ರೇಡಿಯೋ ಕಿಸಾನ್ ದಿವಸದ ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದಲ್ಲಿ ರೇಡಿಯೋ ಕಿಸಾನ್ ದಿವಸ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಭದ್ರಾವತಿ ತಾಲ್ಲೂಕು ಹಳ್ಳಿಕೆರೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರಾದ ಡಾ.ಎಂ. ಕಿರಣಕುಮಾರ್, ಸಹಾಯಕ ಕೃಷಿ ನಿರ್ದೇಶಕರಾದ ಡಾ. ಬಿ.ಆರ್. ಮಮತ, ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕರಾದ ಸಿ ಲೋಕೇಶ್ವರ ಮತ್ತು ಶಿವಮೊಗ್ಗ ಜಿಲ್ಲೆ ಕಾರ್ಯದರ್ಶಿ ಡಾ.ಎಂ.ಜಿ.ವೇದಮೂರ್ತಿ, ಆಕಾಶವಾಣಿ ಭದ್ರಾವತಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಕೃಷ್ಣಪ್ಪ, ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಮತ್ತು ಕೃಷಿರಂಗ ವಿಭಾಗದ ಕಾರ್ಯಕ್ರಮ ನಿರ್ವಹಣ ಅಧಿಕಾರಿಗಳಾದ ಡಾ.ಎಸ್.ಎಂ.ಸುಧಾಕರ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ರೈತರನ್ನು ಸನ್ಮಾನಿಸಿ ಮಾತನಾಡಿದ ಡಾ.ಕಿರಣಕುಮಾರ್ ಆಕಾಶವಾಣಿ ಕೇಳಿ ಇಲಾಖೆಯ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಸ್ಟಾನ ಮಾಡಿಕೊಂಡಿರುವ ರೈತರು ಇಲಾಖೆಯಿಂದ ಸಿಗುವ ಸೌಲಭ್ಯ ಉಪಯೋಗಿಸಿಕೊಂಡು ಆಧುನಿಕ ಕೃಷಿಗೆ ಬರಲು ಕರೆನೀಡಿದರು. ರೈತರನ್ನು ಸನ್ಮಾನಿಸಿ ಮಾತನಾಡಿದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಆಕಾಶವಾಣಿ ೨೦೦೪ ರಲ್ಲಿ ದೇಶಾದ್ಯಂತ ಕಿಸಾನವಾಣಿ ಕಾರ್ಯಕ್ರಮವನ್ನು ಫೆಬ್ರವರಿ 15ರಂದು ಪ್ರಾರಂಭಿಸಿದ ಸವಿನೆನಪಿಗೆ ಪ್ರತೀ ವರ್ಷ ಫೆಬ್ರವರಿ ೧೫ರಂದು ರೇಡಿಯೋ ಕಿಸಾನ್ ದಿವಸ ಆಚರಿಸುತ್ತಿದೆ. ರೈತರ ಸಬಲೀಕರಣ ಯುವರೈತರನ್ನು ಪ್ರೋತ್ಸಾಹಿಸಲು ಮತ್ತು ಆಧುನಿಕ ಕೃಷಿ ಪದ್ದತಿ ಪ್ರೋತ್ಸಾಹಿಸುವ ದ್ಯೇಯವಾಕ್ಯವನ್ನು ಈ ವರ್ಷದ ದ್ಯೇಯವಾಗಿ ಘೋಷಿಸಲಾಗಿದೆ ಅದನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ 15 ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ರೈತರು, ಆಕಾಶವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು. ರೈತರು ವಿಷಯ ತಜ್ಞರೊಂದಿಗೆ ಹತ್ತುಹಲವು ಸಮಸ್ಯೆಗಳನ್ನು ಚರ್ಚಿಸಿ ಉತ್ತರ ಪಡೆದುಕೊಂಡರು. ಭದ್ರಾವತಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಶ್ರೀ.ಎಂ.ಕೆ.ಶಿವಕುಮಾರ್ ನಿರೂಪಿಸಿದರು.
