JCI Shivamogga ರಕ್ತದಾನ ಮಾಡುವುದರಿಂದ ಹೃದಯಾಘಾತ ಪ್ರಮಾಣ ಕಡಿಮೆ ಆಗುವ ಜತೆಯಲ್ಲಿ ಸದಾ ಆರೋಗ್ಯದಿಂದ ಇರಲು ಸಾಧ್ಯ ಎಂದು ಜೆಸಿಐ ವಲಯ ಮಾಜಿ ಉಪಾಧ್ಯಕ್ಷ ಸತೀಶ್ ಚಂದ್ರ ಹೇಳಿದರು.
ಶಿವಮೊಗ್ಗ ನಗರದ ಎಲ್ಎಲ್ಆರ್ ರಸ್ತೆಯಲ್ಲಿರುವ ಎಸ್ಎಸ್ ಎಂಟರ್ಪ್ರೈಸಸ್ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ, ಪರಿಪೂರ್ಣ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ. ರಕ್ತದಾನ ಮಾಡುವುದು ಪುಣ್ಯದ ಕೆಲಸ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ರಕ್ತದ ಬೇಡಿಕೆ ಇದ್ದು, ಅವುಗಳನ್ನು ನೀಗಿಸಲು ಇಂತಹ ರಕ್ತದಾನ ಶಿಬಿರ ತುಂಬಾ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮೂಢನಂಬಿಕೆಯಿಂದ ಸಾಕಷ್ಟು ಜನ ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದಾನದಿಂದ ಹೊಸ ರಕ್ತ ನಮ್ಮ ದೇಹದಲ್ಲಿ ಉತ್ಪತ್ತಿಯಾಗಿ ಸದಾ ಆರೋಗ್ಯವಂತರಾಗಿರುತ್ತೇವೆ ಎಂದು ಹೇಳಿದರು.
ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ನಾವು ಮಾಡುವ ಪವಿತ್ರವಾದ ರಕ್ತದಾನದಿಂದ ನಾಲ್ಕು ಜನರ ಪ್ರಾಣವನ್ನು ಉಳಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬ ಯುವಜನರು ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡೋಣ. ರಕ್ತದಾನದಿಂದ ಏಕಾಗ್ರತೆ ಜಾಸ್ತಿಯಾಗುತ್ತದೆ ಎಂದು ಹೇಳಿದರು.
ಮೈತ್ರಿ ಮೈ ಜುವೆಲರ್ಸ್ ಸಿಇಒ ಸೆಂಥಿಲ್ ವೇಲನ್ ಮಾತನಾಡಿ, ಸಮಾಜದಲ್ಲಿ ಅತ್ಯಂತ ಶ್ರೇಷ್ಠವಾದ ದಾನ ಎಂದರೆ ಅದು ರಕ್ತದಾನ. ನಾವು ರಕ್ತದಾನ ಮಾಡುವುದರ ಜೊತೆಗೆ ಇತರರನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.
JCI Shivamogga ಜೆಸಿಐ ಸಂಸ್ಥೆಯ ವಲಯ ನಿರ್ದೇಶಕ ಜಿ.ಗಣೇಶ ಮಾತನಾಡಿ, ಕೇವಲ ದಾನಿಗಳ ದೇಹದಿಂದ ಮಾತ್ರ ರಕ್ತವನ್ನು ದಾನವಾಗಿ ಪಡೆಯಬಹುದು. ಕೃತಕವಾಗಿ ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸಂತೋಷ್ ಮಾತನಾಡಿ, ಜೆಸಿಐ ಸಂಸ್ಥೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ರಕ್ತದಾನದ ಬಗ್ಗೆ ಅರಿವು ಜಾಗೃತಿ ಹಾಗೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
120 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, 47 ಬಾರಿ ರಕ್ತದಾನ ಮಾಡಿದ ಜಿ.ವಿಜಯಕುಮಾರ್, 51 ಬಾರಿ ರಕ್ತದಾನ ಮಾಡಿದ ಸೆಂಥಿಲ್ ವೆಲನ್ ಅವರಿಗೆ ಸನ್ಮಾನಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಮಂಜುನಾಥ್ ಅಪ್ಪಾಜಿ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಪದಾಧಿಕಾರಿಗಳು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.
