Sri Sivananda Theertha ಆಧುನಿಕ ಜಗತ್ತಿನ ತಂತ್ರಜ್ಞಾನಗಳ ಸುಖಭೋಗದ ಬೆಂಬತ್ತಿರುವ ಮಾನವರಿಗೆ ಒತ್ತಡ ವ್ಯಾಕುಲತೆ ಖಿನ್ನತೆಗಳು ಸಹ ಕಾಯಿಲೆಗಳಂತೆ ಕಾಡುತ್ತಿವೆ, ಇದಕ್ಕೆ ಪರಿಹಾರ ಸಾಂಘಿಕವಾದ ಸಾತ್ವಿಕ ಚಟುವಟಿಕೆಗಳಿಂದ ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಶಿವಾನಂದ ತೀರ್ಥ ಗುರುಗಳ 75 ನೇ ಪುಣ್ಯಾರಾಧನಾ ಮಹೋತ್ಸವದ ನಿಮಿತ್ತವಾಗಿ ಏರ್ಪಡಿಸಲಾಗಿದ್ದ ಸಾಮೂಹಿಕ ಭಜನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
‘ಭಜ’ ಎನ್ನುವ ಪದವು ಹಂಚಿಕೊಳ್ಳುವುದು ಎಂಬ ಅರ್ಥವನ್ನೂ ಹೊಂದಿದ್ದು ಪರಮಾತ್ಮನ ಆನಂದವನ್ನು ಹಂಚಿಕೊಳ್ಳುವುದಕ್ಕೂ ಭಜನೆ ಎನ್ನಲಾಗುತ್ತದೆ, ಇಂತಹ ಭಜನೆಗಳು ಮನಸ್ಸಿನ ಒತ್ತಡ ಖಿನ್ನತೆ ವ್ಯಾಕುಲತೆಗಳನ್ನು ನಿವಾರಿಸಿ ಆನಂದವನ್ನು ನೀಡುತ್ತವೆ, ಭಜನೆಗಳಲ್ಲಿ ಬಳಸುವ ನಾಮ ಸಂಕೀರ್ತನೆಗಳಾಗಲಿ ಶ್ಲೋಕ ಪದ್ಯಗಳಾಗಲಿ ಭಗವಂತನ ಆನಂದವನ್ನು ನೀಡುವಂತಿರಬೇಕು ಎಂದರು.
ಕರ್ಕಶವಾದ ವಾದ್ಯಗಳ ಕುಟ್ಟುವಿಕೆ ತಟ್ಟುವಿಕೆಯ ಆರ್ಭಟವಾಗಲಿ ತಾರಕವಾದ ಕಿರುಚಾಟ ವಿಧಾನವಾಗಲಿ ಭಜನೆಗಳಿಗೆ ಯೋಗ್ಯವಲ್ಲ, ಮೃದು ಮಧುರವಾದ ಕರುಣಾನಂದಕರವಾಗಿ ಭಜನೆ ಕೇಳಿ ಬರುವಂತಿರಬೇಕು. ಇದು ಹಾಡುವವರ ಕೇಳುವವರ ಮನಸ್ಸುಗಳನ್ನು ಭಗವದಾನಂದದ ಕಡೆಗೆ ಏಕಾಗ್ರವಾಗಿ ಕೊಂಡೊಯ್ಯುವಂತಿರಬೇಕು, ಇದನ್ನೇ ಶಿವಾನಂದ ಎನ್ನುತ್ತಾರೆ ಶಿವ ಎಂದರೆ ಮಂಗಳ ಸತ್ಯ ಹಾಗೂ ಸುಂದರ, ವಿಷ್ಣುವೂ ಮಂಗಳ ಸತ್ಯ ಸುಂದರ, ಬ್ರಹ್ಮವೂ ಮಂಗಳ ಸತ್ಯ ಸುಂದರ, ಇದನ್ನು ಅರಿತು ಪರಮಾತ್ಮ ಭಾವದಲ್ಲಿ ನಾವು ಬೆರೆಯುವುದೇ ಅದ್ವೈತ ಅದೇ ಜೀವನ್ ಮುಕ್ತಿ ಎಂದರು.
Sri Sivananda Theertha ಶ್ರೀ ವಾಸವಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಅಧ್ಯಾತ್ಮ ಮಂದಿರದ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಠಿ ಮುಂತಾದವರು ಉಪಸ್ಥಿತರಿದ್ದರು.