Ramadan ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಸಂಭ್ರಮದಿಂದ ರಂಜಾನ್ (ಈದ್-ಉಲ್-ಫಿತ್ರ್) ಹಬ್ಬವನ್ನು ಆಚರಿಸಿದರು.
ಹಬ್ಬದ ಅಂಗವಾಗಿ ದಾನ ನೀಡುವುದರ ಮೂಲಕ ಆಚರಣೆಗೆ ಹೆಚ್ಚಿನ ಅರ್ಥ ನೀಡಲಾಯಿತು. ಚಿಣ್ಣರು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.
ಬಂಧು-ಮಿತ್ರರ ಮನೆಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ವಿವಿಧ ಬಗೆಯ ಖಾಧ್ಯಗಳನ್ನು ತಯಾರಿಸಿ, ಸ್ನೇಹಿತರು, ಸಂಬಂಧಿಗಳ ಒಡಗೂಡಿ ಸಹ ಭೋಜನ ಮಾಡಿದರು.
ಪಟ್ಟಣದ ಮಾರ್ಕೆಟ್ ರಸ್ತೆಯ ಜಾಮಿಯಾ ಮಸೀದಿ, ಕಾನುಕೇರಿಯ ಅಹಲೇ ಸುನ್ನತ್ವಲ್ ಜಮಾತ್ ಜಾಮಿಯಾ ಮಸೀದಿ ಸೇರಿದಂತೆ ತಾಲೂಕಿನ ವಿವಿಧ ಮಸೀದಿಗಳಲ್ಲಿ ಮಸ್ಲೀಮರು ಪ್ರಾರ್ಥನೆ ಸಲ್ಲಿಸಿದರು. ನಂತರ ಮಸೀದಿಯಿಂದ ಈದ್ಗಾ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿ ಸಾಮೂಹಿಕ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಮಾರ್ಕೆಟ್ ರಸ್ತೆಯ ಜಾಮೀಯಾ ಮಸೀದಿಯ ಧರ್ಮಗುರು ಮೌಲಾನಾ ಮುಫ್ತಿ ತಪ್ಜಿಲ್ ಆಲಂ ಖಾಸ್ಮಿ ಧರ್ಮ ಸಂದೇಶ ನೀಡಿ, ಕಳೆದ ಒಂದು ತಿಂಗಳು ಕಾಲ ಕಠಿಣ ಉಪವಾಸ ವ್ರತದ ನಂತರ ಹಬ್ಬವನ್ನು ಆಚರಿಸಲಾಗುತ್ತಿದೆ. ಉಪವಾಸ ತಿಂಗಳಿನಲ್ಲಿ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿ ರೂಪಿಸುವ ಅಪೂರ್ವ ಅವಕಾಶವಾಗಿದೆ.
Ramadan ನಿಶ್ಚಯವಾಗಿಯೂ ಅಲ್ಲಾಹ್ ಸಹನಶೀಲರ ಜೊತೆಗಿದ್ದಾನೆ. ಒಳ್ಳೆಯದನ್ನು ಮಾಡಿದರೆ, ಅದರಿಂದ ಒಳಿತನ್ನು ಕಾಣಬಹುದು. ರಂಜಾನ್ನ ಅತ್ಯಂತ ಸುಂದರ ಅಂಶವೆಂದರೆ ದಾನ. ವ್ಯಕ್ತಿಯು ತಾನು ಗಳಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ದಾನ ನೀಡುವುದಾಗಿದೆ. ಸಮಾಜದಲ್ಲಿ ಶಾಂತಿ – ಸೌಹಾರ್ದಯುತವಾಗಿ ಪ್ರತಿಯೊಬ್ಬರು ಬಾಳಬೇಕು. ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಸನ್ಮಾರ್ಗದ ಹಾದಿಯಲ್ಲಿ ನಡೆಯಬೇಕು ಎಂದರು.
ಜಾಮೀಯಾ ಮಸೀದಿಯ ಅಂಜುಮಾನ್ ಇಸ್ಮಾಹುಲ್ ಮುಸ್ಲೀಮಿನ್ ಕಮಿಟಿಯ ಅಧ್ಯಕ್ಷ ಸೈಯದ್ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಮುಹಮ್ಮದ್ ಸಲೀಂ ಮಾತನಾಡಿ, ಹಬ್ಬದ ಶುಭ ಸಂದೇಶ ತಿಳಿಸಿದರು. ಮುಸ್ಲಿಂ ಸಮಾಜದವರು ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡಿದ್ದು ವಿಶೇಷವಾಗಿತ್ತು.
ಕಮಿಟಿಯ ಉಪಾಧ್ಯಕ್ಷ ಟಿ. ವಝೀರ್ ಆಹ್ಮದ್, ಜಂಟಿ ಕಾರ್ಯದರ್ಶಿ ಸೈಯದ್ ಖದೀರ್, ಯು. ಸೈಯದ್ ಇಮ್ರಾನ್, ಶಫಾಯತ್ ವುಲ್ಲಾ, ಅಯೂಬ್ ಖಾನ್, ಮಕ್ಬೂಲ್ ಆಹ್ಮದ್, ಪ್ರಮುಖರಾದ ಡಾ. ಸೈಯದ್ ಹಾಷಂ, ಎಂ. ಬಶೀರ್ ಆಹ್ಮದ್, ಅತೀಕ್ ವುರ್ ರೆಹಮಾನ್, ಎನ್. ನೂರ್ ಆಹ್ಮದ್, ಯು. ಫಯಾಜ್ ಆಹ್ಮದ್, ಯು. ಸೈಯದ್ ಸ್ವಾಲೇಹ, ಮೆಹಬೂಬ್ ಅಲಿ, ರಿಯಾಜ್ ಮೌಲಾನ, ಪತ್ರಕರ್ತ ಮುಹಮ್ಮದ್ ಆರೀಫ್, ಸೈಯದ್ ಶಾಹೀದ್, ಸಿರಾಜುದ್ದೀನ್, ಟಿ. ಸಮೀವುಲ್ಲಾ, ಸುಜಾಯತ್ವುಲ್ಲಾ, ಮುಹಮ್ಮದ್ ಸಾಜೀದ್ ಸೇರಿದಂತೆ ಸಾವಿರಾರು ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
