Chamber of commerce shivamogga ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮತ್ತೊಂದು ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮನವಿ ಮಾಡಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆ ಸಿ ಸಿ ಐ) ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಸಮನ್ವಯ ಸಂವಾದಾತ್ಮಕ ಸಭೆಯಲ್ಲಿ ಮಾತನಾಡಿ, ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ರಾಜ್ಯ ಪೀಠ ಅರೆ ನ್ಯಾಯಾಂಗ ಪ್ರಾಧಿಕಾರವಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ತೆರಿಗೆ ವಿಭಾಗವು ಮೊದಲಿನಿಂದಲೂ ಹಾಸನ ಮತ್ತು ಚಿಕ್ಕಮಗಳೂರು ಸೇರಿದಂತೆ ಮೂರು ಜಿಲ್ಲೆಗಳ ಮಲೆನಾಡು ವಿಭಾಗಿಯ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆಯ ವ್ಯಾಜ್ಯಗಳ ಮೇಲ್ಮನವಿ ಅರ್ಜಿಯನ್ನು ಸ್ವೀಕರಿಸುತ್ತಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಸುತ್ತಮುತ್ತಲಿನ ಇನ್ನೂ 3-4 ಜಿಲ್ಲೆಗಳನ್ನು ಸೇರಿಸಿಕೊಂಡು ಶಿವಮೊಗ್ಗವನ್ನು ಕೇಂದ್ರಿಕರಿಸಿ ಬೆಂಗಳೂರಿನ ಜತೆ ಮತ್ತೊಂದು ಮೇಲ್ಮನವಿ ನ್ಯಾಯಮಂಡಳಿಯನ್ನು ರಚಿಸಿದರೆ ಇಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಟ್ರಕ್, ಬಸ್ ಟರ್ಮಿನಲ್, ಬಹುಹಂತದ ಕೌಶಲ್ಯಾಭಿವೃದ್ಧಿ ಕೇಂದ್ರ, ಶಿವಮೊಗ್ಗ-ಭದ್ರಾವತಿ ಪೊಲೀಸ್ ಆಯುಕ್ತರ ಕಚೇರಿ, ಆಹಾರ ಪದಾರ್ಥಗಳ ಸಂಸ್ಕರಣ ಘಟಕ ಹಾಗೂ ಶೀತಲ ಶೇಖರಣಾ ಘಟಕ ಸ್ಥಾಪನೆ, ಆಯಷ್ ಯೂನಿವರ್ಸಿಟಿಗೆ ಅನುದಾನ, ತುಂಗಾ ಮತ್ತು ಭದ್ರಾ ನದಿಯ ನೀರು ಸ್ವಚ್ಛತೆಗೆ ಒಂದು ವಿಶೇಷ ಯೋಜನೆ, ಕರಕುಶಲ ವಸ್ತುಗಳ ಪ್ರೋತ್ಸಾಹಕ್ಕಾಗಿ ಕಲಾಗ್ರಾಮ, ಅಮ್ನೆಸ್ಟಿ ಸ್ಕೀಮ್, ಸ್ಯಾಟ್ ಲೈಟ್ ಬಸ್ ಸ್ಟಾಂಡ್, ವಿ ಐ ಎಸ್ ಎಲ್, ಎಂ.ಪಿ.ಎಂ ಕೈಗಾರಿಕೆ ಪುನರಾರಂಭ, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ, ಫುಡ್ ಪಾರ್ಕ್ ಸ್ಥಾಪನೆ, ಕೈಗಾರಿಕಾಗಳ ವೇತನ ಕಾಯ್ದೆ ಅಧಿಸೂಚನೆ ಸಮಸ್ಯೆ, ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ಏಕೀಕೃತ ನೋಂದಣಿ ಮಾಡಲು ಬೇಕಾದ ವ್ಯವಸ್ಥೆ, ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ಮೂಲಸೌಕರ್ಯಗಳ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ, ಮಾರ್ಗದರ್ಶನ ಮತ್ತು ಮೂಲಸೌಕರ್ಯ ಬೆಂಬಲ, ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಹಾಗೂ ರಾಜ್ಯದ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹರಿಸರಬೇಕು ಎಂದು ಮನವಿ ಮಾಡಿದರು.
Chamber of commerce shivamogga ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಸಾಯಿರಾಮ್ ಪ್ರಸಾದ್, ಸಮನ್ವಯ ಅಧ್ಯಕ್ಷ ಹಿರೇಮಠ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ ಉಪಸ್ಥಿತರಿದ್ದರು.
