ಭಾರತದಲ್ಲಿ ಇದುವರೆಗೂ ಓಮೈಕ್ರಾನ್ ರೂಪಾಂತರ ತಳಿಯಿಂದ ಕೋವಿಡ್ ಪ್ರಕರಣ ದೃಢಪಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶಗಳಿಂದ ಬಂದವರಲ್ಲಿ ಕೋವಿಡ್ ದೃಢಪಟ್ಟವರ ಗಂಟಲು ಮತ್ತು ಮೂಗಿನ ದ್ರವವನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಕಳೆದವಾರ ಮಹಾರಾಷ್ಟ್ರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ತಗುಲಿದೆ. ಆದರೆ ಅವರಿಗೆ ಓಮೈಕ್ರಾನ್ ರೂಪಾಂತರ ತಳಿಯಿಂದ ಕೋವಿಡ್ ಬಂದಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ವೈರಾಣು ಸಂರಚನೆಗೆ ಕಳುಹಿಸಲಾಗಿದೆ. ಅದರ ವರದಿ ಬರಲು ಒಂದು ವಾರ ಬೇಕಾಗುತ್ತದೆ. ಆ ವ್ಯಕ್ತಿಯನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.
ಆ ವ್ಯಕ್ತಿಯು ತನ್ನ ಕುಟುಂಬದ ಇನ್ನೂ 5 ಜನರ ಜೊತೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದರು. 6ಜನರು ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಒಬ್ಬರಲ್ಲಿ ಮಾತ್ರ ಕೋವಿಡ್ ಇರುವುದು ಪತ್ತೆಯಾಗಿದೆ. ವ್ಯಕ್ತಿಯಲ್ಲಿ ಕೋವಿಡ್ ನ ಯಾವುದೇ ಲಕ್ಷಣ ಇಲ್ಲ. ಆದರೆ ಮಾನಸಿಕವಾಗಿ ಅವರು ಕುಗ್ಗಿದ್ದಾರೆ. ಅವರಿಗೆ ಆಪ್ತಸಮಾಲೋಚನೆ ನೀಡಲಾಗುತ್ತದೆ. ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಅವರ ವಾಪಾಸಾದ ದಿನದಿಂದ ಅವರು ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.