Wednesday, October 2, 2024
Wednesday, October 2, 2024

Klive Special Article ನೆನಪಿನಲ್ಲಿ ಉಳಿಯುವ ಮಹಾಬಲಯ್ಯನ ಕೋಟು ನಾಟಕ

Date:

Klive Special Article ದಿನನಿತ್ಯದ ಜಂಜಾಟದಲ್ಲಿ ಮನಸ್ಸಿಗೆ ಮುದ ನೀಡುವ ಕ್ಷಣಗಳು ಸಿಗುವುದು ರಾತ್ರಿ ದಿಂಬಿಗೆ ತಲೆ ಚಾಚಿದಾಗಲೇ. ಆಧುನಿಕ ಕಾಲದಲ್ಲಿ ಎಲ್ಲರೂ ಮೊಬೈಲ್, ಲಾಪ್ ಟಾಪ್ , ಗೇಮಿಂಗ್ ನಲ್ಲಿ ಮುಳುಗಿ ಹೋಗಿದ್ದಾರೆ. ದಿನನಿತ್ಯವೂ ಒಂದೇ ರೀತಿಯ ಕೆಲಸ ಮಾಡುವುದರಿಂದ ಬೇಸೆತ್ತಾಗ, ಹಾಡು ಕೇಳುವುದು, ಸಿನಿಮಾ ನೋಡುವುದು, ಪುಸ್ತಕ ಓದುವ ಮೂಲಕ ಮನಸ್ಸಿಗೆ ನಿರಾಳವೆನಿಸುವುದು ಸಾಮಾನ್ಯ.
ಆದರೆ ನಾಟಕಗಳನ್ನು ನೋಡುವ ಮೂಲಕ ಮನಸ್ಸಿಗೆ ಸಿಗುವ ನೆಮ್ಮದಿ ಪದಗಳಿಗೆ ನಿಲುಕದ್ದು.

ಹೀಗೆ ಮೊನ್ನೆ ಶಿವಮೊಗ್ಗ ರಂಗಾಯಣದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಏರ್ಪಡಿಸಿರುವ ವಿಷಯ ತಿಳಿಯಿತು. ಕೆಲಸದ ಒತ್ತಡದ ನಡುವೆಯೂ ನಾಟಕ ನೋಡಲೇಬೇಕು ಎನ್ನುವ ಉದ್ದೇಶದಿಂದ ಅಲ್ಲದೇ ಇದ್ದರೂ, ಪರಿಚಯಸ್ಥರೊಬ್ಬರು ನಾಟಕದಲ್ಲಿ ಅಭಿನಯಿಸುತ್ತಿದ್ದು ಅವರ ಅಭಿನಯ ನೋಡಲು ಸುವರ್ಣ ಸಂಸ್ಕೃತಿ ಭವನಕ್ಕೆ ಹೋದೆ. ನಾಟಕ ನೋಡಲು ಹೆಚ್ಚು ಜನ ಬರುವುದಿಲ್ಲ ಎಂದುಕೊಂಡು ಸಭಾಂಗಣದಲ್ಲಿ ಕಾಲಿಟ್ಟಾಗ ಅಲ್ಲಿ ಕಿಕ್ಕಿರಿದು ತುಂಬಿದ್ದ ಜನರನ್ನು ನೋಡಿ ಒಂದೇ ಸಮನೆ ಎದೆ ಝಲ್ ಎಂದಿತು. ತಪ್ಪಾದ ವಿಳಾಸಕ್ಕೆ ಬಂದೆನೆ? ಎಂದು ಮತ್ತೊಮ್ಮೆ ಹೊರಗೆ ಹೋಗಿ ಬೋರ್ಡ್ ನೋಡಿ ಖಚಿತಪಡಿಸಿಕೊಂಡು ಸಭಾಂಗಣದ ಒಳಗೆ ಹೋಗಿ ಕುಳಿತೆ. ನಾಟಕ ಶುರುವಾಗುವುದಕ್ಕೂ ಮುನ್ನ ಸಭಾಂಗಣದಲ್ಲಿ ಮೌನ ಆವರಿಸಿತ್ತು. ಯಾರೊಬ್ಬರೂ ಮಾತಾಡುತ್ತಿರಲಿಲ್ಲ. ಹತ್ತು ನಿಮಿಷ ಬಿಡುವಿದ್ದರೂ ಮೊಬೈಲ್ ಕೀಲಿಮಣೆಯ ಮೇಲೆ ಕೈಯಾಡಿಸುವ ಜನ ಅಂದು ಮಂತ್ರಮುಗ್ದರಂತೆ ನಾಟಕ ವೀಕ್ಷಿಸುತ್ತಿದ್ದರು..

ಆ ನಾಟಕದ ಹೆಸರೇ “ಮಹಾಬಲಯ್ಯನ ಕೋಟು”
ಈ ನಾಟಕದ ಮೂಲ ರಚನೆ ನಿಕೋಲಾಯ್ ಗೊಗೋಲ್ ಅವರು ಮಾಡಿದ್ದಾರೆ. ನಿಕೋಲಾಸ್ ಗೊಗೋಲ್ ಅವರು 1842 ರಲ್ಲಿ ರಚಿಸಿದ ಪ್ರಸಿದ್ದ ಸಣ್ಣ ಕಥೆ ” ಓವರ್ ಕೋಟ್” ನ ಕನ್ನಡ ರಂಗ ರೂಪಾಂತರವೇ ಮಹಾಬಲಯ್ಯನ ಕೋಟು”
ಮಹಾಬಲಯ್ಯ ಪಾತ್ರದಲ್ಲಿ ಚೇತನ್ ಕುಮಾರ್ ಸಿ.ರಾಯನಹಳ್ಳಿಯವರು ಅದ್ಬುತವಾಗಿ ನಟಿಸಿದ್ದಾರೆ.

ಮೂಡಲಮನೆ ಮಹಾಬಲ ಮಹಾಬಲೇಶಯ್ಯ ಸರ್ಕಾರಿ ಕಛೇರಿಯಲ್ಲಿ ಕಾಪಿ ಕಾರಕೂನನಾಗಿ ಕೆಲಸ ಮಾಡುತ್ತಿರುತ್ತಾನೆ. ಸಮಾಜದ ಆಗು ಹೋಗುಗಳ ಬಗ್ಗೆ ಆತನಿಗೆ ಚಿಂತೆಯಿಲ್ಲ. ತನ್ನ ಕೆಲಸವನ್ನ ನಿಷ್ಠೆಯಿಂದ ಮಾಡುತ್ತಾ ಜೀವನ ನಡೆಸುವ ಒಬ್ಬ ಸರಳ ಜೀವಿ.ಆತನಿಗೆ ದಿನಕ್ಕೆ ನೂರು ಕಾಪಿ ಬರೆಯುವುದು ಬಹುದೊಡ್ಡ ಕನಸು. ತಾನಾಯಿತು ತನ್ನ ಕೆಲಸವಾಗಿತು ಎಂಬಂತೆ ಜೀವನ ಸಾಗಿಸುವ ಅವನಿಗೆ ತನ್ನ ಸರ್ಕಾರಿ ಕಛೇರಿಯಲ್ಲಿರುವ ಸಹೋದ್ಯೋಗಿಗಳು ಮಹಾಬಲಯ್ಯನಿಗೆ ಉಪಟಳ ನೀಡುತ್ತಾ, ಆತನ ವೇಷ ಭೂಷಣ, ಆತನ ಕಾಪಿ ಬರೆಯುವ ಕೆಲಸಕ್ಕೆ ಹಂಗಿಸುತ್ತಿರುತ್ತಾರೆ. ಆದರೂ ಧೃತಿಗೆಡದೇ ಕೆಲಸ ಮಾಡುವ ಮಹಾಬಲಯ್ಯನಿಗೆ ತನ್ನ ಹಣದಲ್ಲೇ ಒಂದು ಕೋಟು ಹೋಲಿಸಿಕೊಳ್ಳಬೇಕು ಎನ್ನುವ ಮಹದಾಸೆ. ಕೊನೆಗೂ ಕೂಡಿಟ್ಟ ಹಣದಲ್ಲಿ ಕೋಟು ಹೋಲಿಸುತ್ತಾನೆ.

ಆದರೆ ಮುಚ್ಚಟೆಯಿಂದ ಹೋಲಿಸಿದ್ದ ಕೋಟು ಕಳುವಾಗುತ್ತದೆ. ಅದರಿಂದ ಮನನೊಂದು ಮಾನಸಿಕವಾಗಿ ಜರ್ಜರಿತನಾಗಿ ಸತ್ತು ಹೋಗುತ್ತಾನೆ. ನಂತರ ತನ್ನ ಕೋಟು ಕದ್ದವರನ್ನು ಭೂತವಾಗಿ ಕಾಡುತ್ತಾ ಕಂಡಕಂಡವರ ಕೋಟನ್ನು ಕಸಿದುಕೊಳ್ಳುತ್ತಾನೆ. ಮಲೆನಾಡಿನ ಆಗುಂಬೆಯ ಜೀವನಶೈಲಿ ಮತ್ತು ಪರಿಸರಕ್ಕೆ ಒಗ್ಗಿಸಿಕೊಂಡು ನಾಟಕ ತೆರೆದುಕೊಳ್ಳುತ್ತದೆ.

ಮಹಾಬಲಯ್ಯ ಅಂಬಮ್ಮ ಎಂಬ ವೃದ್ದೆಯ ಮನೆಯಲ್ಲಿ ಬಾಡಿಗೆಗೆ ಇರುತ್ತಾನೆ. ಅಂಬಮ್ಮನ ಪಾತ್ರದಲ್ಲಿ
ಮಂಜುನಾಥ ಸ್ವಾಮಿ ಎಸ್ ಅವರು ಬಣ್ಣ ಹಚ್ಚಿದ್ದಾರೆ. ನಾಟಕದಲ್ಲಿ ಬರುವ ವಿಭಿನ್ನ ಪಾತ್ರ ಇದಾಗಿದೆ. ಸದಾ ಮಹಾಬಲಯ್ಯನ ಒಳಿತನ್ನ ಬಯಸುತ್ತಾ , ಆತನಿಗಾದ ನೋವಲ್ಲಿ ನಾನೂ ಸಂಕಟಪಟುತ್ತಾ ನಾಟಕದ ಕೊನೆಯವರೂ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಯಾಗಿ ಮಂಜುನಾಥ ಸ್ವಾಮಿಯವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಾಟಕದಲ್ಲಿ ಒಟ್ಟು ಐದು ಕಾರಕೂನರಿದ್ದು, ಕಾರಕೂನ 1- ಚನ್ನೇಶ್ ಆಚಾರ್, ಕಾರಕೂನ 2- ನಾಗಶಯನ ಜಿ.ಎಸ್,
ಕಾರಕೂನ 3- ಪ್ರತೀಕ್ ಸಿ.ಎಂ,
ಕಾರಕೂನ 4 ಮತ್ತು ಬಂಗಿ ಬರ್ಮಣ್ಣಾ,
ಕಾರಕೂನ 5 : ಸುಧೀಂದ್ರ ಅವರು ಅಭಿನಯಿಸಿದ್ದಾರೆ.

ಕಾರಕೂನ -5 ರ ಪಾತ್ರಧಾರಿ ಸುಧೀಂದ್ರ ಅವರು ನಾಟಕದ ನಿರೂಪಕರಾಗಿದ್ದು, ಕಥೆಯು ಪ್ರೇಕ್ಷಕರ ಮನಸಿನಲ್ಲಿ ನಾಟುವಂತೆ ವಿಶ್ಲೇಷಿಸಿದ್ದಾರೆ.

ನಾಟಕದಲ್ಲಿ ಬರುವ ತುಕಾರಾಮನ ಪಾತ್ರವನ್ನು ಪ್ರವೀಣ್ ಎಸ್ ಹಾಲ್ಮತ್ತೂರು,
ಜಗಳೂರು ಜಗಳಗಂಟಿ ಪಾತ್ರವನ್ನು ದಿವ್ಯ ಅವರು ನಿಭಾಯಿಸಿದ್ದು, ಗಂಡ ಹೆಂಡತಿ ನಡುವಿನ ಜಗಳ, ತುಕಾರಾಮನ ಕಾಮಿಡಿ ನಾಟಕಕ್ಕೆ ಒಂದು ಪ್ಲಸ್ ಪಾಯಿಂಟ್ ಆಗಿ ರೂಪುಗೊಂಡಿದೆ. ಪ್ರತಿಯೊಬ್ಬ ಕಲಾವಿದರ ಅಭಿನಯವೂ ನೋಡುಗರನ್ನು ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಟಕದಲ್ಲಿ ಬರುವ ಗಿರಾಕಿ ಮತ್ತು ಪೋಲಿಸ್ ಆಗಿ ರಾಜು ಶಾಂತವೇರಿ,ಸಾಹೇಬರಾಗಿ ಕಾಂತೇಶ್ ಮೂರ್ತಿ,ಕಳ್ಳ,ವೈದ್ಯ, ಗುಮಾಸ್ತನಾಗಿ ಭರತ್ ಅವರು ಸಿಕ್ಕ ಪಾತ್ರವೇ ಆದರೂ ಕಲಾವಿದರು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ.

ರಂಗ-ರೂಪಾಂತರ ಮತ್ತು ನಿರ್ದೇಶನ:
ಪ್ರೊ.ಎಸ್ ಸಿ.ಗೌರಿಶಂಕರ್, ಸಂಗೀತವನ್ನು ಶ್ರೀ ಪಾದ ತೀರ್ಥಹಳ್ಳಿ ಮತ್ತು ಶಿವಕುಮಾರ್ ತೀರ್ಥಹಳ್ಳಿ, ಬೆಳಕು: ಶಂಕರ್ ಬೆಳಲಕಟ್ಟೆ
ವಸ್ತ್ರ ವಿನ್ಯಾಸ ಮತ್ತು ಪ್ರಸಾಧನ: ಮಂಜುನಾಥ ಸ್ವಾಮಿ. ಎಸ್
ರಂಗಸಜ್ಚಿಕೆ: ನಾಗಶಯನ ಜಿ.ಎಸ್
ನಿರ್ವಹಣೆ: ಪ್ರತೀಕ್ ಸಿ.ಎಂ ಇವರ ನೇತೃತ್ವದಲ್ಲಿ ನೆರವೇರಿದೆ.

ನಾಟಕಗಳು ಸಿನಿಮಾಗಳಿಗಿಂತ ವಿಭಿನ್ನ. ಇಲ್ಲಿ ರೀ ಟೇಕ್ ಗಳು ಇರುವುದಿಲ್ಲ. ಯಾವುದೇ ಗ್ರಾಫಿಕ್ಸ್ ಗಳು, ಆಧುನಿಕ ತಂತ್ರಜ್ಞಾನವನ್ನು ಬಳಸಿ ದೃಶ್ಯವನ್ನು ಪ್ರಸ್ತುತ ಪಡಿಸಲು ಬರುವುದಿಲ್ಲ. ನಾಟಕಗಳಲ್ಲಿನ ಅಭಿನಯವು ನೈಜವಾಗಿರುತ್ತವೆ.

Klive Special Article ಇಲ್ಲಿ ಪ್ರತಿ ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರೇ ದೃಶ್ಯ ಮತ್ತು ರಂಗ ಪರಿಕರಗಳ ಬದಲಾವಣೆಯನ್ನು ಮಾಡಿಕೊಂಡು ಅಭಿನಯಿಸುವುದು ವಿಶೇಷ. ಮಹಾಬಲಯ್ಯನ ಕೋಟು ನಾಟಕ ನೆನಪಿನಲ್ಲಿ ಉಳಿಯುವ ನಾಟಕವಾಗಿ ರೂಪುಗೊಂಡಿದೆ. ಇಲ್ಲಿ ಕಲಾವಿದರ ಶ್ರಮ ಬಹಳಷ್ಟಿರುತ್ತದೆ. ಹಾಗೆಯೇ ಬಹುತೇಕ ನಾಟಕಗಳು ಉಚಿತವಾಗಿ ಪ್ರದರ್ಶನಗೊಳ್ಳುತ್ತವೆ.
ಶಿವಮೊಗ್ಗದ ಹೆಸರಾಂತ ನಿರ್ದೇಶಕ, ನಟ,ನಾಟಕ ರಚನಾಕಾರ,ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪೋ.ಎಸ್. ಸಿ.ಗೌರಿಶಂಕರ ಅವರ ಗೆಳಯರು ಸೇರಿಕೊಂಡು ರಚನೆ ಮತ್ತು ನಿರ್ದೇಶನದ ಮಾಡುವ ನಾಟಕಗಳು ನಾಡಿನಾದ್ಯಂತ ಇನ್ನಷ್ಟು ಬಿತ್ತರಗೊಳ್ಳಲಿ.
ಮಹಾಬಲಯ್ಯ ಕೋಟು
ನಾಟಕ ಇನ್ನಷ್ಟು ಪ್ರದರ್ಶನಗಳನ್ನು ಕಾಣಲಿ….

ಬರಹ: ಅಂಜುಮ್ ಬಿ.ಎಸ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು...

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...