ಚಿಕ್ಕಮಗಳೂರು: ಭೀಮ್ ಕೋರೆಂಗಾವ್ ವಿಜಯೋತ್ಸವ ಪ್ರಯುಕ್ತ ಭೀಮ್ ಕೋರೆಂಗಾವ್ ಆಚರಣಾ ಸಮಿತಿ, ಜಿಲ್ಲಾ ಭೀಮ್ ಆರ್ಮಿ ಹಾಗೂ ಅನೇಕ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಬೈಕ್ ಹಾಗೂ ಆಟೋ ಸೇರಿದಂತೆ ನೂರಾರು ವಾಹನಗಳ ಮೂಲಕ ನಗರದ ಪ್ರಮುಖ ರಸ್ತೆಯಲ್ಲಿ ಮುಖಂಡರುಗಳು ವಿಜಯೋತ್ಸವದ ಮೆರವಣಿಗೆ ನಡೆಸಿದರು.
ಮೆರವಣಿಗೆಯು ತೊಂಗರಿಹಂಕಲ್ ವೃತ್ತದಿಂದ ಪ್ರಾರಂಭಗೊಂಡು ಐ.ಜಿ.ರಸ್ತೆ, ಮಲ್ಲಂದೂರು, ವಿಜಯಪುರ, ರತ್ನಗಿರಿ ರಸ್ತೆ, ಕೆಇಬಿ, ಹನುಮಂತಪ್ಪ ಸರ್ಕಲ್, ಎಂ.ಜಿ.ರಸ್ತೆ ಮುಖಾಂತರ ಆಜಾದ್ ಪಾರ್ಕ್ನಲ್ಲಿ ಮುಕ್ತಾಯವಾಯಿತು.
ಈ ವೇಳೆ ಮಾತನಾಡಿದ ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಜ.4 ರಂದು ಮಧ್ಯಾಹ್ನ 2 ಗಂಟೆಗೆ 205ನೇ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಕೆಇಬಿ ಕಚೇರಿಯಿಂದ ಎಂ.ಜಿ.ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಆಜಾದ್ ಪಾರ್ಕ್ನಲ್ಲಿ ಸಮಾವೇಶಗೊಂಡು ಬೃಹತ್ ಬಹಿರಂಗ ಸಭೆ ನಡೆಯಲಿದೆ. ಕಾರ್ಯಕ್ರಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ್, ಮೈಸೂರಿನ ಉರಿಪೆದ್ದ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರೋ. ಮಹೇಂದ್ರ ಚಂದ್ರಗುರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಖಲಂದರ್, ಮಾಜಿ ಸದಸ್ಯ ಜಗದೀಶ್, ಕಾಂಗ್ರೆಸ್ ಮುಖಂಡ ನಯಾಜ್, ಮುಖಂಡರುಗಳಾದ ವಿಜಯ್, ಭರತ್, ಉಪ್ಪಳ್ಳಿ ರಾಜು, ವಕೀಲ ಅನಿಲ್ಕುಮಾರ್, ರಮೇಶ್, ಚಿದಾನಂದ್, ಪ್ರವೀಣ್, ಧರ್ಮೇಶ್, ರಾಕೇಶ್ ಮತ್ತಿತರರು ಹಾಜರಿದ್ದರು.