ಜನಪದ ಕಲೆ ಅನಾದಿಕಾಲದಿಂದಲೂ ಬೆಳೆದುಬಂದಿದೆ. ಅದು ಎಲ್ಲಾ ಕಲೆಗಳ ತಾಯಿಬೇರು. ಆ ಕಲೆಗಳನ್ನು ಉಳಿಸಿ ಬೆಳಸಲು ಸರ್ಕಾರ, ಮಠಗಳು, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಬೇಕು. ಲೇಖಕರು, ಕಲಾವಿದರು, ಸಂಘಟಕರು ಬಹಳ ಮುಖ್ಯ ಪಾತ್ರವಹಿಸಬೇಕು. ಕಲಾವಿದರನ್ನು ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಮನಸ್ಥಿತಿ ಎಲ್ಲರಿಗೂ ಬರಬೇಕು.
ಜನಪದದ ಕಲೆಗಳಿಗೆ ಭಾಷೆಯ ಹಂಗಿಲ್ಲದೆ ಎಲ್ಲರ ಮನವನ್ನು ತಲುಪುವ ಶಕ್ತಿಯಿದೆ. ಅನೇಕ ಅಪರೂಪದ ಕಲೆಗಳು ನಶಿಸಿ ಹೋಗಿವೆ. ಉಳಿದಿರುವ ಕಲೆಗಳನ್ನಾದರೂ ಉಳಿಸುವಲ್ಲಿ ಇಂತಹ ಶಿಬಿರಗಳ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ಅಂತರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಟಾಕಪ್ಪ ಕಣ್ಣೂರು ಹಿತನುಡಿದರು.
ಡಿಸೆಂಬರ್ 17 ರಂದು ಬೆಳಿಗ್ಗೆ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ದ ಸಹಯೋಗದಲ್ಲಿ ಎರಡು ದಿನಗಳ ಜನಪದ ಕಲೆಗಳ ಕಲಿಕಾ ಶಿಬಿರವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಟಾಕಪ್ಪ ಕಣ್ಣೂರು ಮಾತನಾಡಿದರು.
ಡಾ. ಮೇಟಿ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕ ಮಾತುಗಳನ್ನು ಹೇಳುತ್ತಾ ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ಬೆಳೆಯಲು ಜನಪದ ಕಲೆಗಳ ಕಲಿಕೆಗೆ ಆಸಕ್ತಿ ಮೂಡಿಸಲು ನೆರವಾಗಿದೆ. ಈ ಕಲೆ ಹಳ್ಳಿಯದು, ಬುಡಕಟ್ಟು ಜನರದ್ದು, ಕೆಲವರಿಗೆ ಸೇರಿದ್ದು ಎನ್ನುವ ಕೀಳರಿಮೆ ಸರಿಯಲ್ಲ. ಅದು ಹಳೆಯದಲ್ಲ. ಅದು ಎಲ್ಲರಿಗೂ ಬೇಕು ಎನ್ನುವಂತಾಗಿದೆ. ಜನಪದರ ಸಾಮಾನ್ಯ ಜ್ಞಾನ, ಲೋಕದೃಷ್ಠಿ, ಕಥನಕ ಕಟ್ಟಿ ಬೆಳಸಿದ ರೀತಿಯಿಂದಲೇ ಅದು ಸಮುದಾಯದ ಬದುಕನ್ನು ಆವರಿಸಿದೆ. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಜನಪದ ನಮ್ಮ ಬದುಕಿನಲ್ಲಿ ಆವರಿಸಿದೆ. ಜಾತಿ, ಧರ್ಮ, ಲಿಂಗ ಅಸಮಾನತೆಯಿಂದ ಹೊರಬರಲು ಅವುಗಳ ಮಹತ್ವ ಅರಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿಯ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅವರು “ಜನಪದ ಕಲೆ ಕಲಿತವರಿಗೆ ಆ ಕಲೆಯನ್ನು ಅಭಿವ್ಯಕ್ತಪಡಿಸಲು ಪ್ರತಿವರ್ಷ ಅನೇಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ. ಕಲೆಯನ್ನು ಕರಗತಮಾಡಿಕೊಂಡು ಸಾಧನೆಮಾಡಿದರೆ ಅನೇಕ ಅವಕಾಶಗಳು ದೊರೆಯುತ್ತವೆ” ಎಂದು ಹೇಳಿದರು. ನಾಡೋಜ ಡಾ. ಎಚ್. ಎಲ್. ನಾಗೇಗೌಡರ ದೂರದೃಷ್ಟಿಯಿಂದ ಆರಂಭವಾದ ಕರ್ನಾಟಕ ಜಾನಪದ ಪರಿಷತ್ತು ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜು ಪ್ರಿನ್ಸಿಪಾಲ್ ಡಾ. ಧನಂಜಯ ಕೆ. ಬಿ. ಅವರು ಮಾತನಾಡಿ “ನಾಗರಿಕ ಸಮಾಜ ಇರುವಲ್ಲಿ ಅನೇಕ ಸಾಂಸ್ಕೃತಿಕ ಕಲೆಗಳು ಉಳಿದಿವೆ ಎಂದರೆ ಅವೆಲ್ಲವೂ ಜನಪದದ ಹಿನ್ನೆಲೆಯಲ್ಲಿ ಬಂದಿರುವುದನ್ನ ನಾವು ಗಮನಿಸಬೇಕು. ಜನರಿಂದ, ಜನರಿಗಾಗಿ ಜನಪದ ಉತ್ತಮ ಮೌಲ್ಯ ತಂದುಕೊಟ್ಟಿದೆ” ಎಂದರು.
ಈ ಕಾರ್ಯಕ್ರಮ ಸಂಚಾಲಕರಾದ ಡಾ. ಮೋಹನ್ ಚಂದ್ರಗುತ್ತಿ, ಕಜಾಪ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.