ಶ್ರೀಯುತ ವಿಶಾಲ್ ರಾಜ್ ಅವರ ನಿರ್ದೇಶನದಲ್ಲಿ ಮತ್ತು ಹೊಸಪೇಟೆಯ ಶ್ರೀಯುತ ಶರ್ಮ ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಚಲನಚಿತ್ರವು ದಿನಾಂಕ 06-02-2026 ರಂದು ಹೊಸಪೇಟೆಯ ಮೀರಲಾಂ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಬಿಡುಗಡೆಯಾಯಿತು. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರಕ್ಕೆ ಅಭಿನಂದನೆಗಳ ಸುರಿಮಳೆಯೇ ಸುರಿಯಿತು.
ಈ ಹಿನ್ನೆಲೆಯಲ್ಲೇ, ದಿನಾಂಕ 07-02-2026 ರಂದು ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಅವರು ಚಿತ್ರ ನಿರ್ದೇಶಕರನ್ನೂ ಮತ್ತು ನಿರ್ಮಾಪಕರನ್ನೂ ಕಾರ್ಖಾನೆಗೆ ಆತ್ಮೀಯವಾಗಿ ಆಹ್ವಾನಿಸಿ ಸನ್ಮಾನಿಸಿದರು. ಬಳಿಕ ಕಿರ್ಲೋಸ್ಕರ್ ಆಡಿಟೋರಿಯಂನಲ್ಲಿ ದಂತಪುರಾಣ ಚಲನಚಿತ್ರದ ವಿಶೇಷ ವೀಕ್ಷಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಅವರು ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಈ ವೀಕ್ಷಣೆ ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಆಫೀಸರ್ಸ್ ಕ್ಲಬ್ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಚಲನಚಿತ್ರವನ್ನು ಆಸಕ್ತಿಯಿಂದ ವೀಕ್ಷಿಸಿದರು. ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ಸೌಹಾರ್ದತೆಯ ವಾತಾವರಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಿರ್ಲೋಸ್ಕರ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಕಮಲಾ ಗುಮಾಸ್ತೆಯವರು ಈ ಸಂದರ್ಭದಲ್ಲಿ ಚಿತ್ರತಂಡವನ್ನು ಸನ್ಮಾನಿಸಿ ಶುಭಾಶಯ ಕೋರಿದರು.
ಈ ಚಲನಚಿತ್ರದಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿ, ಪರಂಪರೆ, ರೂಢಿ-ಪದ್ದತಿ ಮತ್ತು ಆಚರಣೆಗಳ ಜೊತೆಗೆ ಇಂದಿನ ಜೀವನಶೈಲಿಯನ್ನು ಒಟ್ಟುಗೂಡಿಸಿ ಮನಸಿಗೆ ಹತ್ತಿರವಾಗುವ ಕಥಾವಸ್ತುವಿನ ಮೂಲಕ ಚಿತ್ರವನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಅಜ್ಜಿಗೆ ಹಲ್ಲು ಕಟ್ಟಿಸಿ, ಅವಳಿಗೂ ಎಲ್ಲರಂತೆ ಆಹಾರ ಸೇವಿಸಲು ಸಾಧ್ಯವಾಗುವಂತೆ ಮಾಡುವ ದೀರ್ಘ ಕಥಾವಳಿ ನೋಡುಗರ ಗಮನ ಸೆಳೆಯುತ್ತದೆ. ಇಂದಿನ ಮಕ್ಕಳು ಅಜ್ಜಿಯೊಂದಿಗೆ ಸಮಯ ಕಳೆಯದೆ ಇರುವ ಪರಿಸ್ಥಿತಿಯನ್ನು ಮನದಟ್ಟುಗೊಳಿಸುವಂತೆ ಚಿತ್ರ ಮನಸ್ಸನ್ನು ಕರಗಿಸುತ್ತದೆ.
ಒಟ್ಟಾರೆ, ದಂತಪುರಾಣ ಚಲನಚಿತ್ರದ ಈ ವಿಶೇಷ ವೀಕ್ಷಣೆ ಕಾರ್ಯಕ್ರಮವು ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಯಶಸ್ವಿಯಾಗಿ ನೆರವೇರಿತು. ತಾವು ಸಹ ಸಮೀಪದ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ವಿನಂತಿ.
ವರದಿ:
ಮುರುಳೀಧರ್ ನಾಡಿಗೇರ್
