ಭಾಗ -1
Klive Special Article ಕರ್ನಾಟಕದಲ್ಲಿ ಆಳಿದ ಅಜ್ಞಾತ ಅರಸೊತ್ತಿಗೆಯಲ್ಲಿ ಹೊನ್ನಾಳಿ ತಾಲೂಕಿನ ಬೆಳಗುತ್ತಿಯೂ ಒಂದು ಗ್ರಾಮವಾಗಿದ್ದು ಶತಮಾನಗಳ ಹಿಂದೆ ಸುಪ್ರಸಿದ್ಧ ರಾಜಧಾನಿಯಾಗಿತ್ತು, ಈ ಬೆಳಗುತ್ತಿಯನ್ನು ಎರಡು ಅರಸುಮನೆತನಗಳು ಆಳ್ವಿಕೆ ನಡೆಸಿವೆ. ಇವರ ಕಾಲದಲ್ಲಿ ಕಟ್ಟಿಸಿದ ದೇವಾಲಯಗಳು, ಕೋಟೆಗಳ, ಅರಮನೆಗಳ ಅವಶೇಷಗಳು ಅನಾಥವಾಗಿವೆ.
ಪ್ರಾಚೀನ ಇತಿಹಾಸ ಕಾಲದಲ್ಲಿ ಬೆಳಗುತ್ತಿ, ತೀರ್ಥ ರಾಮೇಶ್ವರ, ಕಲುಬಿಗಿರಿ ಲಕ್ಷ್ಮೀರಂಗನಾಥ ದೇವಾಲಯಗಳು ಪ್ರಾಚೀನ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಬೆಳಗುತ್ತಿಗೆ ಶಾಸನಗಳಲ್ಲಿ ಆವಂತಿ, ಬೆಳಗವರ್ತಿ, ಬೆಳಗವತ್ತಿ, ಬೆಳಗುತ್ತಿ ಎಂದು ಉಲ್ಲೇಖವಾಗಿದೆ. ಬೆಳಗುತ್ತಿ ಯಲ್ಲಿ ಮೊದಲು ಆಳಿದ ಅರಸರು ಸಿಂಧರು. ಸಿಂಧರು ಉತ್ತರ ಭಾರತದ ರಾಜವಂಶದವರೆಂದು ತಿಳಿದುಬರುತ್ತದೆ. ಇವರು ಮೊದಲು ಮಹಾರಾಷ್ಟ್ರದ ಇರಂಬರಗೆಯಲ್ಲಿ ಆಳುತ್ತಿದ್ದ .ಕ್ರಿ.ಶ. 400 ರಲ್ಲಿ ದೊರೆಯಾಗಿದ್ದ ನಿಡದೋಳ ಸಿಂಧ್ ವಂಶದ ಮೂಲಪುರುಷನೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಸಿಂಧ್ ವಂಶವು ಹಲವು ಶಾಖೆಗಳಾಗಿ ಇವರ ವಂಶೀಕರು ಯಲಬುರ್ಗ, ಕುರುಗೋಡು, ಮತ್ತು ಬೆಳಗುತ್ತಿ ಯಲ್ಲಿ ಆಡಳಿತ ನಡೆಸಿದರು. ಕ್ರಿ.ಶ.1312ರಲ್ಲಿ ಬೆಳಗುತ್ತಿ ಯಲ್ಲಿ ಆಳುತ್ತಿದ್ದ ಕಾಮಯ್ಯನೇ ಸಿಂಧ್ ವಂಶದ ಕೊನೆಯ ದೊರೆ. ಇವನು ದೇವಗಿರಿಯ ಸಾಮಂತನಾಗಿದ್ದನು. ಬೆಳಗುತ್ತಿ ಇತಿಹಾಸದ ಕಥೆಯನ್ನು ಸುಮಾರು 30ಶಾಸನಗಳು ಕಲ್ಲಿನ ರೂಪದಲ್ಲಿ ನಿಂತು ಸಾರುತ್ತಿವೆ. ಸಿಂಧ್ ನಂತರ ವಿಜಯನಗರದ ಆಡಳಿತವು ಆರಂಭವಾಯಿತು.

Klive Special Article ವಿಜಯನಗರದ ಅರಸ ಬುಕ್ಕರಾಯನ ಆಳ್ವಿಕೆ ಕಾಲದಲ್ಲಿ ಮಲೆನಾಡಿನಲ್ಲಿ ಬೇಡರ ಕನ್ಯಾನಾಯಕ ಎಂಬುವನು ಬೆದರಕೋಟೆ ಮತ್ತು ಚಂದ್ರಗುತ್ತಿಯಲ್ಲಿ ಕೋಟೆಯನ್ನು ಕಟ್ಟಿಸಿ 80ಸಾವಿರ ಯೋಧರ ಪಡೆಯನ್ನು ಕಟ್ಟಿ ಬೆಳಗುತ್ತಿ ಸೇರಿದಂತೆ ಹಲವು ಪ್ರದೇಶವನ್ನು ವಶಪಡಿಸಿಕೊಂಡಿದ್ದ. ಆಗ ಬೆಳಗುತ್ತಿಯಲ್ಲಿ ವೆಂಕಟಾದ್ರಿ ಎಂಬುವವನು ಆಳ್ವಿಕೆ ನಡೆಸುತ್ತಿದ್ದ.
ಬುಕ್ಕರಾಯನ ಮೊಮ್ಮಗನೂ, ದೇವರಾಯನ ಮಗನೆಂದೂ ಕರೆಯಲ್ಪಡುವ ಚಲುವರಂಗಪ್ಪನು ಆನೆಗೊಂದಿಯ ನರಪತಿಯ ಬಿರುದುಗಳೊಂದಿಗೆ ಕ್ರಿ.ಶ.1358 ರಲ್ಲಿ ಹೊನ್ನಾಳಿ ತಾಲ್ಲೂಕಿನ ದಿಡಗೂರಿಗೆ ಬಂದು ಆಳ್ವಿಕೆ ನಡೆಸಿದ. ಆದರೆ ಬುಕ್ಕರಾಯನ ಸೇನಾಪತಿ ವೀರಭದ್ರ ನಾಯಕನು ಬೆಳಗುತ್ತಿಯ ಕನ್ಯಾನಾಯಕನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಕ್ರಿ.ಶ. 1361 ರಲ್ಲಿ ಚೆಲುವರಂಗಪ್ಪನು ಕನ್ಯಾನಾಯಕನನ್ನು ಸೋಲಿಸಿ ಸೆರೆಹಿಡಿದು ಇವನಿಂದ ಬೆವುಲೆ ಎಂಬ ಬಿರುದನ್ನು ಹಳದಿ ಧ್ವಜವನ್ನು ಪಡೆದನೆಂದು ತಿಳಿಯುತ್ತದೆ. ಆದರೆ ಇದೇ ಪ್ರಾಂತದ ಅಭ್ರಮಾಧವನ ಮಗನಾದ ವೆಂಕಟಾದ್ರಿ ಯು ಕನ್ಯಾನಾಯಕನನ್ನು ಸೋಲಿಸಿ ಬೆವುಲೆ ಎಂಬ ಬಿರುದನ್ನು ಪಢದನೆಂದು ಕುದುರೆ ರಾಯರ ವೃತ್ತಾಂತದಲ್ಲಿ ಉಲ್ಲೇಖವಾಗಿದೆ.

ಮುಂದುವರೆಯುತ್ತದೆ.
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ(ನೋಂ), ಶಿವಮೊಗ್ಗ.
