ಕವಿ.ಎ.ಎನ್.ರಮೇಶ್ ಗುಬ್ಬಿ.
ಮತದಾನ..
ನಿಮ್ಮಯ ಜವಾಬ್ದಾರಿ.!
ಮತದಾನ..
ಪ್ರಜಾಪ್ರಭುತ್ವದ
ಯಶಸ್ಸಿಗೆ ರಹದಾರಿ.!
ಮರೆಯದೇ……
ಮತದಾನ ಮಾಡಿ..!
ಮತದಾನ ಮಾಡೋಣ..!
ಭೂದಾನ, ಗೋದಾನ
ಅನ್ನದಾನ, ಕನ್ಯಾದಾನ
ಸಕಲ ದಾನಕ್ಕಿಂತಲೂ..
ಶ್ರೇಷ್ಟವೀ ಮತದಾನ.!
ಹಾಕುವ ಮುನ್ನ ನಮ್ಮ
ಅಮೂಲ್ಯ ಪವಿತ್ರಮತ
ಇರಬೇಕು ಚಿತ್ತ ಸ್ಥಿಮಿತ
ದೌರ್ಬಲ್ಯಗಳಿಂದ ಮುಕ್ತ.!
ಯಾವ ದಾನವಾದರೂ
ಸಲ್ಲಬಾರದು ಅಪಾತ್ರರಿಗೆ.!
ಮಹಾದಾನ ಮತದಾನ
ಸಲ್ಲಲಿ ಅರ್ಹ ಯೋಗ್ಯರಿಗೆ.!
ಜಾತಿ-ಧರ್ಮ ಮೋಹಗಳ
ಆಸೆ ಆಮಿಷ ವ್ಯಾಮೋಹಗಳ
ತೊರೆದು ಹಾಕೋಣ ಮತ.!
ಕಟ್ಟೋಣ ಸದೃಢ ಭಾರತ.!
ಒಣಮಾತು, ಚರ್ಚೆಗಳಿಂದ
ಬದಲಾಗದು ದೇಶದ ಸ್ಥಿತಿ.!
ಮತದಾನದಿಂದಷ್ಟೇ ಸಾಧ್ಯ
ಭವ್ಯಭಾರತದ ಪ್ರಗತಿ ಉನ್ನತಿ.!
ಪ್ರಜಾಪಭುತ್ವದ ಸುದಿನವಿಂದು
ಪ್ರಜೆ ಪ್ರಭುವ ಆರಿಸಬೇಕಿಂದು.!
ಏಳಿ ಎದ್ದೇಳಿ ಬಿಟ್ಟು ಜಡತೆ
ಉಳಿಸೋಣ ರಾಷ್ಟ್ರದ ಘನತೆ.!
Klive Special
ಕಂದನ ಕೋರಿಕೆ..
ಪ್ಲೀಸ್ ಕೇಳಿರೆನ್ನ ಮನವಿ..
ನಾನು ಬರಿಯ ಮಗುವಲ್ಲ
ಭವಿಷ್ಯದ ಮುಗ್ಧ ಮನಸು.!
ರಾಷ್ಟ್ರದ ನಾಳಿನ ಕನಸು.!
ಉಪೇಕ್ಷೆ ಉದಾಸೀನ ಬಿಡಿ
ಮರೆಯದೇ ಮತದಾನ ಮಾಡಿ.!
ಜಾತಿಭೇದಗಳ ಮರೆತುಬಿಡಿ.!
ಸ್ವಾರ್ಥ ಹಿತಾಸಕ್ತಿ ದೂರವಿಡಿ.!
ಸುಳ್ಳು-ಪೊಳ್ಳು ಆಶ್ವಾಸನೆಗಳಿಗೆ
ಹಣ, ಆಸೆ, ಆಮಿಷಗಳಿಗೆ
ಪ್ಲೀಸ್ ಮತ ಮಾರಿಕೊಳ್ಳಬೇಡಿ.!
ದೇಶವನು ಹರಾಜಿಗಿಡಬೇಡಿ.!
ದಕ್ಷರನು ಯೋಗ್ಯರನು ಆರಿಸಿ
ಪ್ರಜಾಪ್ರಭುತ್ವದ ಮಾನ ಉಳಿಸಿ
ಅಡವಿಡಬೇಡಿ ಆತ್ಮಾಭಿಮಾನ
ಚಿರವಾಗಿರಲಿ ದೇಶಾಭಿಮಾನ.!
ನಿಮ್ಮದೇ ಮುಂದಿನ ಪೀಳಿಗೆಗೆ
ನಾಳಿನ ನಮ್ಮ ಬದುಕುಗಳಿಗೆ
ಸುಸದೃಢ ರಾಷ್ಟ್ರ ಕಟ್ಟಿಕೊಡಿ.!
ಸುಂದರ ಭವಿಷ್ಯ ಕಲ್ಪಿಸಿಕೊಡಿ.!!
ನಮ್ರ ವಿಜ್ಞಾಪನ.!
ಯೋಗ್ಯ ನಿಷ್ಠ ವ್ಯಕ್ತಿಗೆ
ಸೇವಾ ನಿರತ ಶಕ್ತಿಗೆ
ನೀತಿತತ್ವ ಸಂತತಿಗೆ
ಹಾಕಬೇಕಿದೆ ಮತ
ಇದು ಸರ್ವ ಸಮಸ್ತ
ಪ್ರಾಜ್ಞರ ಅಭಿಮತ.!
ಉಚಿತ ಆಮಿಶಗಳಿಗೆ
ಕ್ಷಣಿಕ ಕೊಡುಗೆಗಳಿಗೆ
ಮಾರಿಕೊಂಡರೆ ಮತ
ನಾಡಿಗಪಾಯ ಖಚಿತ
ಪರಿತಪಿಸುವೆವು ನಿಶ್ಚಿತ
ಪಶ್ಚಾತಾಪ ಖಂಡಿತ.!
ಧಿಕ್ಕರಿಸೋಣ ಧನಕನಕ
ಉಡುಗೊರೆ ಪ್ರಭಾವ
ಕುಕ್ಕರು ಲಿಕ್ಕರುಗಳ
ಗಾರುಡಿಯ ಸಂಭವ
ಪ್ರಾಮಾಣಿಕರಾದರೇ
ಉಳಿದೀತು ಪ್ರಜಾಪ್ರಭುತ್ವ.!
ಮತದಾನ ನಮ್ಮಯ
ಮೂಲಭೂತ ಹಕ್ಕು
ಚಲಾಯಿಸಿದರೇ
ಬಗೆಹರಿದೀತು ನಮ್ಮೆಲ್ಲ
ಸಂಕಷ್ಟಗಳ ಬಿಕ್ಕು
ಬದಲಾದೀತು ಬದುಕು
ಭವಿತವ್ಯದ ದಿಕ್ಕು.!
ಭವ್ಯ ಪ್ರಜಾತಂತ್ರದ
ಸಂಭ್ರಮದ ಹಬ್ಬವಿದು
ಪ್ರಜೆಯೆಂಬ ಪ್ರಭುವಿನ
ಬಾಧ್ಯತೆಯ ದಿನವಿದು
ಮಾಡೋಣ ಮತದಾನ
ಮೆರೆಯೋಣ ದೇಶಾಭಿಮಾನ.!

ಎ.ಎನ್.ರಮೇಶ್.ಗುಬ್ಬಿ
