Rotary Club Shimoga ಶಾಲೆ, ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ, ನೈತಿಕ ಮತ್ತು ಮೌಲ್ಯಗಳನ್ನು ಕಲಿಸಬೇಕು ಎಂದು ಮೈಸೂರು ವಿವೇಕವಂಶಿ ಫೌಂಡೇಷನ್ ಸಂಯೋಜಕ, ಯುವ ವಾಗ್ಮಿ ಪ್ರಭಂಜನ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳಬೇಕು. ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತ್ಯಾಗ ಮತ್ತು ಸೇವೆಯು ಜೀವನದಲ್ಲಿ ಸಾರ್ಥಕ ಭಾವ ಮೂಡಿಸುತ್ತದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ವಾಣಿಯಂತೆ ಪ್ರತಿಯೊಬ್ಬ ಮನುಷ್ಯ ಸಮಾಜ ಮತ್ತು ದೇಶದ ಒಳಿತಿಗೆ ಯೋಚಿಸಬೇಕು. ತ್ಯಾಗ, ನೈತಿಕತೆ ಮತ್ತು ಸೇವಾ ಮನೋಭಾವ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಇನ್ನೊಬ್ಬರಿಗೆ ನೆರವು ಒದಗಿಸುವ ಗುಣ ಬೆಳೆಸಬೇಕು ಎಂದು ಹೇಳಿದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಕೂಡ ಜೀವನದಲ್ಲಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆದರ್ಶವಾಗಿರಬೇಕು. ಹಿರಿಯರು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ, ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್, ನಿಯೋಜಿತ ವಲಯ ಸೇನಾನಿ ಮಹೇಶ್ ಎ.ಒ., ಶ್ರೀಕಾಂತ್, ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ ರಾಯ್ಕರ್, ನಿಯೋಜಿತ ಅಧ್ಯಕ್ಷ ಡಿ.ಕೆ.ಶೇಷಗಿರಿ, ರಮೇಶ ಭಟ್, ಸೂರ್ಯನಾರಾಯಣ ಎಚ್.ಎಸ್., ಗಂಗಪ್ಪ.ಬಿ., ವೀಣಾ ಕಿಶೋರ್, ಗಣೇಶ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
