S. Kumar Bangarappa ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ ಮಾತ್ರವಲ್ಲದೆ ಒಲಂಪಿಕ್ ಕ್ರೀಡೆಯಲ್ಲಿ ಪ್ರತಿನಿಧಿಸುವಂತಹ ಪ್ರತಿಭೆಗಳಿದ್ದಾರೆ. ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರ ಇನ್ನಷ್ಟು ಎತ್ತರಕ್ಕೇರಲಿ ಎಂಬ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಖಾಸಿಗಿ ಬಸ್ ನಿಲ್ದಾಣ ಸಮೀಪದ ಬಿಜೆಪಿ ಕಚೇರಿಯಲ್ಲಿ ಸೊರಬ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕ್ರೀಡಾ ಕ್ಷೇತ್ರಕ್ಕೆ, ವಿಶೇಷವಾಗಿ ಬ್ಯಾಡ್ಮಿಂಟನ್ ಕ್ರೀಡೆಯ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಳೆದ ಏಳು ದಶಕಗಳಿಂದ ಸಾವಿರಾರು ಪ್ರತಿಭಾವಂತ ಆಟಗಾರರನ್ನು ರೂಪಿಸಿದೆ. ಪದ್ಮಶ್ರೀ ಪ್ರಕಾಶ್ ಪಡುಕೋಣೆ, ಲಕ್ಷ್ಯ ಸೇನ್ ಸೇರಿದಂತೆ ಅನೇಕ ಶ್ರೇಷ್ಠ ಆಟಗಾರರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
S. Kumar Bangarappa ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅತ್ಯಾಧುನಿಕ ಮೂಲಸೌಕರ್ಯ, ವೈಜ್ಞಾನಿಕ ತರಬೇತಿ ಮತ್ತು ಸಮಗ್ರ ಬೆಂಬಲ ಅಗತ್ಯವಾಗಿದೆ. ತರಬೇತಿ ಕೇಂದ್ರಗಳ ಸ್ಥಾಪನೆ, ಜೊತೆಗೆ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳ ಉತ್ತೇಜನಕ್ಕೆ ಸರ್ಕಾರದ ಸಹಕಾರವನ್ನು ನೀಡಬೇಕು. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಮೇಲ್ಬಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಅದಕ್ಕೆ ನೆಲ ಹಾಸು ಮಾಡಬೇಕಿದೆ. ಈ ಬಗ್ಗೆ ಸರ್ಕಾರ ಗಮನ ನೀಡಬೇಕು. ತಾಲೂಕಿನ ಬ್ಯಾಡ್ಮಿಂಟನ್ ಆಟಗಾರರು ಸಂಸ್ಥೆಯನ್ನು ನೋಂದಣಿ ಮಾಡಬೇಕು ಎಂದು ತಿಳಿಸಿದರು.
ಸೊರಬ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಅಕಿಲ್, ಕಾರ್ಯದರ್ಶಿ ಎಂ.ಪಿ. ರಾಘವೇಂದ್ರ, ಮುಹಮ್ಮದ್ ಯಾಸೀನ್, ಮುಹಮ್ಮದ್ ಸಫಾನ್, ಮುಹಮ್ಮದ್ ಆಸೀಫ್, ಅಬ್ದುಲ್ ಗಫಾರ್, ಸೈಯದ್ ಶಫೀರ್ ಸೇರಿದಂತೆ ಇತರರಿದ್ದರು.
