S. N. Channabasappa ತ್ಯಾಗ ಎಂದರೆ ಏನೆಂದು ತೋರಿಸಿದ ಭಗವಾನ್ ಮಹಾವೀರರು ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಜಗತ್ತಿಗೆ ಸಾರಿದ ಮಹಾನ್ ಜ್ಞಾನಿ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಸಮಾಜದ ವಿವಿಧ ಸಂಘಟನೆಗಳು ಶಿವಮೊಗ್ಗ ಇವರುಗಳ
ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾರಾಜರಾಗಿದ್ದ ವ್ಯಕ್ತಿ, ತ್ಯಾಗಮಯಿಯಾಗಿ ಜೀವನದ ಪರಮೋಚ್ಚ ಮೌಲ್ಯಗಳನ್ನು ಸಮಾಜಕ್ಕೆ ನೀಡಿದರು. 24 ನೇ ತೀರ್ಥಂಕರರಾಗಿ ಜೀವನಮೌಲ್ಯಗಳನ್ನು, ವಿಚಾರಗಳನ್ನು ಧಾರೆ ಎರೆದರು.
ತಮ್ಮ 30ನೇ ವಯಸ್ಸಿನಲ್ಲಿ ಸಂಸಾರ ಸುಖವನ್ನು ತ್ಯಜಿಸಿ ಸನ್ಯಾಸಿಯಾದ ಇವರು
12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ ನಂತರ, ಅವರಿಗೆ ಪರಿಪೂರ್ಣ ಜ್ಞಾನ ಪ್ರಾಪ್ತಿಯಾಗುತ್ತದೆ. ಇಂದ್ರಿಯಗಳನ್ನು ಗೆದ್ದಿದ್ದರಿಂದ ಅವರನ್ನು ಜಿನ’ ಮತ್ತು ಮಹಾವೀರ ಎಂದು ಕರೆಯಲಾಗುತ್ತದೆ.
ಅವರು ಅವರಿಗಾಗಿ ಬದುಕಲಿಲ್ಲ. ಸಮಾಜಕ್ಕಾಗಿ ಬದುಕಿದರು. ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ ಈ ಪಂಚ ಮಹಾವ್ರತಗಳನ್ನು ಅನುಸರಿಸುವ ಮೂಲಕ ಮನುಕುಲಕ್ಕೇ ಮಾದರಿಯಾದ ಇವರು, ಎಲ್ಲರೂ ಇವನ್ನು ಅನುಸರಿಸುವಂತೆ ಕರೆ ನೀಡಿದರು.
ಆಸ್ತಿ ಮಾಡುವುದಕ್ಕಿಂತ ನಮ್ಮ ಮಕ್ಕಳನ್ನೇ ಸಮಾಜದ ಆಸ್ತಿ ಮಾಡುವಂತೆ ತಿಳಿಸಿ ಹೋದ ಇವರೇ ಸಮಾಜಕ್ಕೆ ಒಂದು ಸಂದೇಶವಾಗಿದ್ದಾರೆ.
ಜೈನ ಸಮಾಜಕ್ಕೆ ಕೇಳಿದ್ದನ್ನು ಕೊಡುವಂತಹ ಶಕ್ತಿ ಇದ್ದು, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದ ಅವರು ತ್ಯಾಗವೇ ನಮ್ಮ ಧ್ಯೇಯವಾಗಬೇಕು ಎಂದರು.
ಸಾಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿ.ಟಿ.ಸ್ವಾಮಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾವೀರರು ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದು ಇವರ ಮೂಲ ಹೆಸರು ವರ್ಧಮಾನ.
ಅವರ ಸಂದೇಶಗಳನ್ನು ಮೆಲುಕು ಹಾಕುವ ದಿನ ಇದಾಗಿದೆ. ಅವರ ಬಗ್ಗೆ ಮಾತನಾಡುತ್ತಾ ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಕಲ್ಯಾಣ ಕಾರ್ಯ ಆಗಬೇಕಿದೆ.
ಸತ್ಯವನ್ನು ಹುಡುಕಾಡಿದವರು ಮಹಾವೀರರು. ಸುಳ್ಳು, ಅಸತ್ಯದ ಕಾಲದಲ್ಲಿ ಸತ್ಯಕ್ಕಾಗಿ, ಜನರ ಕಲ್ಯಾಣಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದರು.
ಆತ್ಮ ಸಂಬಂಧಕ್ಕೆ ಜೈನ ಧರ್ಮ ಬಹಳ ಪ್ರಾಮುಖ್ಯತೆ ನೀಡುತ್ತದೆ.
ಪಂಚಾನಣುವ್ರತ ಆಚರಣೆಯನ್ನು ಹೃದಯಕ್ಕೆ ಇಳಿಸಿಕೊಂಡಾಗ ನಿಜವಾದ ಮನುಷ್ಯರಾಗುತ್ತೇವೆ.
ಬದುಕನ್ನು ಬದುಕಲಿಕ್ಕೆ ಬಿಡಬೇಕೆಂಬ ಸತ್ಯ ಸಾರಿದ್ದಾರೆ. ಇವತ್ತಿನಿಂದಲೇ ಅವರ ಆಲೋಚನೆಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕ.
S. N. Channabasappa ವೇದಗಳ ಕಾಲಕ್ಕಿಂತ ಮುಂಚೆ ಜೈನ ಧರ್ಮ ಅಸ್ತಿತ್ವದಲ್ಲಿ ಇತ್ತು. ಜೈನ ಧರ್ಮ ತ್ಯಾಗ, ಅಹಿಂಸೆಯ ಅನುಸರಣೆಯನ್ನು ಯಾವತ್ತೂ ಮಾಡುತ್ತಾ ಬಂದಿದೆ.
ಭಗವಾನ್ ಮಹಾವೀರರು ಕರ್ಮ ಸಿದ್ಧಾಂತಗಳನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಬದುಕನ್ನು ಶಾಂತ ಮತ್ತು ಸುಂದರಗೊಳಿಸುವ ವಿಚಾರಧಾರೆಗಳನ್ನು ನೀಡಿದ್ದಾರೆ. ನಾವು ಮುಂದಿನ ಪೀಳಿಗೆಗೆ, ಮಕ್ಕಳಿಗೆ ಮಹಾವೀರರ ಅಹಿಂಸಾ ತತ್ವ, ತ್ಯಾಗ, ಸತ್ಯದಂತಹ ವಿಚಾರಗಳನ್ನು ಧಾರೆ ಎರೆಯಬೇಕಿದೆ. ಸಂಬಂಧಗಳನ್ನು ಬೆಸೆದು, ಸಂಸ್ಕಾರವಂತರಾಗಬೇಕಿದೆ.
ಪ್ರಸ್ತುತದ ಸಂದರ್ಭಕ್ಕೆ ಮದ್ದು ಮಹಾವೀರರ ಅಹಿಂಸಾ ತತ್ವದಲ್ಲಿದ್ದು ಎಲ್ಲೆಡೆ ಇದನ್ನು ಹರಡಬೇಕಿದೆ ಎಂದು ಕರೆ ನೀಡಿದರು.
ಪ್ರಸ್ತುತ ಜೈನರ ಜನಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಸುಮಾರು ೪೫ ರಿಂದ ೫೦ ಲಕ್ಷ ಜನ ಮಾತ್ರ ಇದ್ದಾರೆ. ಆದರೆ ಜೈನರು ವ್ಯಾಪಾರ, ಉದ್ಯೋಗ, ಜಿಎಸ್ ಟಿ ಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಶೇ. ೩೨.೫ ರಷ್ಟು ಆರ್ಥಿಕ ಬೆಂಬಲ ದೇಶಕ್ಕೆ ನೀಡಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಮಹಾವೀರರ ಬಗ್ಗೆ ತಿಳಿಸಬೇಕಿದೆ ಎಂದರು.
ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷರಾದ ಜಯರಾಜ ಬಿ ಪಾಂಡಿ, ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಅಧಿಕಾರಿಗಳು ಪಾಲ್ಗೊಂಡಿದ್ದರು.
S. N. Channabasappa ಭಗವಾನ್ ಮಹಾವೀರರು ಮನುಕುಲಕ್ಕೇ ಮಾದರಿ- ಶಾಸಕ ಎಸ್.ಎನ್.ಚನ್ನಬಸಪ್ಪ.
Date:
