತಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ತೊಗಲೇರಿಯವರು ಶಾಸ್ತ್ರೀಯ ಸಂಗೀತ ನೃತ್ಯ ಸಾಹಿತ್ಯಗಳ ಕಲಿಕೆ, ಪ್ರಸ್ತುತಿ ಹಾಗೂ ಅಸ್ವಾದನೆಗಳು ಸುಸಂಸ್ಕೃತಿಯ ಲಕ್ಷಣ ಎಂದರು.
ನಾಟ್ಯ ಭಾರತಿಯ ಅಧ್ಯಕ್ಷೆ ವಿದುಷಿ ಶ್ರೀಮತಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ವಿಜಯ ಕುಮಾರ್ ಕಲಮದಾನಿಯವರ ಉಪಸ್ಥಿತಿಯಲ್ಲಿ ನೃತ್ಯ ಶಿಕ್ಷಕ ವಿದ್ವಾನ್ ಶ್ರೀನಿಧಿ ಆರ್ ಕುಲಕರ್ಣಿ ಸ್ವಾಗತ ಕೋರಿದರು.
ಕಲಾ ಕೇಂದ್ರದ ಹಿರಿಕಿರಿಯ ವಿದ್ಯಾರ್ಥಿಗಳು ವೈವಿಧ್ಯಮಯ ಸಂಗೀತ ಕೃತಿಗಳನ್ನು ಪ್ರಸ್ತುತಪಡಿಸುವಾಗ ಹಾರ್ಮೋನಿಯಂ ಹಾಗೂ ತಬಲಾ ಸಹವಾದ್ಯವನ್ನು ಕ್ರಿಸ್ತಾನಂದ ಮತ್ತು ಭರತೇಶ್ ನೀಡಿದರು. ಬಿ ವಿ ರಾಜಶೇಖರ್, ವಿಶ್ವನಾಥ್, ಜಯಶ್ರೀ ಮುಂತಾದವರು ಸಹಕರಿಸಿದರು.
