Malenadu Development Foundation ಸಾಧಿಸುವ ಛಲ, ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞ, ನಿವೃತ್ತ ಪ್ರಾಧ್ಯಾಪಕ ಡಾ.ಗುರುರಾಜ ಕರ್ಜಗಿ ಸಲಹೆ ನೀಡಿದರು.
ಸಾಗರ, ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜೀವನೋತ್ಸಾಹ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಕಾಳಜಿ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಸಾಧಿಸುವ ಮಾರ್ಗದಲ್ಲಿ ಆತ್ಮವಿಶ್ವಾಸ, ಧೈರ್ಯ ಸದಾ ಜೊತೆಗಿರಬೇಕು. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದ ತಕ್ಷಣ ಅಥವಾ ಫೇಲ್ ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಜೀವನ ಅಲ್ಲ. ಯಾವುದೇ ಹಂತದಲ್ಲೂ ಸೋಲನ್ನು ಒಪ್ಪಿಕೊಳ್ಳಬಾರದು. ಇದು ನನ್ನಿಂದ ಸಾಧ್ಯವಿದೆ ಎಂಬ ಮನೋಬಲ ಅಂತರಂಗದಿಂದ ಬರಬೇಕು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ. ಥಾಮಸ್ ಎಡಿಸನ್ ಸಾವಿರಾರು ಪ್ರಯೋಗದ ನಂತರ ಯಶಸ್ಸು ಕಂಡುಕೊಂಡ. ಮೇರಿಕ್ಯೂರಿ, ಬಾಕ್ಸಿಂಗ್ ಛಾಂಪಿಯನ್ ಮಹಮ್ಮದ ಅಲಿ ಮುಂತಾದವರೆಲ್ಲರೂ ಕಠಿಣ ಪರಿಶ್ರಮದಿಂದಲೇ ಸಾಧನೆ ಮಾಡಿದ್ದಾರೆ. ಆರಂಭದಲ್ಲಿ ಕಷ್ಟ ಎನಿಸಿದರೂ ಮುಂದೆ ಸಂತೋಷ ನಿಮ್ಮ ಪಾಲಿಗೆ ಸಿಗುತ್ತದೆ ಎಂದು ಕೆಲವು ಉದಾಹರಣೆ ಸಹಿತ ಅವರು ವಿವರಿಸಿದರು.
Malenadu Development Foundation ತಮಗೋಸ್ಕರ ಬದುಕಿದವರನ್ನು ಪ್ರಪಂಚ ಮರೆಯುತ್ತದೆ. ಆದರೆ ಬೇರೆಯವರಿಗಾಗಿ ಬದುಕುವವನನ್ನು ಸದಾ ಸ್ಮರಿಸುತ್ತಾರೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದವರನ್ನು ಜನರು ಯಾವತ್ತೂ ನೆನಪಿಸುತ್ತಾರೆ. ಬೇರೆಯವರ ಕಣ್ಣೀರನ್ನು ಒರೆಸುವ ಮನಸ್ಥಿತಿ ಇಲ್ಲವಾದರೆ ಶಿಕ್ಷಣಕ್ಕೆ ಅರ್ಥವಿಲ್ಲ ಎಂದ ಅವರು, ಸಮಾಜದಲ್ಲಿ ಭ್ರಷ್ಟರಾಗದೆ ಪ್ರಾಮಾಣಿಕವಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕರಿಗೆ ತಾವು ಕಲಿಸುವ ವಿಷಯದ ಬಗ್ಗೆ ಪ್ರೀತಿ ಇರಬೇಕು. ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಕರು ಎಷ್ಟು ತಿಳಿದುಕೊಂಡರೂ ಸಾಲದು. ತರಗತಿಗೆ ಹೋಗುವಾಗ ಕಲಿಸುವ ವಿಷಯದ ಬಗ್ಗೆ ಹೆಚ್ಚು ಓದಿಕೊಂಡಿರಬೇಕು. ವೃತ್ತಿ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಯ ಅಭಿರುಚಿ ಏನು ಎಂಬುದನ್ನು ಗುರುತಿಸಬೇಕು ಎಂದವರು ಶಿಕ್ಷಕ ಸಮೂಹಕ್ಕೆ ಸಲಹೆ ನೀಡಿದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಗುರುರಾಜ ಕರ್ಜಗಿಯವರು ತಮ್ಮ ಬರಹ ಮತ್ತು ಉಪನ್ಯಾಸಗಳಿಂದ ಸಮಾಜಕ್ಕೆ ಜೀವನ ಪಾಠ ಮತ್ತು ಸಂಸ್ಕೃತಿಯನ್ನು ರಾಜ್ಯದಾದ್ಯಂತ ಬಿತ್ತುತ್ತಿದ್ದಾರೆ. ಅವರ ಚಿಂತನೆಗಳು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿವೆ. ವಿಷಯಗಳನ್ನು ಅವರು ಸರಳವಾಗಿ, ಶುದ್ಧವಾಗಿ ಮನದಟ್ಟು ಮಾಡುತ್ತಾರೆ. ಬದುಕು ಹೇಗಿರಬೇಕು ಎಂಬುದನ್ನು ಸರಳವಾಗಿ ಹೇಳುತ್ತ ಸುಸಂಸ್ಕೃತ ಬದುಕಿಗೆ ಬೇಕಾಗುವ ಶಕ್ತಿಯನ್ನು ತುಂಬುತ್ತಿದ್ದಾರೆ. ಅವರು ಹೇಳಿರುವುದನ್ನು ಹೃದಯದಲ್ಲಿಟ್ಟುಕೊಂಡು ಹಾಗೇ ಬದುಕಲು ಪ್ರಯತ್ನಿಸೋಣ ಎಂದರು.
ಇದೇ ಸಂದರ್ಭದಲ್ಲಿ ಡಾ.ಗುರುರಾಜ ಕರ್ಜಗಿ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಎಸ್.ಲಕ್ಮೇಶ್, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್, ಕೆ.ವೆಂಕಟೇಶ್ ಕವಲಕೋಡು, ಸತ್ಯನಾರಾಯಣ, ರವೀಂದ್ರ ಪುಸ್ತಕಾಲಯದ ವೈ.ಎ.ದಂತಿ, ಶ್ರೀ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜಗದೀಶ ಒಡೆಯರ್, ಡಾ.ಬಿ.ಸಿ.ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಎಚ್.ಎಂ.ಶಿವಕುಮಾರ್ ಸ್ವಾಗತಿಸಿದರು. ಕೆ.ವೆಂಕಟೇಶ್ ವಂದಿಸಿದರು.
Malenadu Development Foundation ಸಾಧಿಸುವ ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು- ಡಾ.ಗುರುರಾಜ ಕರ್ಜಗಿ
Date:
