ಶರಾವತಿ ವಿದ್ಯುತ್ ಯೋಜನೆ ನಾಡಿಗೇ ಬೆಳಕು ನೀಡಿತು.
ಆದರೆ ಮುಳುಗಡೆ ಪ್ರದೇಶದಲ್ಲಿದ್ದ ಜೀವಗಳಿಗೆ ಬಾಳನ್ನೇ ನೀಡಲಾಗಿಲ್ಲ.
ಮನೆಮಾರು ತ್ಯಾಗಮಾಡಿದವರು ಇನ್ನೂ ಅಲೆಮಾರಿಗಳಂತೆ ಪರಿಹಾರಕ್ಕಾಗಿ ಅಲೆಯುವಂತಾಗಿದೆ.
ಎಷ್ಟೋ ಕುಟುಂಬಗಳ ಹಿರಿಯರು ಪರಿಹಾರದ ಕನಸು ಕಾಣುತ್ತಲೇ ಸಾವನ್ನಪ್ಪಿದ್ದಾರೆ. ಈ ಸಮಸ್ಯೆಯ ಪರಿಹಾರ ಕುರಿತು ಹೊಸನಗರ ತಾಲೂಕಿನ ಮುಡುಗೊಪ್ಪ ದಲ್ಲಿ ಸಮಾಲೋಚನೆ ಸಭೆ ನಡೆಯಿತು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಐದು ದಶಕಗಳು ಕಳೆದರೂ ಜೀವಂತವಾಗಿವೆ. ಚಕ್ರಾ, ಸಾವೇಹಕ್ಲು, ವಾರಾಹಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಜಿಲ್ಲಾಧಿಕಾರಿ ಅವರಿಗೆ ಇಡೀ ಜಿಲ್ಲೆಯನ್ನು ನಿಭಾಯಿಸುವ ಜೊತೆಗೆ ಈ ಬಗ್ಗೆಯೂ ಗಮನ ನೀಡುವುದು ಕಷ್ಟ. ಮುಳುಗಡೆ, ಪುನರ್ವಸತಿ, ಪರಿಹಾರ ಹೀಗೆ ಹಲವಾರು ಸಮಸ್ಯೆಗಳಿವೆ. ಕಂದಾಯ, ಅರಣ್ಯ, ಕೆಪಿಸಿ ಸಮನ್ವಯತೆ ಸಾಧಿಸಿಕೊಂಡು, ಸರ್ಕಾರದ ಮಟ್ಟದಲ್ಲಿ ನೇರವಾಗಿ ವ್ಯವಹರಿಸುವಂತೆ ಉನ್ನತ ಅಧಿಕಾರಿಯನ್ನು ನೇಮಿಸಬೇಕು ಎಂದು ನಗರದ ಹೋಬಳಿ ನಾಗರಿಕರ ಹೋರಾಟ ವೇದಿಕೆ ಸಂಚಾಲಕ ವಿ.ಜಿ. ಶ್ರೀಕರ್ ಒತ್ತಾಯಿಸಿದ್ದಾರೆ.
ಸಮಿತಿಗೆ ಪ್ರಾದೇಶಿಕ ಆಯುಕ್ತ ಕೇಡರ್ ಅಧಿಕಾರಿಯನ್ನು ನೇಮಿಸಬೇಕು. ಅವರಿಗೆ ಅಧಿಕಾರ ಚಲಾಯಿಸುವ ಸ್ವತಂತ್ರವನ್ನು ನೀಡಬೇಕು. ತಾಲೂಕಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಈ ನಿರ್ಣಯವನ್ನು ತೆಗೆದುಕೊಂಡರು.
ಈ ಕಾರ್ಯಕ್ರಮದಲ್ಲಿ ರೈತ ಮುಖಂಡ ಜಿ.ವಿ. ರವೀಂದ್ರ, ಎಪಿಎಂಸಿ ಸದಸ್ಯ ಕಣ್ಕಿ ಮಹೇಶ್, ನಿತಿನ್ ಮಳಲಿ, ರಾಜೇಶ್, ಎಸ್.ಎಂ ಹರೀಶ್ ಇನ್ನು ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.