ನೇಕಾರ ಸಮುದಾಯದ ಎಲ್ಲಾ ಒಳಪಂಗಡಗಳು ಒಂದಾಗುವು ದರೊಂದಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸದೃಢರಾಗಲು ಪಣ ತೊಡಬೇಕು ಎಂದು ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಅವರು ಹೇಳಿದರು.
ಚಿಕ್ಕಮಗಳೂರಿನ, ಕುಂಬಾರಬೀದಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ನೇಕಾರ ಒಕ್ಕೂಟದ ಸಮಾವೇಶ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ಫೆಬ್ರವರಿಯಲ್ಲಿ ಜಿಲ್ಲಾ ಮಟ್ಟದಲ್ಲಿ 4ನೇ ನೇಕಾರ ಜನಾಂಗದ ಬೃಹತ್ ಸಮಾವೇಶ ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗುತ್ತದೆ.
ಜೊತೆಗೆ ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ನೇಕಾರ ವರ್ಗದದವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿ ಕೊಡಲು ಒತ್ತಾಯಿಸಲಾಗುತ್ತದೆ ಎಂದರು.
ಜನಾಂಗದಲ್ಲಿ ಪ್ರಸ್ತುತ ಶಿಕ್ಷಣ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿವೆ. ಇತರೆ ಸಮುದಾಯಗಳಿಗೆ ಅಭಿವೃದ್ದಿ ನಿಗಮಗಳು ಲಭಿಸಿರುವುದು ಸ್ವಾಗತಾರ್ಹ. ಅದೇ ರೀತಿ ನೇಕಾರ ಸಮು ದಾಯಕ್ಕೂ ಅಭಿವೃದ್ದಿ ನಿಗಮಗಳು ಅವಶ್ಯವಿರುವ ಹಿನ್ನೆಲೆಯಲ್ಲಿ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿ ಗಳು ನಿಗಮ ಸ್ಥಾಪಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ರಾಜ್ಯದ 224 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ನೇಕಾರ ಸಮುದಾಯದವರಿಗೆ ಜಿಲ್ಲೆಯಲ್ಲಿ ಟಿಕೇಟ್ ನೀಡಿರುವುದು ಜೆಡಿಎಸ್ ಪಕ್ಷ. ಅದೇ ರೀತಿ ಆಯಾ ಜಿಲ್ಲಾವಾರುಗಳಲ್ಲಿ ಜನತೆಗೆ ಸ್ಪಂದಿಸುವ ನೇಕಾರರಿಗೆ ಪಕ್ಷಾತೀತವಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಒದಗಿಸಬೇಕು ಎಂದು ತಿಳಿಸಿದರು.
ನೇಕಾರ ಜನಾಂಗವು ಆಡಳಿತ ಪಕ್ಷಕ್ಕೆ ಅತಿಹೆಚ್ಚು ಬೆಂಬಲ ಸೂಚಿಸುತ್ತಾ ಇದುವರೆಗೂ ಬಂದಿದ್ದು ಮುಂದಿನ ಚುನಾವಣೆಗೆ ಆಕಾಂಕ್ಷಿಗಳಿಗೆ ಪಕ್ಷಾತೀತವಾಗಿ ಟಿಕೇಟ್ ನೀಡಿದ್ದಲ್ಲಿ ಮಾತ್ರ ಜನಾಂಗವು ರಾಜಕೀಯ ಹಾಗೂ ಆರ್ಥಿಕ ಸಬಲರಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಎಲ್.ಶೇಖರಪ್ಪ ಮಾತನಾಡಿ ಹಾಸನ, ಕೊಡಗು ಹಾಗೂ ಚಿಕ್ಕಮಗ ಳೂರು ಜಿಲ್ಲಾಧ್ಯಕ್ಷರೊಂದಿಗೆ ಮುಂದಿನ ಸಮಾವೇಶವನ್ನು ಹಮ್ಮಿಕೊಳ್ಳುವ ಸಲುವಾಗಿ ಸಭೆ ನಡೆಸಲಾಗಿದೆ. ಹಿಂದುಳಿದಿರುವ ನೇಕಾರ ಜನಾಂಗದವರಿಗೆ ಯಾವುದೇ ಪಕ್ಷ ಗುರುತಿಸಿ ಸ್ಪರ್ಧಿಸಲು ಅವಕಾಶ ನೀಡಲಿದೆಯೋ ಅಂತಹ ಪಕ್ಷಕ್ಕೆ ಜನಾಂಗದ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಶಿವಪ್ಪಶೆಟ್ಟಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶ್ರೀಮತಿ ಉಮಾ ಜಗದೀಶ್, ಜಿಲ್ಲಾ ಗೌರವಾಧ್ಯಕ್ಷ ಅರೇಕಲ್ಲು ಪ್ರಕಾಶ್, ಕಾರ್ಯದರ್ಶಿ ಶಿವರಾಮ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪರಾಜೇಂದ್ರ, ಕಡೂರು ತಾಲ್ಲೂಕು ಅಧ್ಯಕ್ಷ ಶಂಕರಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಿಕ್ಕಪಟ್ಟಣಗೆರೆ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.