World Water Day ಪ್ರಕೃತಿಯನ್ನು ಅನುಸರಿಸಿ ಬದುಕಿದಲ್ಲಿ ಉತ್ತಮ ಆರೋಗ್ಯ, ಜೀವನ ಹಾಗೂ ಸಮತೋಲನ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ಜಿ ಎ ತಿಳಿಸಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಜಲ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಎಲ್ಲವೂ ಮಿಳಿತವಾಗಿದೆ. ಅದನ್ನರಿತು ನಾವು ಬದುಕಬೇಕು. ಪ್ರಕೃತಿಯಲ್ಲಿ ಅನೇಕ ಚಮತ್ಕಾರಗಳಿವೆ. ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲ ರೀತಿಯ ಜೀವ ಸಂಕುಲ ನಮ್ಮ ಜೀವನದ ಮುಖ್ಯ ಭಾಗವಾಗಿದ್ದು, ಇದನ್ನು ಸಮತೋಲನವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು
ಕುಟುಂಬವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಕೂಡ ಪ್ರಕೃತಿ ಎಂದರು.
ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ್ನು ಸಮರ್ಪಕವಾಗಿ ಒದಗಿಸಬೇಕು. ಪ್ರಾಣಿ, ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸುವುದು ಪುಣ್ಯದ ಕೆಲಸ ಎಂದು ತಿಳಿಸಿದರು.
World Water Day ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಮಾತನಾಡಿ, ನೀರು ನಮ್ಮೆಲ್ಲರ ಜೀವನಾಡಿಯಾಗಿದ್ದು, ಮನುಷ್ಯ, ಪ್ರಾಣಿ, ಪಕ್ಷಿ ಸಂಕುಲದೊಂದಿಗೆ
ಆಹಾರ ಉತ್ಪಾದಿಸುವ
ರೈತಾಪಿ ವರ್ಗಕ್ಕೆ ನೀರಿನ ಅನುಕೂಲ ಮಾಡಿಕೊಡಬೇಕು. ನೀರಿನ ಪ್ರಾಮುಖ್ಯತೆಯನ್ನು ಎಲ್ಲರೂ ಅರಿತುಕೊಂಡು ಮಿತವಾಗಿ ಬಳಕೆ ಮಾಡಬೇಕು. ಈ ಕ್ಷಣದಿಂದಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಪ್ರಾಸ್ತಾವಿಕವಾಗಿಮಾತನಾಡಿ, ಭೂಮಿ ಮೇಲೆ ಲಭ್ಯವಿರುವ ಶೇ. 97 ರಷ್ಟು ನೀರಿನಲ್ಲಿ ಕುಡಿಯಲು ಯೋಗ್ಯವಿರುವುದು ಕೇವಲ
ಶೇ.1.5 ರಷ್ಟು. ಈ ನೀರು ಅತ್ಯಮೂಲ್ಯವಾಗಿದ್ದು ಮಾನವರು ಸದ್ಬಳಕೆ ಮಾಡಿಕೊಂಡು ನಮ್ಮೊಂದಿಗೆ ಸಹ ಜೀವನ ಮಾಡಿಕೊಂಡಿರುವ ಪ್ರಾಣಿ, ಪಕ್ಷಿಗಳಿಗೆ ಸಹ ಒದಗಿಸಬೇಕು.
ನಮ್ಮಜಿಲ್ಲೆಯಲ್ಲಿನೀರಿನ ಅಭಾವ ಇಲ್ಲ. ಆದರೆ ಸರಿಯಾದ ಸದ್ಬಳಕೆ ಆಗಬೇಕಿದೆ. ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಬಳಕೆ ಮಾಡಿದಲ್ಲಿ ನೀರನ್ನು ಮಿತವಾಗಿ ಖರ್ಚು ಮಾಡಬಹುದು ಎಂದರು.
2015 ರಲ್ಲಿ ಹಸ್ತಿಮಲ್ ಜೈನ್ ಎಂಬುವವರು ವಾಟರ್ ಫಾರ್ ವಾಯ್ಸ್ ಲೆಸ್ ಎಂಬ ಸಂಸ್ಥೆ ಸ್ಥಾಪನೆ ಮಾಡಿ , ಈ ಮೂಲಕ ಪ್ರಾಣಿ, ಪಕ್ಷಿ ಗಳಿಗೆ ಅವಶ್ಯಕವಾದ ನೀರಿನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಿಸತ್ತಾ ಬಂದಿದ್ದಾರೆ ಎಂದರು.
ಬೆಂಗಳೂರಿನ ವಾಟರ್ ಆಫ್ ವಾಯ್ಸ್ ಲೆಸ್ ಸಂಸ್ಥೆ ಸಹ ಸಂಸ್ಥಾಪಕ ಪ್ರಫುಲ್ ಮೋನ್ ರವರು ಪ್ರಾಣಿ, ಪಕ್ಷಿಗಳ ನೀರಿನ ಅವಶ್ಯಕತೆ, ನೀರಿಗಾಗಿ ಅವುಗಳು ಎದುರಿಸುತ್ತಿರುವ ಸಮಸ್ಯೆಗಳು, ಸಂಘರ್ಷಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪಿಪಿಟಿ ಪ್ರದರ್ಶನ ಮೂಲಕ ತಿಳಿಸಿಕೊಟ್ಟರು.
ವಾಟರ್ ಆಫ್ ವಾಯ್ಸ್ ಲೆಸ್ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಅಮಿ ಫ್ರಫುಲ್ ಮೋನ್, ಸುಪ್ರಿಯಾ ಮಾತನಾಡಿ, ಸಂಸ್ಥೆಯು ಪ್ರಾಣಿ, ಪಕ್ಷಿಗಳಿಗೆ ಹೇಗೆ ನೀರು ಒದಗಿಸುತ್ತಿದೆ ಎಂಬುದನ್ನು ವಿವರಿಸಿ, ಈ ಬಗ್ಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರು ಹಾಜರಿದ್ದರು.
