ದಾವಣಗೆರೆಯಲ್ಲಿ ಕೃಷಿ ವಿಚಕ್ಷಣಾ ದಳದ ದಾಳಿಗೆ ನಕಲಿ ಸಾವಯವ ಗೊಬ್ಬರ ಮಾರಾಟ ಮಾಡುತ್ತಿದ್ದ ಓರ್ವ ಬಲೆಗೆ ಬಿದ್ದಿದ್ದಾನೆ.
ರೈತರ ದೂರಿನನ್ವಯ ದಾವಣಗೆರೆ ತಾಲೂಕಿನ ರಾಮಪುರ ಗ್ರಾಮದ ಜಗಳೂರು ರಸ್ತೆಯಲ್ಲಿ ಸಾವಯವ ಗೊಬ್ಬರವೆಂದು ನಕಲಿ ಪೊಟ್ಯಾಷಿಯಂ ಗೊಬ್ಬರವನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು.ಆ ಲಾರಿಯನ್ನು ಪತ್ತೆ ಮಾಡಿದ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಸುಮಾರು 2.65ಲಕ್ಷ ರೂ.ಮೌಲ್ಯದ ನಕಲಿ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.

ಲಾರಿ ಚಾಲಕನನ್ನು ಲಾರಿಯ ಬಗ್ಗೆ ಹಾಗೂ ಲಾರಿಯಲ್ಲಿರುವ ಅನುಮಾನಾಸ್ಪದವಾದ ರಸಗೊಬ್ಬರದ ಬಗ್ಗೆ ವಿಚಾರಿಸಿದಾಗ ಲಾರಿಯು ಮೈಸೂರಿನಿಂದ ಬಂದಿದ್ದು, ಇದರಲ್ಲಿ ಒಟ್ಟು 260 ಚೀಲ ರಸಗೊಬ್ಬರ ಇರುವುದಾಗಿ ತಿಳಿದು ಬಂತು. ರಸಗೊಬ್ಬರದ ಕುರಿತು ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆರ್ಗಾನಿಕ್ ಮನ್ಸೂರ್ ದಾವಣಗೆರೆ ಇವರ ಹೆಸರಿನಲ್ಲಿ ನಮೂದಿಸಿ 200 ಚೀಲ ಎಂದು ಬಿಲ್ ಮಾಡಿದ್ದು ಹಾಗೂ
ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಅನುಮಾನಾಸ್ಪದ ರಸಗೊಬ್ಬರದ ಚೀಲಗಳು ಇರುವುದು ಕಂಡು ಬಂದಿದೆ. ಅಂತಹ ಚೀಲದ ಮೇಲೆ 60 % K2O ಎಂದು ನಮೂದಿಸಿದ್ದು, ಇಂಡಿಯನ್ ಫೋಟ್ಯಾಷ್ ಲಿಮಿಟೆಡ್ ಎಂಬ ಕಂಪನಿಯಿಂದ ತಯಾರಾಗಿದೆ ಎಂದು ನಮೂದಿಸಿರುವುದು ಕಂಡು ಬಂದಿರುತ್ತದೆ.ಆದರೆ ಈ ರಸಗೊಬ್ಬರಲ್ಲಿ , ಯಾವುದೇ ರೀತಿಯ ದಾಖಲೆಗಳು ಇರುವುದಿಲ್ಲ.ಲಾರಿ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಾಖಲೆಗಳನ್ನು ಪರಿಶೀಲಿಸಲಾಯಿತು.
ಈ ಸಂಬಂಧ ದಾವಣಗೆರೆ ಗ್ರಾಮೀಣ ವೃತ್ತ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪೊಲೀಸರು ಆರೋಪಿ ಚಾಲಕ ಮಧುಸೂದನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ದಾಳಿಯಲ್ಲಿ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಾದ ಸುನೀಲ್,ಗೋವರ್ಧನ್ ಪಾಲ್ಗೊಂಡಿದ್ದರು.