Friday, July 10, 2026
Friday, July 10, 2026

S. N. Channabasappa ಶುಭ್ರತೆಯ ಮತ್ತೊಂದು ಹೆಸರು ಮಡಿವಾಳ – ಸಮಾಜದ ಮಲಿನವನ್ನು ಸ್ವಚ್ಛಗೊಳಿಸಿದವರು ಮಾಚಿದೇವರು : ಎಸ್. ಎನ್. ಚನ್ನಬಸಪ್ಪ

Date:

S. N. Channabasappa ಶುಭ್ರತೆಗೆ ಮತ್ತೊಂದು ಹೆಸರೇ ಮಡಿವಾಳ. ಬಟ್ಟೆಗಳ ಮಲಿನವನ್ನು ಮಾತ್ರವಲ್ಲದೇ ಸಮಾಜದ ಮಲಿನವನ್ನೂ ತೊಳೆಯವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದರು ಎಂದು
ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12 ನೇ ಶತಮಾನದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ತಾರತಮ್ಯವನ್ನು ಹೋಗಲಾಡಿಸಲು ಹೋರಾಟ ನಡೆಸಿದ ಶರಣರಲ್ಲಿ ಮಾಚಿದೇವರು ಕೂಡ ಅಗ್ರಗಣ್ಯರಾಗಿದ್ದು ಶರಣರ ಮಲಿನ‌ ಬಟ್ಟೆಗಳನ್ನು ಶುಚಿಗೊಳಿಸುವ ಜೊತೆಗೆ ಸಮಾಜದ ಮಲಿನವನ್ನೂ ತೊಳೆಯುತ್ತಾ ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು‌ ಸಮರ್ಪಿಸಿಕೊಂಡರು.
ಸಮಾಜದಲ್ಲಿ‌ನ ಅಂಕು- ಡೊಂಕುಗಳನ್ನು ತಿದ್ದುತ್ತಾ ಸಮಾಜಕ್ಕಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟರು . ಇಂತಹ ಶರಣರ,ವಚನಕಾರರ, ಸಾಧಕರ, ನಮ್ಮ ಸಮಾಜದ ಮಹಾನ್ ಚೇತನಗಳ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು. ನಮ್ಮದು ಸನಾತನ ಸಾಂಸ್ಕೃತಿಕ ರಾಷ್ಟ್ರ. ನಮ್ಮ ದೇಶದ ಹುಟ್ಟು ಯಾವಾಗ ಆಯಿತೆಂದು ಗೊತ್ತಿಲ್ಲ. ನಮ್ಮ ದೇಶಕ್ಕೆ ಸಾವೂ ಇಲ್ಲ. ದೇಶದ ಉಳಿವಿಗೆ ನಂಬಿಕೆಗಳು ಕಾರಣವಾಗಿದೆ ಎಂದರು.
ಸಾಗರ ತಾಲೂಕು, ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ನಾಗರಾಜ ಎ.ಎಂ. ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ದೇಶ ಸುಭಿಕ್ಷವಾಗಿರಲು ಜನರನ್ನು‌ ಸರಿಪಡಿಸಬೇಕೆಂದು ಮಾಚೆದೇವರು ತಿಳಿಸಿದ್ದರು. ಕನಿಷ್ಟ ಶಿವ ಜ್ಞಾನ ಇರಬೇಕು. ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ್ದರು ಕಾಯಕಯೋಗಿ ಮಾಚಿದೇವ. 12 ನೇ ಶತಮಾನದಲ್ಲಿ‌ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ದಂಪತಿಗೆ ಜನಿಸಿದ ಮಾಚಿದೇವರು, ಕೇವಲ ಬಟ್ಟೆಗಳ‌ ಮಲಿನ‌ ಮಾತ್ರವಲ್ಲ ಸಮಾಜದ ಕೊಳೆಯನ್ನು ತೆಗೆಯುವ ಕೆಲಸ ಮಾಡುತ್ತಿದ್ದರು. ಇವರ 345 ವಚನಗಳು ಲಭ್ಯವಿದ್ದು ಅತ್ಯಂತ ಸರಳ ಭಾಷೆಯಲ್ಲಿ ರಚಿಸಿರುವ ಇವರ ವಚನಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ.
ಶೂದ್ರರಿಗೆ ಶಿಕ್ಷಣ ದೊರಕಬಾರದೆಂಬ ಕಾಲಘಟ್ಟದಲ್ಲಿ ಅದನ್ನು ಮೀರಿ ಮಾಚಿದೇವರಿಗೆ ಶಿಕ್ಷಣ ನೀಡಿದವರು ಕ್ರಾಂತಿಕಾರಿ ಗುರು ಮಲ್ಲಿಕಾರ್ಜುನ ಸ್ವಾಮಿ. ಮಾಚಿದೇವರ ವ್ಯಾಸಂಗ- ಅಪಾರ ಜ್ಞಾನವನ್ನು ಅವಲೋಕಿಸಿದಾಗ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ. ಕಲ್ಯಾಣದಲ್ಲಿ ಶರಣರ ಬಟ್ಟೆ ಮಡಿ ಮಾಡುವ ಕೆಲಸ ಹಾಗೂ ಕಲ್ಯಾಣ ಕ್ಕೆ ಬರುವ ಜನರನ್ನು ಪರೀಕ್ಷಿಸುವಂತಹ ಹದಡಿ ಹಾಸುವ ಕೆಲಸವನ್ನು ಮಾಡುತ್ತಿದ್ದ ಮಾಚಿದೇವರು ಬಿಜ್ಜಳರಾಯನ ಪಟ್ಟದ ಆನೆಯನ್ನು ರಟ್ಟೆಯಿಂದ ಎಳೆದೊಗೆಯುವ ಉಲ್ಲೇಖವಿದ್ದು, ಇದು ಇವರ ಧೈರ್ಯ, ನೇರ ನುಡಿಗೆ ಹಿಡಿದ ಕನ್ನಡಿಯಾಗಿದೆ.
ಪುಸ್ತಕದ ಜ್ಞಾನಕ್ಕಿಂತ ಅನುಭವದ ಜ್ಞಾನ ಲೇಸು ಎಂದು ಸಾರಿರುವ ಮಾಚಿದೇವರು ಸಮಾಜದ
ಅಂಕು‌ ಡೊಂಕು ತಿದ್ದುವ ಕೆಲಸದ ಮತ್ತು ಕಾಯಕದ ಮೂಲಕ ಭಕ್ತಿ ತೋರುತ್ತಿದ್ದರು.
ಬಸವಣ್ಣ ನವರು ಸಹ ಮಾಚಿದೇವರಿಗೆ ಅರಿವಿನ ತಿರುಳು ಎಂದು ಬಣ್ಣಿಸಿದ್ದು ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು, ಕವಿಗಳು ಮಾಚಿದೇವರ ಬಗ್ಗೆ, ಅವರ ಕಾಯಕ ನಿಷ್ಟೆ ಕುರಿತು ವಚನ ಬರೆದಿದ್ದಾರೆ. ಬಸವಣ್ಣನವರು ಕಲ್ಯಾಣದಲ್ಲಿ ಶರಣ ಸಾಹಿತ್ಯ ರಕ್ಷಣೆ ಮಾಡಬೇಕೆಂಬ ಜವಾಬ್ದಾರಿ ಯನ್ನು ಮಾಚಿದೇವರಿಗೆ ನೀಡುತ್ತಾರೆ.
ಶರಣರು ಕಲ್ಯಾಣದಿಂದ ಉಳುವಿಗೆ ಹೋದಾಗ ಅವರು ಶರಣರು ಬರೆದ ವಚನಗಳ ಹಸ್ತಪ್ರತಿಗಳನ್ನು ರಕ್ಷಿಸಲು ರಾಜ ಬಿಜ್ಜಳನ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದರು. ಉಳುವಿಗೆ ತೆರಳುವ ಮಾರ್ಗ ಮಧ್ಯೆ ಬೆಳಗಾವಿ ಜಿಲ್ಲೆಯ ಮುರಗೋಡು ಸಮೀಪದ ಕರಿಮನೆ ಎಂಬಲ್ಲಿ ಮೃತಪಡುತ್ತಾರೆ ಎಂದು ತಿಳಿಸಿದರು.
S. N. Channabasappa ಮಡಿವಾಳರು ಎಂದು ಎದೆ ತಟ್ಟಿ ಹೇಳಿಕೊಳ್ಳಬೇಕಿರುವ ನಮ್ಮ ಸಮಾಜ ಸಂಖ್ಯಾ ಬಲ ಇಲ್ಲದಿರುವ ಕಾರಣ ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಅಸ್ತಿತ್ವ ಇಲ್ಲದಂತಾಗಿದ್ದೇವೆ. ಸರ್ಕಾರ ನಮ್ಮ ಸಮಾಜಕ್ಕೆ ಒಂದು ಅಸ್ತಿತ್ವ, ಗುರುತು ನೀಡಬೇಕು. ಮಾಚಿದೇವರ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಶಾಲೆಗಳಲ್ಲಿ ಜಯಂತಿ ಆಚರಿಸುವಂತಾಗಬೇಕು ಎಂದು ಸರ್ಕಾರಕ್ಕೆ ಮನವಿ‌ ಮಾಡಿದ ಅವರು‌ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಆಸ್ತಿಯಾಗಿಸೋಣ. ಎಲ್ಲ ರಂಗಗಳಲ್ಲಿ‌ ಬೆಳೆಯುವಂತೆ ಮಾಡೋಣ ಎಂದು ಕರೆ ನೀಡಿದರು.
ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ, ಕ್ರಾಂತಿಕಾರಿ ಹೋರಾಟಗಾರರ, ವಚನಕಾರರ, ಮಹಾನ್ ಪುರುಷರ ಚರಿತ್ರೆಯನ್ನು ಶಿಕ್ಷಣದಲ್ಲಿ ಅಳವಡಿಸಬೇಕು. ಆಗ ಪರಿಣಾಮಕಾರಿಯಾಗಿ ಅವರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು. ದೇವ ಸಂಭೂತರಾದ ಮಾಚಿದೇವರು ಸಮಾಜ ಸುಧಾರಣೆಗಾಗಿ‌ಯೇ ಭೂಮಿ‌ ಮೇಲೆ ಜನ್ಮವೆತ್ತಿ, ೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಇಂತಹ ಮಹಾನ್ ಪುರುಷರ ಚರಿತ್ರೆ ಅರಿತು ಅವರ ತತ್ವಗಳನ್ನು ಪಾಲಿಸಬೇಕು ಎಂದ ಅವರು ಪ್ರಸ್ತುತ ರಾಜ್ಯ ಸರ್ಕಾರ ಸಮಾಜ‌ ಸುಧಾರಣೆಗಾಗಿಯೇ 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದರು.
ಜವಳಿ‌ ಮೂಲ ಸೌಲಭ್ಯ ಅಭಿವೃದ್ಧಿ (ವಿದ್ಯುತ್ ಮಗ್ಗಗಳು) ನಿಗಮದ ಅಧ್ಯಕ್ಷರಾದ ಚೇತನ್ ಕೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಶಿಲ್ದಾರ್ ರಾಜೀವ್,
ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಹೆಚ್ ಎಸ್ ಸದಾಶಿವಪ್ಪ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ಸಮಾಜದ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...