ಯುವ ಸಮುದಾಯದವರಲ್ಲಿ ಪ್ರೇರಣೆ ತುಂಬಬಲ್ಲ ಸ್ಫೂರ್ತಿಯುತ ಅಂಶಗಳ ಶಕ್ತಿಯ ಸಾಧನವಾಗಿ ಕೆ.ಎ.ದಯಾನಂದ ಅವರ “ಹಾದಿಗಲ್ಲು” ಕೃತಿ ಮೂಡಿಬಂದಿದೆ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಮಾನ್ಯ ಕೆ.ಎ.ದಯಾನಂದ ಅವರ ಆತ್ಮವೃತ್ತಾಂಶ “ಹಾದಿಗಲ್ಲು” ಪುಸ್ತಕದ 7ನೇ ಮುದ್ರಣ ಲೋಕಾರ್ಪಣೆ ಹಾಗೂ ಕೃತಿ ಕುರಿತು “ಸಮಾನ ಮನಸ್ಕರೊಂದಿಗೆ ಸಂವಾದ”ಕಾರ್ಯಕ್ರಮ ನಡೆಯಿತು.
ಬಡ ಕುಟುಂಬದಲ್ಲಿ ಜನಿಸಿ ಕಷ್ಟದಲ್ಲಿಯೇ ಜೀವನ ನಡೆಸುವ ಜತೆಯಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು. ಆದರೆ ಇವರು ನಡೆದು ಬಂದ ಹಾದಿಯು ಅನೇಕ ಸವಾಲುಗಳನ್ನು ದಾಟಿದ ಸಾಹಸಯಾತ್ರೆಯ ಸಾಧ್ಯತೆಯನ್ನು ತೆರೆದಿಡುತ್ತದೆ. ಏನೇ ಅಡೆತಡೆ ಬಂದರೂ ಅದನ್ನೆಲ್ಲಾ ಮೀರಿ ಸಾಧಿಸುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಎಲ್ಲರೂ ಕೃತಿಯನ್ನು ಓದುವ ಮೂಲಕ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವು ವ್ಯಕ್ತಿಗಳ ಆತ್ಮಕತೆಯೂ ಹುಟ್ಟಿದಾಗಲೇ ಯಶಸ್ಸು ದೊರೆಯುವುದು ನಿಶ್ಚಿತ ಎಂಬಂತೆ ವರ್ಣಿಸುವ, ವೈಭವೀಕರಿಸುವ ರೀತಿಯಲ್ಲಿರುತ್ತದೆ. ಆದರೆ ಕೆ.ಎ. ದಯಾನಂದ ಅವರ ಹಾದಿಗಲ್ಲು ಕೃತಿಯಲ್ಲಿ ಬಾಲ್ಯ, ವಿದ್ಯಾರ್ಥಿ ಹಂತದಿಂದ ಹಿಡಿದು ಜೀವನದಲ್ಲಿ ಹಂತಹಂತವಾಗಿ ನೋವಿನ ಸರಮಾಲೆ ಎದುರಿಸಿ ಗೆಲುವಿನ ದಾರಿಗೆ ಬರುವ ಕಥನವನ್ನು ಕಾಣಬಹುದಾಗಿದೆ. ಈ ಪುಸ್ತಕವು ಪ್ರಾಮಾಣಿಕತೆ, ಕ್ರಿಯಾತ್ಮಕ ಆಲೋಚನೆಗಳ ಬಗ್ಗೆ ಪ್ರೇರಣೆ ಒದಗಿಸುತ್ತದೆ ಎಂದರು.
ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ.ದಯಾನಂದ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನನ್ನ ವೃತ್ತಿಯ ಆರಂಭದ ಅವಧಿಯಲ್ಲೇ ಮಾಡುತ್ತಿದ್ದೆ. ನಂತರ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದೆ. ಯುವಜನರಿಗೆ ಆತ್ಮಸ್ಥೈರ್ಯ ತುಂಬಲು ಸ್ಫೂರ್ತಿಯುತ ಅಂಶಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ನಡೆಸಿದೆ. ಕೊರೊನಾ ಲಾಕ್ಡೌನ್ ಆರಂಭದಲ್ಲಿ ಪುಸ್ತಕ ಪೂರ್ಣಗೊಳಿಸಿದೆ. ಇದೀಗ 7ನೇ ಮುದ್ರಣ ಕಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ, ರಘುಸಮರ್ಥ ನಾಡಿಗ್, ಅಭಿ, ರೈತ ದುರ್ಗಪ್ಪ ಅಂಗಡಿ, ಸಮನ್ವಯ ಟ್ರಸ್ಟ್ ಸ್ವಯಂಸೇವಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.