ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ. ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿರುವ ವಿರೋಧ ಪಕ್ಷದ ನಾಯಕರು.
ಇಂದಿನಿಂದ ಆರಂಭವಾಗಿರುವ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಕಳೆದೆರಡು ವರ್ಷದಿಂದ ಕೋವಿಡ್ ಲಾಕ್ಡೌನ್ ನಿಂದಾಗಿ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿರಲಿಲ್ಲ. ಈ ಬಾರಿ ಕೋವಿಡ್-19, ಡೆಲ್ಟಾ ಮತ್ತು ಓಮಿಕ್ರಾನ್ ವೈರಸ್ ಹೆಚ್ಚಳದ ನಡುವೆಯೂ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಧಿವೇಶನ ನಡೆಸಲು ನಿರ್ಧರಿಸಿದೆ.
ಈ ಬಾರಿ ಅಧಿವೇಶನದಲ್ಲಿ ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಬಿಟ್ ಕಾಯಿನ್ ಪ್ರಕರಣ, 40 ಪರ್ಸೆಂಟೇಜ್ ಆರೋಪ, ಮಳೆ ಹಾನಿ, ಕೋವಿಡ್ ಪರಿಹಾರ ಕೊರತೆ, ನೀರಾವರಿ ಯೋಜನೆಗಳು ಮತ್ತು ರಸ್ತೆ ಮೂಲಸೌಕರ್ಯ ಸಮಸ್ಯೆಗಳ ಕುರಿತು ಪಂಚಾಸ್ತ್ರ ಪ್ರಯೋಗಿಸಲು ಸಿದ್ಧವಾಗಿವೆ.
“ಜನಪರ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದರಲ್ಲಿ ಯಾವುದೇ ಮುಲಾಜಿನ ಪ್ರಶ್ನೆ ಇಲ್ಲ ” ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.
ಈ ಬಾರಿಯ ಅಧಿವೇಶನದಲ್ಲಿ “ಅಭಿವೃದ್ಧಿ ಪರವಾಗಿ ಅರ್ಥಪೂರ್ಣವಾಗಿ ಚರ್ಚೆಯಾಗಬೇಕೆಂದು ಸರ್ಕಾರದ ಆಶಯವಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.